ಮನೆ ರಾಜಕೀಯ ದೆಹಲಿಯಲ್ಲಿ ರೈತರ ಪ್ರತಿಭಟನೆ ಕಾಂಗ್ರೆಸ್‌ ಪೋಷಿತ, ಟೂಲ್‌ ಕಿಟ್‌ ನ ಭಾಗ: ವಿಪಕ್ಷ ನಾಯಕ ಆರ್.ಅಶೋಕ

ದೆಹಲಿಯಲ್ಲಿ ರೈತರ ಪ್ರತಿಭಟನೆ ಕಾಂಗ್ರೆಸ್‌ ಪೋಷಿತ, ಟೂಲ್‌ ಕಿಟ್‌ ನ ಭಾಗ: ವಿಪಕ್ಷ ನಾಯಕ ಆರ್.ಅಶೋಕ

0

ಬೆಂಗಳೂರು: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕಾಂಗ್ರೆಸ್‌ ಪೋಷಿತವಾಗಿದ್ದು, ಹಿಂದಿನಂತೆಯೇ ಟೂಲ್‌ಕಿಟ್‌ನ ಒಂದು ಭಾಗವಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.

ಈ ಕುರಿತು ಮಾತನಾಡಿದ ಅವರು, ಈ ಹಿಂದೆ ಕೇಂದ್ರ ಸರ್ಕಾರ ಜಾರಿ ಮಾಡಿದ್ದ ಕೃಷಿ ಮಸೂದೆಗಳ ವಿಚಾರದಲ್ಲೂ ಕಾಂಗ್ರೆಸ್‌ ಇದೇ ಟೂಲ್‌ಕಿಟ್‌ ತಂತ್ರವನ್ನು ಅನುಸರಿಸಿತ್ತು. ಹಿಂದಿನ ಯುಪಿಎ ಸರ್ಕಾರಕ್ಕಿಂತ ಹೆಚ್ಚು ನೆರವನ್ನು ರೈತರಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರ ತಂದಿದ್ದ ರೈತ ಪರ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ರೈತ ವಿರೋಧಿ ಮನೋಭಾವದ ಕಾಂಗ್ರೆಸ್ ಈಗ ಪ್ರತಿಭಟನೆಯ ನಾಟಕ ಶುರು ಮಾಡಿದೆ ಎಂದು ದೂರಿದರು.

ಸ್ವಾಮಿನಾಥನ್ ವರದಿ ತಿರಸ್ಕೃತ

ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಗ್ಯಾರಂಟಿ ನೀಡುತ್ತೇವೆಂದು ಕಾಂಗ್ರೆಸ್ ಬುರುಡೆ ಬಿಟ್ಟಿದೆ. 2010 ರಲ್ಲಿ ತಮ್ಮದೇ ಯುಪಿಎ ಸರ್ಕಾರ ಇದ್ದಾಗ ಡಾ.ಎಂ.ಎಸ್.ಸ್ವಾಮಿನಾಥನ್ ಅವರು ಕನಿಷ್ಠ ಬೆಂಬಲ ಬೆಲೆ ಬಗ್ಗೆ ನೀಡಿದ್ದ ವರದಿಯನ್ನು ಸಾರಾಸಗಟಾಗಿ ತಿರಸ್ಕಾರ ಮಾಡಿತ್ತು ಎಂದು ಆರ್.ಅಶೋಕ ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಸೋಲುವುದು ಗ್ಯಾರಂಟಿ ಎಂದು ಕಾಂಗ್ರೆಸ್ ನಿಶ್ಚಯ ಮಾಡಿಕೊಂಡಿದೆ. ಹೇಗಿದ್ದರೂ ಅಧಿಕಾರಕ್ಕೆ ಬರುವುದಿಲ್ಲ ಎಂದು ರಾಹುಲ್‌ ಗಾಂಧಿ ಮತ್ತಿತರ ಕಾಂಗ್ರೆಸ್‌ ನಾಯಕರು ಬೇಕಾಬಿಟ್ಟಿ ಹೇಳಿಕೆ ನೀಡುವ ಮೂಲಕ ರೈತರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ರೈತರ ಆದಾಯ ಹೆಚ್ಚಿಸಲು, ಅನ್ನದಾತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿಸಲು ಯಾರಾದರೂ ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದರೆ ಅದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸರ್ಕಾರ ಮಾತ್ರ ಎಂದು ಹೇಳಿದರು.

