ಮನೆ ರಾಜ್ಯ ಹೆಚ್ ​ಡಿ ದೇವೇಗೌಡ, ಕುಮಾರಸ್ವಾಮಿ, ನರೇಂದ್ರ ಮೋದಿ ಸಾಧನೆಗಳ ಮೇಲೆ ಚುನಾವಣೆ: ಡಾ.ಸಿ.ಎನ್. ಮಂಜುನಾಥ್  

ಹೆಚ್ ​ಡಿ ದೇವೇಗೌಡ, ಕುಮಾರಸ್ವಾಮಿ, ನರೇಂದ್ರ ಮೋದಿ ಸಾಧನೆಗಳ ಮೇಲೆ ಚುನಾವಣೆ: ಡಾ.ಸಿ.ಎನ್. ಮಂಜುನಾಥ್  

0

ಬೆಂಗಳೂರು: ಹೆಚ್ ​ಡಿ ದೇವೇಗೌಡ, ಕುಮಾರಸ್ವಾಮಿ ಹಾಗೂ ನರೇಂದ್ರ ಮೋದಿ ಸಾಧನೆಗಳ ಮೇಲೆ ಚುನಾವಣೆ ನಡೆಯಲಿ ಎಂದು ಜೆಡಿಎಸ್ ಕುಟುಂಬದ ಸದಸ್ಯರೂ ಆಗಿರುವ ಬಿಜೆಪಿ ಪಕ್ಷ ಸೇರಲಿರುವ ಡಾ.ಸಿ.ಎನ್. ಮಂಜುನಾಥ್  ತಿಳಿಸಿದರು.

ಕೆಳದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್​ ಪಕ್ಷದಿಂದ ಗೆದ್ದಿರುವ ಏಕೈಕ ಸಂಸದ ಡಿಕೆ ಸುರೇಶ್ ಅವರ ಗೆಲುವಿಗೆ ಬ್ರೇಕ್ ಹಾಕಲು ಬಿಜೆಪಿ ಹೈಕಮಾಂಡ್ ಬೆಂಗಳೂರು ಗ್ರಾಮಾಂತರಕ್ಕೆ ಅಳೆದು ತೂಗಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಜೆಡಿಎಸ್ ಕುಟುಂಬದ ಸದಸ್ಯರೂ ಆಗಿರುವ ಬಿಜೆಪಿ ಪಕ್ಷ ಸೇರಲಿರುವ ಡಾ.ಸಿ.ಎನ್. ಮಂಜುನಾಥ್  ಅವರಿಗೆ ಟಿಕೆಟ್ ಘೋಷಣೆಯಾಗಿದೆ.

ಇಂದು ನಡೆದ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಾನು ಸುಧೀರ್ಘವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದೇನೆ. ನನಗೆ ಸಿಕ್ಕ ಅವಕಾಶದಲ್ಲಿ ಒಂದು ಸರ್ಕಾರಿ ವ್ಯವಸ್ಥೆಯಲ್ಲಿ ಪಂಚತಾರಾ ವ್ಯವಸ್ಥೆ ತಂದಿದ್ದೆವು. ನಾನು ಕೇವಲ ಹೃದ್ರೋಗ ತಜ್ಞನಾಗಿ ಕೆಲಸ ಮಾಡಿಲ್ಲ. ಒಬ್ಬ ವ್ಯವಸ್ಥಾಪಕನಾಗಿ, ಒಬ್ಬ ಇಂಜಿನಿಯರ್ ಆಗಿ, ಒಬ್ಬ ಆಡಳಿತಾಧಿಕಾರಿಯಾಗಿ, ಒಬ್ಬ ಸಾಂತ್ವನ ಹೇಳುವ ಕೌನ್ಸಿಲರ್ ಆಗಿ ಕೆಲಸ ಮಾಡಿದ್ದೇನೆ ಎಂದರು.

