ಮನೆ ಸ್ಥಳೀಯ ಮೈಸೂರು: ಅಂಚೆ ತರಬೇತಿ ಕೇಂದ್ರದ ಮಹಿಳಾ ವಸತಿನಿಲಯ ‘ಹಂಸ’ ಕಟ್ಟಡ ಸಂಕೀರ್ಣ ಉದ್ಘಾಟಿಸಿದ ಸಂಸದ ಪ್ರತಾಪ...

ಮೈಸೂರು: ಅಂಚೆ ತರಬೇತಿ ಕೇಂದ್ರದ ಮಹಿಳಾ ವಸತಿನಿಲಯ ‘ಹಂಸ’ ಕಟ್ಟಡ ಸಂಕೀರ್ಣ ಉದ್ಘಾಟಿಸಿದ ಸಂಸದ ಪ್ರತಾಪ ಸಿಂಹ

0

ಮೈಸೂರು: ಇಲ್ಲಿನ ನಜರ್‌ ಬಾದ್‌ ನಲ್ಲಿರುವ ಅಂಚೆ ತರಬೇತಿ ಕೇಂದ್ರ(ಪಿಟಿಸಿ)ದ ಆವರಣದಲ್ಲಿ ₹ 4.28 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮಹಿಳಾ ವಸತಿನಿಲಯ ‘ಹಂಸ’ ಕಟ್ಟಡ ಸಂಕೀರ್ಣವನ್ನು ಮೈಸೂರು–ಕೊಡಗು ಸಂಸದ ಪ್ರತಾಪ ಸಿಂಹ ಸೋಮವಾರ ಉದ್ಘಾಟಿಸಿದರು.

2018ರ ನ.30ರಂದು ಸಚಿವ ಮನೋಜ್‌ ಸಿಂಹ ಶಂಕುಸ್ಥಾಪನೆ ನೆರವೇರಿಸಿದ್ದರು. ನಿರ್ಮಾಣ ಪೂರ್ಣಗೊಂಡಿದ್ದು, ದಕ್ಷಿಣ ಭಾರತದ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳಿಂದ ತರಬೇತಿಗೆ ಬರುವ ಮಹಿಳಾ ಪ್ರಶಿಕ್ಷಣಾರ್ಥಿಗಳಿಗೆ ಇಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗುವುದು. ಪಠ್ಯ ಕಲಿಕೆಯೊಂದಿಗೆ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ. ಅತ್ಯಾಧುನಿಕವಾಗಿ ನಿರ್ಮಿಸಲಾಗಿದ್ದು, ಭದ್ರತೆಯನ್ನೂ ಒದಗಿಸಲಾಗಿದೆ.

36 ಕೊಠಡಿಗಳಿದ್ದು, ಏಕಕಾಲಕ್ಕೆ 100 ಮಹಿಳೆಯರಿಗೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಬಹುದಾಗಿದೆ. ಅಂಚೆ ಇಲಾಖೆಯು ಮೈಸೂರು ಸೇರಿದಂತೆ ದೇಶದ ಆರು ಕಡೆಗಳಲ್ಲಿ ಪಿಟಿಸಿಗಳನ್ನು ಹೊಂದಿದೆ. ಅವುಗಳಲ್ಲಿ ದೇಶದ ಮೊಟ್ಟ ಮೊದಲ ಮಹಿಳಾ ವಸತಿ ಸಂಕೀರ್ಣ ಇದಾಗಿದೆ. ಸೌರವಿದ್ಯುತ್‌ ಬಳಕೆ, ಜೈವಿಕ ಪದಾರ್ಥಗಳ ಮರುಬಳಕೆಗೂ ಆದ್ಯತೆ ನೀಡಲಾಗಿದೆ. 906 ಚ.ಮೀ. ವಿಸ್ತೀರ್ಣವನ್ನು ಹೊಂದಿದೆ.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಾಪ ಸಿಂಹ, ‘ನಾಲ್ಕೈದು ದಿನಗಳಲ್ಲಿ ಲೋಕಸಭಾ ಚುನಾವಣೆಯ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ.‌ ಹೀಗಾಗಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ದೇಶಕ್ಕೆ ಸಮರ್ಪಿಸುತ್ತಿದ್ದೇವೆ’ ಎಂದು ತಿಳಿಸಿದರು.

ನಾನು ಸಂಸದನಾಗುವ ಮುನ್ನ ಮೈಸೂರಿಗೆ ಸಮರ್ಪಕ ಸಂಪರ್ಕದ ಕೊರತೆ ಇತ್ತು. ಇದರಿಂದಾಗಿ ಕೈಗಾರಿಕೆಗಳು ಬರುವುದಕ್ಕೆ ತೊಡಕಾಗಿತ್ತು. ಆದ್ದರಿಂದ ನಾನು ಹೆದ್ದಾರಿ ರೈಲು ಹಾಗೂ ವಿಮಾನ ಸಂಪರ್ಕ ವ್ಯವಸ್ಥೆ ವೃದ್ಧಿಗೆ ಆದ್ಯತೆ ನೀಡಿದ್ದೇನೆ ಎಂದು ತಿಳಿಸಿದರು.

ಹಿಂದಿದ್ದ ಸಂಸದರು 2004ರಿಂದ 2014ರವರೆಗೆ ಒಂದೇ ಒಂದು ಹೊಸ ರೈಲನ್ನೂ ತಂದಿರಲಿಲ್ಲ. ನಾನು ಹಲವು ರೈಲುಗಳ ಸಂಪರ್ಕ ಕಲ್ಪಿಸಿದ್ದೇನೆ. ವಿಮಾನನಿಲ್ದಾಣದ ರನ್‌ವೇ ವಿಸ್ತರಣೆಗೂ ಕ್ರಮ ಕೈಗೊಳ್ಳಲಾಗಿದೆ. ಅದನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಮೈಸೂರು ಈಗ ದೊಡ್ಡ ಮಟ್ಟದ ಆಭಿವೃದ್ಧಿಗೆ ಸಜ್ಜಾಗಿದೆ. ಹಲವು ಕಂಪನಿಗಳು ಬರಲಿವೆ ಎಂದು ತಿಳಿಸಿದರು.

ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದಾಗ ಅಂಚೆ ಇಲಾಖೆ ವಿನಾಶದ ಅಂಚಿನಲ್ಲಿತ್ತು.‌ ಅನುದಾನ ನೀಡುವ ಕೆಲಸವನ್ನೂ ಆಗ ಮಾಡಿರಲಿಲ್ಲ. ಆದರೆ, ನಮ್ಮ ಸರ್ಕಾರ ಮೇಲ್ದರ್ಜೆಗೇರಿಸುತ್ತಿದೆ ಎಂದು ಹೇಳಿದರು.

ಅಂಚೆ ಸೇವೆಗಳ ದಕ್ಷಿಣ ಕರ್ನಾಟಕ ವಲಯದ ನಿರ್ದೇಶಕ ಟಿ.ಎಸ್. ಅಶ್ವತ್ಥನಾರಾಯಣ, ಪಿಟಿಸಿ ನಿರ್ದೇಶಕ ಆಶಿಶ್ ಸಿಂಗ್ ಠಾಕೂರ್, ಉಪ ನಿರ್ದೇಶಕ ಕೆ.ವಿ.ಎಲ್.ಎನ್.ಮೂರ್ತಿ ಪಾಲ್ಗೊಂಡಿದ್ದರು.