ಮನೆ ರಾಜ್ಯ ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ: ಪ್ರಹ್ಲಾದ್​ ಜೋಶಿ

ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ: ಪ್ರಹ್ಲಾದ್​ ಜೋಶಿ

0

ಹುಬ್ಬಳ್ಳಿ: ನಾನು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ. ಜಗದೀಶ್​ ಶೆಟ್ಟರ್​ ನನಗೆ ಟಿಕೆಟ್​ ತಪ್ಪಿಸಲು ತಂತ್ರ ಮಾಡಿದ್ದಾರೆ ಎಂಬುವಂತದ್ದನ್ನು ನಾನು ನಂಬುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದ್ದಾರೆ.

ಟಿಕೆಟ್​​ ಘೋಷಣೆ ಬೆನ್ನಲ್ಲೇ ಬುಧವಾರ ಹುಬ್ಬಳ್ಳಿಗೆ ಆಗಮಿಸಿದ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮೋದಿ ಅವರು ದೇಶದ ಅತ್ಯಂತ ಜನಪ್ರಿಯ ನಾಯಕರು. ಈಗ 72 ಸ್ಥಾನಗಳಿಗೆ ಟಿಕೆಟ್ ಘೋಷಣೆಯಾಗಿದೆ. ಕರ್ನಾಟಕದಲ್ಲಿ 20 ಅಭ್ಯರ್ಥಿಗಳ ಘೋಷಣೆ ಮಾಡಿದೆ. ಅದರಲ್ಲಿ ಧಾರವಾಡಕ್ಕೆ ನನ್ನನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ಮೋದಿ, ಜೆಪಿ ನಡ್ಡಾ, ಅಮಿತ್​​ ಶಾ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಅಲ್ಲದೆ  ದೇಶದಲ್ಲಿ NDA 400 ಸ್ಥಾನ ಗೆಲ್ಲಲಿದೆ. ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೆ ಅಭಿನಂದನೆ. ಮೂರನೇ ಬಾರಿಗೆ ನಾವು ದಾಖಲೆಯ ವಿಜಯ ಸಾಧಿಸುತ್ತೇವೆ. ಆದಷ್ಟು ಬೇಗ ಮುಂದಿನ ಅಭ್ಯರ್ಥಿಗಳ ಹೆಸರು ಘೋಷಣೆ ಆಗಲಿದೆ ಎಂದು ಜೋಶಿ ಹೇಳಿದರು.

ಹೊಸ ಮುಖಗಳಿಗೆ ಮಣೆ ಹಾಕಿರುವ ವಿಚಾರವಾಗಿ ಮಾತನಾಡಿದ ಅವರು,‌  ಗೆಲುವಿನ ಪ್ರಮಾಣ ನೋಡಿ ಕೆಲ ಕಡೆ ಬದಲಾವಣೆ ಆಗಿದೆ.‌ ಇದು ಸಾಮಾನ್ಯ ಪ್ರತಿಕ್ರಿಯೆ. ರಾಷ್ಟ್ರೀಯ ನಾಯಕರ ತೀರ್ಮಾನ. ಸಂಸದ ನಳಿನ್​ಕುಮಾರ್​ ಕಟೀಲ್​ ಅವರು ರಾಜ್ಯಾಧ್ಯಕ್ಷರಾಗಿದ್ದರು. ನಾವು ಯಾರನ್ನೂ ಕೈ ಬಿಡಲ್ಲ. ಅವರಿಗೆ ಜವಬ್ದಾರಿ ಕೊಡುತ್ತೇವೆ ಎಂಬ ಭರವಸೆ ನೀಡಿದರು. ಹಾಗೇ ಕಾಂತೇಶ್​ಗೆ ಟಿಕೆಟ್ ತಪ್ಪಿರೋ ವಿಚಾರಕ್ಕೆ ‘ಅದು ರಾಷ್ಟ್ರೀಯ ನಾಯಕರ ತೀರ್ಮಾನ. ಎಲ್ಲಿ ಗೆಲ್ಲುತ್ತೇವೆ. ಅಲ್ಲಿ ಸ್ಪರ್ಧೆ ಇದ್ದೇ ಇರುತ್ತದೆ. ಎಲ್ಲವೂ ಸರಿಯಾಗುತ್ತದೆ. ಎಲ್ಲರಿಗೂ ಟಿಕೆಟ್ ಕೇಳುವ ಹಕ್ಕಿದೆ. ಕಾಂಗ್ರೆಸ್​ನಲ್ಲಿ ಅಭ್ಯರ್ಥಿಗಳೇ ಇಲ್ಲ. ಸ್ಪರ್ಧೆಗೆ ಉತ್ಸಾಹ ಇಲ್ಲ ಎಂದು ಟೀಕಿಸಿದರು.

ಬಿಜೆಪಿಯಲ್ಲಿ ದೊಡ್ಡ ಪಟ್ಟಿ ಇದೆ. ಯದುವೀರ್​ ಅವರನ್ನು ಮನವೊಲಿಸಿದ್ದು ಯಡಿಯೂರಪ್ಪ. ಎಲ್ಲರಿಗೂ ಟಿಕೆಟ್ ಕೇಳುವ ಅಧಿಕಾರ ಇದೆ. ಶೆಟ್ಟರ್​ ಅವರು ನನಗೆ ಟಿಕೆಟ್ ತಪ್ಪಿಸುವ ಪ್ರಯತ್ನ ಮಾಡಿಲ್ಲ.‌ ನಾನು ಅವರನ್ನು ಟೀಕೆ ಮಾಡಲ್ಲ. ಅಭ್ಯರ್ಥಿ ಯಾರೇ ಆಗಲಿ, ನಾನು ಮೂರು ಲಕ್ಷ ಮತಗಳ ಲೀಡ್​ನಿಂದ ಗೆಲ್ಲುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.