ನಾನು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಚುನಾವಣೆಗೆ ಬರುತ್ತಿದ್ದೇನೆ. ನಿಮ್ಮ ಸಹಕಾರ ಇರಲಿ. ಯಾರನ್ನೂ ಸಹ ನಾವು ವೈಯಕ್ತಿಕವಾಗಿ ಟೀಕೆ ಮಾಡುವುದಿಲ್ಲ. ದೇವೇಗೌಡ, ಕುಮಾರಸ್ವಾಮಿ, ನರೇಂದ್ರ ಮೋದಿ ಅವರು ಮಾಡಿರುವ ಸಾಧನೆಗಳ ಮೇಲೆ ಚುನಾವಣೆ ಆಗಲಿ ಅನ್ನೋದು ನನ್ನ ಆಸೆ ಎಂದರು.

ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಸಿಗುವ ಕೆಲಸ ಆಗುತ್ತಿದೆ. ಭಾರತ ವಿಶ್ವದಲ್ಲಿ ಬಲಶಾಲಿಯಾಗಬೇಕು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ಈ ಚುನಾವಣೆಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ಸಾಧನೆ‌ ಮಾತನಾಡಬೇಕು, ಮಾತು ಸಾಧನೆ ಆಗಬಾರದು ಎಂದರು.

ನರೇಂದ್ರ ಮೋದಿ ಸರ್ಕಾರ ಹೆಚ್ಚು ಸಾಧಕರಿಗೆ ಪರಿಣಿತರಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ. ಇವತ್ತು ನಾನು ಲೋಕಸಭಾ ಚುನಾವಣಾ ಎದುರಿಸುತ್ತಿದ್ದೇನೆ. ಅಧಿಕೃತವಾಗಿ ಇನ್ನು ಎರಡು ದಿನಗಳಲ್ಲಿ ಪಕ್ಷ ಸೇರುತ್ತೇನೆ. ಯಡಿಯೂರಪ್ಪನವರ ಜೊತೆ ಚರ್ಚೆ ಮಾಡಿದ್ದೇವೆ. ಲೋಕಸಭಾ ಚುನಾವಣೆ ಅಂದರೇನೇ ರಾಜಕೀಯ. ಆದರೆ ನಾನು ರಾಜಕೀಯ ಮಾಡಲ್ಲ ಎಂದರು.

ಸರ್ಕಾರಿ ವ್ಯವಸ್ಥೆಯಲ್ಲಿ ಹೊಸ ಸಾಧನೆಯನ್ನು ಮಾಡಿ ತೋರಿಸಿದ್ದೇವೆ. ನನಗೆ ಪಕ್ಷಾತೀತವಾಗಿ ಕರೆ ಬರುತ್ತಿದ್ದವು. ನೀವು ರಾಷ್ಟ್ರ ಮಟ್ಟಕ್ಕೆ ಯಾಕೆ ಸೇವೆ ಕೊಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಚುನಾವಣೆಗೆ ನಿಂತ ಮೇಲೆ ಎಲ್ಲವೂ ಬಂದೇ ಬರುತ್ತದೆ. ಆದರೆ ನಾನು ಏನು ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ಚುನಾವಣೆ ಪ್ರಕ್ರಿಯೆ ಯಾವ ರೀತಿ ನಡೆಯುತ್ತದೆ ಅಂತಲೂ ಎಲ್ಲರಿಗೂ ಗೊತ್ತಿದೆ ಎಂದರು.

ನರೇಂದ್ರ ಮೋದಿಯವರ ಜನಪ್ರಿಯತೆ, ಯಡಿಯೂರಪ್ಪ ನಾಯಕತ್ವ, ದೇವೇಗೌಡ ಮತ್ತು ಕುಮಾರಸ್ವಾಮಿ ನಾಯಕತ್ವ ಮತ್ತು ಸಲಹೆಯಂತೆ ಕೆಲಸ ಮಾಡುತ್ತೇನೆ. ಚುನಾವಣೆಯನ್ನು ಎಲ್ಲಾ ರೀತಿಯಲ್ಲೂ ಎದುರಿಸಲು ನಾನು ಮಾನಸಿಕವಾಗಿ ರೆಡಿ ಇದ್ದೇನೆ ಎಂದರು.