ಮನೆ ರಾಜ್ಯ ಅನಾರೋಗ್ಯದ ಕಾರಣಕ್ಕೆ ರಾಜ್ಯಸಭೆ ಚುನಾವಣೆ ಮತದಾನ ಮಾಡಿಲ್ಲ: ಶಿವರಾಮ ಹೆಬ್ಬಾರ

ಅನಾರೋಗ್ಯದ ಕಾರಣಕ್ಕೆ ರಾಜ್ಯಸಭೆ ಚುನಾವಣೆ ಮತದಾನ ಮಾಡಿಲ್ಲ: ಶಿವರಾಮ ಹೆಬ್ಬಾರ

0

ಯಲ್ಲಾಪುರ: ಅನಾರೋಗ್ಯದ ಕಾರಣಕ್ಕೆ ರಾಜ್ಯಸಭೆ ಚುನಾವಣೆಯ ಮತದಾನದಲ್ಲಿ ಪಾಲ್ಗೊಳ್ಳಲು ಆಗಿಲ್ಲ  ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮತದಾನ ಮಾಡಲಾಗದ್ದಕ್ಕೆ ಬೇಸರವಿದೆ. ಮುಂಜಾನೆ ಆರೋಗ್ಯದಲ್ಲಿ ಏರುಪೇರಾಗಿತ್ತು. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಮಧ್ಯಾಹ್ನದ ಒಳಗೆ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ, ಆರೋಗ್ಯ ಸ್ಥಿತಿ ಸ್ಥಿರವಾಗಲು ತಡವಾಯಿತು  ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಬಿಜೆಪಿಯಲ್ಲಿಯೇ ಕೆಲಸ ಮಾಡುತ್ತೇನೆ. ಪಕ್ಷ ಬಿಡುವ ಬಗ್ಗೆ ಯಾವುದೇ ತೀರ್ಮಾನವನ್ನೂ ಸದ್ಯಕ್ಕೆ ತೆಗೆದುಕೊಳ್ಳುವ ಯೋಚನೆ ಮಾಡಿಲ್ಲ  ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದವರ ಮೇಲೆ ಶಿಸ್ತು ಕ್ರಮ ಜರುಗಿಸದ ಕಾರಣಕ್ಕೆ ಪಕ್ಷದ ಕೆಲ ಮುಖಂಡರ ಮೇಲೆ ಬೇಸರವಿದೆ. ಈಚೆಗೆ ಜಿಲ್ಲೆ, ತಾಲ್ಲೂಕು ಘಟಕಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ವಿಷಯದಲ್ಲಿಯೂ ನನ್ನನ್ನು ವಿಶ್ವಾಸಕ್ಕೆ ಪಡೆದಿಲ್ಲ. ನನ್ನ ಬೇಸರವಿರುವುದು ಬಿಜೆಪಿಯ ಜಿಲ್ಲಾ ಮಟ್ಟದ ಕೆಲವು ಮುಖಂಡರ ಮೇಲೆಯೇ ವಿನಃ ರಾಜ್ಯ, ರಾಷ್ಟ್ರ ಮಟ್ಟದ ನಾಯಕರ ಮೇಲಲ್ಲ  ಎಂದರು.