ಮನೆ ರಾಷ್ಟ್ರೀಯ ಇಬ್ಬರು ಕುಖ್ಯಾತ ನಕ್ಸಲರು ಪೊಲೀಸರಿಗೆ ಶರಣು

ಇಬ್ಬರು ಕುಖ್ಯಾತ ನಕ್ಸಲರು ಪೊಲೀಸರಿಗೆ ಶರಣು

0

ನಾಗ್ಪುರ (Nagpur)- ಇಬ್ಬರು ಕುಖ್ಯಾತ ನಕ್ಸಲರು ಮಹಾರಾಷ್ಟ್ರದ ಗಡ್‌ಚಿರೊಲಿ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಶರಣಾಗಿದ್ದಾರೆ.

ಮಹಾರಾಷ್ಟ್ರ ಮತ್ತು ಇತರೆ ರಾಜ್ಯಗಳಲ್ಲಿ ಹಲವು ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ವಿಕಾಸ್, ಮಹಾರಾಷ್ಟ್ರದ ಗಡ್‌ಚಿರೋಲಿಯ ನಿವಾಸಿ ರಾಜೆ ಅಲಿಯಾಸ್ ದೆಬೊ ಜಯರಾಮ್ ಉಸೆಂಡಿ ಶರಣಾದ ನಕ್ಸಲರು. ಶರಣಾದ ನಕ್ಲಲರ ಪೈಕಿ ಒಬ್ಬ ಮಹಿಳೆಯೂ ಇದ್ದು, ಇವರಿಬ್ಬರ ತಲೆಗೆ 12 ಲಕ್ಷ ರೂ.‌‌ ಬಹುಮಾನ ಘೋಷಿಸಲಾಗಿತ್ತು.

ಸೆಪ್ಟೆಂಬರ್ 2010ರಲ್ಲಿ ನಕ್ಸಲಿಸಂಗೆ ಸೇರಿದ್ದ ವಿಕಾಸ್, ಮಾವೊವಾದಿಗಳ ಕೇಂದ್ರ ಸಮಿತಿ ಸದಸ್ಯ ಸುಧಾಕರ್ ಅವರಿಗೆ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದ. ಕೊಲೆ, ಗುಂಡಿನ ದಾಳಿ ಮತ್ತು ದರೋಡೆಗೆ ಸಂಬಂಧಿಸಿದಂತೆ ಒಂದು ಡಜನ್‌ಗಿಂತಲೂ ಹೆಚ್ಚು ಪ್ರಕರಣ ಈತನ ಮೇಲೆ ದಾಖಲಾಗಿದ್ದವು. ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡದಲ್ಲಿ ಭದ್ರತಾ ಪಡೆಗಳ ವಿರುದ್ಧ ಮೂರು ಸ್ಫೋಟಗಳನ್ನು ನಡೆಸಿರುವ ಈತ ಒಡಿಶಾದ ಹಲವು ಶೂಟೌಟ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

ಗಡ್‌ಚಿರೋಲಿಯ ಪೊಯಾರ್‌ಕೋಟಿ ಅರಣ್ಯ ವಲಯದಲ್ಲಿ 2020ರಲ್ಲಿ ಈತ ನಡೆಸಿದ್ದ ಸ್ಫೋಟದಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದರು.

2011ರಲ್ಲಿ ನಕ್ಸಲಿಸಂ ಸೇರಿದ ಉಸೆಂಡಿ, 2020ರ ಪೊಯಾರ್‌ಕೋಟಿ ಅರಣ್ಯ ವಲಯದಲ್ಲಿ ನಡೆಸಿದ ಸ್ಫೋಟದಲ್ಲಿ ವಿಕಾಸ್ ಜೊತೆ ಕೈಜೋಡಿಸಿದ್ದರು. 2019ರಲ್ಲಿ ಗ್ರಾಮಸ್ಥನ ಹತ್ಯೆ ಸೇರಿ ಹಲವು ಪ್ರಕರಣಗಳಲ್ಲಿ ಈಕೆ ಭಾಗಿಯಾಗಿದ್ದಾರೆ. ಮಾವೋವಾದಿ ಗುಂಪಿನ ಹಿರಿಯರಿಂದ ಮಹಿಳೆಯರ ಶೋಷಣೆ, ಮೂಲಭೂತ ಸೌಕರ್ಯ ನೀಡುವಾಗ ಹಿರಿಯ ಮತ್ತು ಕಿರಿಯ ನಕ್ಸಲರೆಂಬ ತಾರತಮ್ಯ, ಅರಣ್ಯದಲ್ಲಿ ಕಠಿಣ ಜೀವನ, ಕಾಡುಪ್ರಾಣಿಗಳ ಭಯ ಇವೇ ಮುಂತಾದ ಕಾರಣಗಳಿಂದಾಗಿ ಮಹಾರಾಷ್ಟ್ರದ ಶರಣಾಗತಿ ನಿಯಮಕ್ಕೆ ಬದ್ಧರಾಗಿ ಶರಣಾಗಿರುವುದಾಗಿ ನಕ್ಸಲರು ಹೇಳಿದ್ದಾರೆ.