ಮನೆ ಸ್ಥಳೀಯ ಕೇಂದ್ರ ಪುರಸ್ಕೃತ ಪ್ರಸಾದ್ ಮತ್ತು ಸ್ವದೇಶ್ ದರ್ಶನ್ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ

ಕೇಂದ್ರ ಪುರಸ್ಕೃತ ಪ್ರಸಾದ್ ಮತ್ತು ಸ್ವದೇಶ್ ದರ್ಶನ್ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ

0

ಮೈಸೂರು: ಪ್ರವಾಸೋದ್ಯಮ ಮಂತ್ರಾಲಯ ಭಾರತ ಸರ್ಕಾರ ಮತ್ತು ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಜರುಗಿದ ಕಾರ್ಯಕ್ರಮದಲ್ಲಿ ಇಂದು ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನ ಅಭಿವೃದ್ಧಿ, ಇಕೋಲಾಜಿಕಲ್ ಎಕ್ಸ್ಪೀರಿಯನ್ಸ್ ಜೋನ್, ಟಾಂಗ ರೈಡ್ ಹೆರಿಟೇಜ್ ಎಕ್ಸ್ಪೀರಿಯನ್ಸ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೈಸೂರು ನಗರದ ಚಾಮರಾಜೇಂದ್ರ ಮೃಗಾಲಯದ ಆಂಪಿಥಿಯೇಟರ್ ನಲ್ಲಿ ಮಾನ್ಯ ಪ್ರಧಾನಿ ಮಂತ್ರಿಗಳಾದ ನರೇಂದ್ರ ಮೋದಿ ಅವರು ವಿಡಿಯೋ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮೈಸೂರು ಸಂಸದರಾದ ಪ್ರತಾಪ್ ಸಿಂಹ ಅವರು ಮಾತನಾಡಿ, 45.70 ಕೋಟಿ ರೂ ವೆಚ್ಚದ ಭೂಮಿ ಪೂಜೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದ್ದು ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆ ಮತ್ತು ಸ್ವದೇಶ್ ದರ್ಶನ ಯೋಜನೆ ಅಡಿ ಮೈಸೂರಿನ ಚಾಮುಂಡಿ ಬೆಟ್ಟ ಅಭಿವೃದ್ಧಿಗೆ 45.70 ಕೋಟಿ, ದಸರ ವಸ್ತು ಪ್ರದರ್ಶನ ಹಾಗೂ ಮೈಸೂರು ಮೃಗಾಲಯದ ಅಭಿವೃದ್ಧಿಗೆ 80 ಕೋಟಿ ಅನುದಾನವನ್ನ ಪ್ರಧಾನಿ ಮೋದಿಯವರು ಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.