ಎಂಎಸ್‌ ಪಿ ದುಪ್ಪಟ್ಟು

2014-15 ರಲ್ಲಿ ಮನಮೋಹನ್ ಸಿಂಗ್ ಅವರ ಸರ್ಕಾರ ರೈತರಿಗೆ ನೀಡುವ ಕನಿಷ್ಠ ಬೆಂಬಲ ಬೆಲೆಗೆ 1.06 ಲಕ್ಷ ಕೋಟಿ ರೂ. ಖರ್ಚು ಮಾಡಿದೆ. ಆದರೆ 2022-23 ರಲ್ಲಿ ಪ್ರಧಾನಿ ಮೋದಿ ಅವರ ಸರ್ಕಾರ 2.28 ಲಕ್ಷ ಕೋಟಿ ರೂ. ಖರ್ಚು ಮಾಡಿದೆ. ಈ ಮೂಲಕ ಬೆಂಬಲ ಬೆಲೆಯನ್ನು ದುಪ್ಪಟ್ಟು ಮಾಡಿದೆ ಎಂದು ಆರ್.ಅಶೋಕ ವಿವರಿಸಿದ್ದಾರೆ.

ಭತ್ತದ ಬೆಂಬಲ ಬೆಲೆ 67% ಹೆಚ್ಚಳವಾಗಿದೆ. 2013-14 ರಲ್ಲಿ ಭತ್ತಕ್ಕೆ ಕ್ವಿಂಟಾಲ್‌ಗೆ 1,310 ರೂ. ಇದ್ದರೆ, 2023-24 ರಲ್ಲಿ ಕ್ವಿಂಟಾಲ್‌ಗೆ 2,183 ರೂ. ಆಗಿದೆ. ರಾಗಿಯ ಬೆಂಬಲ ಬೆಲೆ 156% ಹೆಚ್ಚಳವಾಗಿದೆ. 2013-14 ರಲ್ಲಿ ರಾಗಿಗೆ ಕ್ವಿಂಟಾಲ್‌ಗೆ 1,500 ರೂ. ಇದ್ದರೆ, 2023-24 ರಲ್ಲಿ ಕ್ವಿಂಟಾಲ್‌ಗೆ 3,846 ರೂ. ಆಗಿದೆ. ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ 59% ಹೆಚ್ಚಳವಾಗಿದೆ. 2013-14 ರಲ್ಲಿ ಮೆಕ್ಕೆಜೋಳಕ್ಕೆ ಕ್ವಿಂಟಾಲ್‌ಗೆ 1,310 ರೂ. ಇದ್ದರೆ, 2023-24 ರಲ್ಲಿ ಕ್ವಿಂಟಾಲ್‌ಗೆ 2,090 ರೂ. ಆಗಿದೆ. ಈ ರೀತಿ 23 ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದರ ಜೊತೆಗೆ, ಬೆಂಬಲ ಬೆಲೆಯಲ್ಲಿ ಅಗಾಧ ಸುಧಾರಣೆ ತಂದಿದ್ದೇ ಮೋದಿ ಸರ್ಕಾರ ಎಂದು ಅವರು ತಿಳಿಸಿದ್ದಾರೆ.

ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಈವರೆಗೆ ದೇಶದ 11.8 ಕೋಟಿ ರೈತರಿಗೆ 2.80 ಲಕ್ಷ ಕೋಟಿ ರೂ. ನೀಡಲಾಗಿದೆ. ಕಿಸಾನ್‌ ರೈಲು ಮೂಲಕ ಕೃಷಿ ಉತ್ಪನ್ನಗಳನ್ನು ಸಾಗಣೆ ಮಾಡಲು 50% ಸಾರಿಗೆ ಸಹಾಯಧನ ನೀಡಲಾಗುತ್ತಿದೆ. 7.48 ಕೋಟಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ವಿತರಿಸಿ 9 ಲಕ್ಷ ಕೋಟಿ ರೂ. ಸಾಲ ನೀಡಲಾಗಿದೆ. ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ 47.4 ಕೋಟಿ ರೈತರು ಹೆಸರು ನೋಂದಾಯಿಸಿದ್ದಾರೆ. ಪಿಎಂ ಕೃಷಿ ಸಿಂಚಾಯಿ ಯೋಜನೆಯಡಿ ರೈತರಿಗೆ 2021-2023 ರವರೆಗೆ 93,063 ಕೋಟಿ ರೂ. ನೀಡಲಾಗಿದೆ ಎಂದು ವಿವರಿಸಿದರು.

ಬಜೆಟ್‌ ಗೆ 5 ಪಟ್ಟು ಅಧಿಕ

ಎನ್‌ ಡಿಎ ಸರ್ಕಾರ ಕೃಷಿ ಆಯವ್ಯಯಕ್ಕಾಗಿ 5 ಪಟ್ಟು ಅಧಿಕ ಅನುದಾನ ನೀಡಿದೆ. 2013-2014 ರಲ್ಲಿ 21,933 ಕೋಟಿ ರೂ. ನೀಡಿದ್ದರೆ, 2023-24 ರಲ್ಲಿ 1,25,036 ಕೋಟಿ ರೂ. ನೀಡಲಾಗಿದೆ ಎಂದು ಆರ್.ಅಶೋಕ ತಿಳಿಸಿದ್ದಾರೆ.