ಮನೆ ರಾಜ್ಯ ರಾಜ್ಯಪಾಲರ ಭಾಷಣ ಸರ್ಕಾರದ ಯಶೋಗಾಥೆಯ ಸಂಯಕ್ ನೋಟ: ಈಶ್ವರ ಖಂಡ್ರೆ

ರಾಜ್ಯಪಾಲರ ಭಾಷಣ ಸರ್ಕಾರದ ಯಶೋಗಾಥೆಯ ಸಂಯಕ್ ನೋಟ: ಈಶ್ವರ ಖಂಡ್ರೆ

0

ಬೆಂಗಳೂರು: ರಾಜ್ಯಪಾಲರು ಉಭಯ ಸದನ ಉದ್ದೇಶಿಸಿ ಮಾಡಿರುವ ಭಾಷಣ ಸರ್ಕಾರದ ಯಶೋಗಾಥೆಯ ಸಂಯಕ್ ನೋಟವನ್ನು ಸಮರ್ಥವಾಗಿ ತೆರೆದಿಟ್ಟಿರುವುದಲ್ಲದೇ, ರಾಜ್ಯದ  ಅಭಿವೃದ್ಧಿಗೆ ದಿಕ್ಸೂಚಿಯಾಗಿದೆ  ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ  ಈಶ್ವರ ಖಂಡ್ರೆ ಹೇಳಿದ್ದಾರೆ.

ರಾಜ್ಯಪಾಲರ ಭಾಷಣಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ನಾಡಿನ ಸಮಗ್ರ ಅಭಿವೃದ್ಧಿಗೆ ಅದರಲ್ಲೂ ವಿಶೇಷವಾಗಿ ಬಡಜನರ ಕಲ್ಯಾಣಕ್ಕಾಗಿ ಅನುಷ್ಠಾನಕ್ಕೆ ತಂದಿರುವ 5 ಗ್ಯಾರಂಟಿಗಳು ಸುಗಮ ಜೀವನಕ್ಕೆ ಎಡೆ ಮಾಡಿಕೊಟ್ಟಿವೆ ಎಂಬುದನ್ನು ರಾಜ್ಯಪಾಲರ ಭಾಷಣ ಸ್ಪಷ್ಟವಾಗಿ ಸಾರಿದೆ.

ನುಡಿದಂತೆ ನಡೆದಿರುವ ಸರ್ಕಾರ, ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ ಮಾಡಿದೆ. ಇದು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಮಹಿಳೆಯರು ಹಾಗೂ ಯುವಜನರ ಸಬಲೀಕರಣಕ್ಕೆ ದೀರ್ಘಕಾಲದವರೆಗೆ ಪ್ರಭಾವ ಬೀರಲಿದೆ.

ಜನರ ನಂಬಿಕೆ ವಿಶ್ವಾಸಕ್ಕೆ ಚ್ಯುತಿ ಆಗದಂತೆ ಗ್ಯಾರಂಟಿಯನ್ನು ಅನುಷ್ಠಾನ ಮಾಡಿರುವ ಸರ್ಕಾರ ರಾಜ್ಯದ 7 ಕೋಟಿ ಜನರ ಬಾಳಿನಲ್ಲಿ ಬದಲಾವಣೆಯನ್ನು ತಂದಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ ಆಗಬೇಕು ಎಂಬುದು ಸರ್ಕಾರದ ಆಶಯ ಎಂಬುದನ್ನು ರಾಜ್ಯಪಾಲರ ಭಾಷಣದಲ್ಲಿ ಪ್ರತಿಪಾದಿಸಲಾಗಿದ್ದು, ಜಾತಿ, ಧರ್ಮದ ಭೇದ ಭಾವ ಇಲ್ಲದೆ ರಾಜ್ಯದ ಎಲ್ಲರೂ ಸುಖ, ಶಾಂತಿ, ನೆಮ್ಮದಿಯಿಂದ ಬಾಳುವಂತಹ ವಾತಾವರಣ ಸೃಷ್ಟಿಸುವ ಭರವಸೆಯನ್ನು ರಾಜ್ಯಪಾಲರ ಭಾಷಣದ ಮೂಲಕ ನೀಡಲಾಗಿದೆ.

ರೈತರು ಈ ದೇಶದ ಬೆನ್ನೆಲುಬು. ಸರ್ಕಾರದ ಗ್ಯಾರಂಟಿ ಮತ್ತು ಕಲ್ಯಾಣ ಕ್ರಮಗಳಿಂದಾಗಿ ಅನ್ನದಾತರ ಆತ್ಮಹತ್ಯೆ ಕಳೆದ ವರ್ಷದಿಂದ  ಇಳಿಮುಖವಾಗಿದೆ. ರೈತರು ಯಾವುದೇ ಪರಿಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಸರ್ಕಾರ ರೈತರ ಬೆಂಬಲಕ್ಕೆ ನಿಂತಿದೆ. ಬರ ನಿರ್ವಹಣೆಗೆ ಶಾಸಕರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಮಾಡಿರುವುದು ಸರ್ಕಾರದ ಬದ್ಧತೆ ಪ್ರದರ್ಶಿಸುತ್ತದೆ.

ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಇದು ಪ್ರಗತಿಗೆ ಮೈಲಿಗಲ್ಲಾಗಲಿದೆ.  ಭವಿಷ್ಯದತ್ತ ದೃಷ್ಟಿಯನ್ನು ಈ ಭಾಷಣದ ಮೂಲಕ ಸರ್ಕಾರ ಬಿಂಬಿಸಿದೆ.