ಮನೆ ಅಪರಾಧ ಬೈಕ್ ಅಪಘಾತದಿಂದ ಕೊಲೆ ಪ್ರಕರಣ ಬೆಳಕಿಗೆ: ನಾಲ್ವರು ವಶಕ್ಕೆ

ಬೈಕ್ ಅಪಘಾತದಿಂದ ಕೊಲೆ ಪ್ರಕರಣ ಬೆಳಕಿಗೆ: ನಾಲ್ವರು ವಶಕ್ಕೆ

0

ರಾಮನಗರ(Ramnagar): ಮಹಿಳೆಯನ್ನು ಹತ್ಯೆಗೈದು ಬೈಕ್ ನಲ್ಲಿ ಶವ ತರುತ್ತಿದ್ದ ವೇಳೆ ಅಪಘಾತವಾಗಿದ್ದು, ಈ ಸಂದರ್ಭದಲ್ಲಿ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನವರಾದ ನಾಗರಾಜು ಹಾಗೂ ವಿನೋದ್ ಎಂಬುವರು ಮಂಗಳವಾರ ತಡರಾತ್ರಿ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿತು. ಸ್ಥಳದಲ್ಲಿ‌ ಮಹಿಳೆಯ ಶವ ಪತ್ತೆಯಾಯಿತು. ಅನುಮಾನಗೊಂಡ ಪೊಲೀಸರು ಶವವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಮಹಿಳೆ ಮೃತಪಟ್ಟು ಅದಾದಲೇ ಐದಾರು ಗಂಟೆ ಕಳೆದಿರುವುದಾಗಿ ವೈದ್ಯರು ವರದಿ ನೀಡಿದ್ದಾರೆ.

ಘಟನೆ ವಿವರ: ಹಣದ ವಿಚಾರವಾಗಿ ಮಹಿಳೆಯ ಹತ್ಯೆ ಮಾಡಿದ್ದು, ನಂತರ ಆಕೆಯ ಶವವನ್ನು ಬೈಕ್‌ನಲ್ಲೇ ರಾಜರಾಜೇಶ್ವರಿ ನಗರದಿಂದ ರಾಮನಗರದತ್ತ ಸಾಗಿಸುತ್ತಿದ್ದರು.ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. ಹತ್ಯೆಗೀಡಾದ ಮಹಿಳೆಯನ್ನು ರಾಜರಾಜೇಶ್ವರಿ ನಗರದ ಮುತ್ತುರಾಯನ ನಗರ ನಿವಾಸಿ ಶ್ವೇತಾ ಎಂದು ಗುರುತಿಸಲಾಗಿದೆ. ಶ್ವೇತಾ ಹಾಗೂ ಆಕೆಯ ಸ್ನೇಹಿತೆ ದುರ್ಗಿ‌ ನಡುವೆ ಹಣಕಾಸಿನ ವ್ಯವಹಾರ ನಡೆದಿತ್ತು. ಈ ವಿಚಾರದಲ್ಲಿ ಮನಸ್ಥಾಪವಾಗಿ ದುರ್ಗಿ ತನ್ನ ಪತಿ ರಘು ಜೊತೆಗೂಡಿ ಶ್ವೇತಾಳನ್ನು ಹತ್ಯೆ ಮಾಡಿದ್ದರು. ನಂತರ ರಘು ತನ್ನ ಇಬ್ಬರು ಸ್ನೇಹಿತರ ಮೂಲಕ ಬೈಕ್‌ನಲ್ಲೇ ಚನ್ನಪಟ್ಟಣಕ್ಕೆ ಶವ ಸಾಗಿಸಿ ಅಲ್ಲಿನ ಯಾವುದಾದರೂ‌ ಕೆರೆಯಲ್ಲಿ ಎಸೆಯಲು ಪ್ಲಾನ್ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಚನ್ನಪಟ್ಟಣದಲ್ಲಿ ದುರ್ಗಿ ಮತ್ತು ರಘು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.