ಈ ಎಲ್ಲಾ ಯೋಜನೆಗಳಿಂದ ಮೈಸೂರು ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಶ್ರೀಮಂತಿಕೆ ಕಾಣಬಹುದು ಎಂದರು. ಈ ಸಂದರ್ಭದಲ್ಲಿ ನೆರವಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಡಾ. ಕೆ. ವಿ ರಾಜೇಂದ್ರ ಅವರು ಬಸ್ ನಿಲ್ದಾಣ, ಆಟೋ ನಿಲ್ದಾಣ ಗಳಂತೆ ಟಾಂಗಾಗಳಿಗೆ ಮೈಸೂರಿನಲ್ಲಿ 2 ರಿಂದ 3 ಕಡೆ ಟಾಂಗಾ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು. ಮೈಸೂರನ್ನು ವೀಕ್ಷಿಸಲು ಬರುವ ಪ್ರವಾಸಿಗರು ಟಾಂಗಾ ಸವಾರಿಯನ್ನು ಬಯಸುತ್ತಾರೆ. ಅವರಿಗೆ ಅನುಕೂಲವಾಗುವಂತೆ ಸವಾರಿಯ ಶುಲ್ಕವನ್ನು ನಿಗಧಿಪಡಿಸಿ, ಯಾವುದೇ ಪ್ರಯಾಣಿಕರು, ಸಾರ್ವಜನಿಕರು, ಪ್ರವಾಸಿಗರು ಹಾಗೂ ಟ್ರಾಫಿಕ್ ಗೆ ತೊಂದರೆಯಾಗದಂತೆ ಸವಾರಿಯ ಮಾರ್ಗವನ್ನು ನಿಯೋಜನೆ ಮಾಡಲಾಗುತ್ತದೆ ಎಂದರು.
ಇಕೋಲಾಜಿಕಲ್ ಎಕ್ಸೀರಿಯನ್ಸ್ ಅಡಿಯಲ್ಲಿ ಮೃಗಾಲಯ ಮತ್ತು ಕಾರಂಜಿ ಕೆರೆ ನ್ಯಾಷನಲ್ ಮ್ಯೂಸಿಯಂ ನಡುವೆ ಸಂಪರ್ಕ ಕಲ್ಪಿಸಿ ಬಂದಂತಹ ಪ್ರವಾಸಿಗರು ಒಮ್ಮೆಲೆ ಎರಡು ಸ್ಥಳಗಳ ಪರಿಸರ ಅನುಭವವನ್ನು ಪಡೆಯುವಂತೆ ಮಾಡಲಾಗುತ್ತದೆ. ಮೃಗಾಲಯ ದ ಒಳಗಡೆ ಜಿಪ್ ವಾಕ್ ಇನ್ನಿತರ ಆಟಗಳು ಹಾಗೂ ಸುಂದರ ಸ್ಥಳಗಳನ್ನು ನಿರ್ಮಿಸಿ ಪ್ರವಾಸಿಗರಿಗೆ ಅದ್ಬುತ ಅನುಭವ ನೀಡುವಂತೆ ಮಾಡಲಾಗುತ್ತದೆ ಎಂದರು.

ಕೆಳೆದ ರಾಜ್ಯ ಹಾಗೂ ಕೇಂದ್ರ ಬಜೆಟ್ ನಿಂದ ಪ್ರಸಾದ್ ಯೋಜನೆಗೆ ಬಂದಿರುವ ಅನುದಾನದಿಂದ ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಜಿಲ್ಲಾ ಮಟ್ಟದ ಸಮಿತಿಯನ್ನು ನೇಮಿಸಲಾಗುತ್ತದೆ. ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಿಲ್ಲೆಯಲ್ಲಿನ ಪ್ರತಿಯೊಂದು ಪ್ರವಾಸಿ ತಾಣಗಳಿಗೂ ಪ್ರತ್ಯೇಕ ಸಮಿತಿಯನ್ನು ರಚಿಸಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ವರದಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಮೈಸೂರಿಗೆ ಬಂದವರಿಗೆ ಸಂಜೆ ಸಮಯದಲ್ಲಿ ವರ್ಣರಂಜಿತ ಅರಮನೆಯನ್ನು ನೋಡಬಹುದಾಗಿದ್ದು, ವಿದೇಶ, ನೆರೆಯ ರಾಜ್ಯ ಹಾಗೂ ಸ್ಥಳೀಯ ಪ್ರವಾಸಿಗರಿಗೆ ಯಾವುದೇ ರೀತಿಯ ಬೇಜಾರಿಲ್ಲದೆ ಬಹಳ ಸಂತೋಷದಿಂದ ಹಿಂತಿರುಗುವಂತೆ ಮಾಡಲು ಪ್ರತಿಯೊಂದು ಸ್ಥಳಗಳನ್ನು ವೈವಿದ್ಯಮಯವಾಗಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀವತ್ಸ, ನಗರ ಪೋಲಿಸ್ ಆಯುಕ್ತರಾದ
ಬಿ. ರಮೇಶ್, ಪ್ರವಾಸೋದ್ಯಮ ಜಂಟಿ‌ ನಿರ್ದೇಶಕಿ ಎಂ.ಕೆ. ಸವಿತಾ, ಮೃಗಾಲಯದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.