ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪ ಕಾಂಗ್ರೆಸ್ ನಾಯಕರೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕರೇ ತನಗೆ ಫೋನ್ ಮಾಡಿ ಹೇಳುತ್ತಿದ್ದಾರೆ ಎಂದು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ತಿಳಿಸಿದರು.
ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಮತ್ತೊಮ್ಮೆ ಬಿಎಸ್ ಯಡಿಯೂರಪ್ಪ ಮೇಲೆ ಪ್ರಹಾರ ನಡೆಸಿ, ತಮಗೆ ಬೇಕಾದವರಿಗೆ ಟಿಕೆಟ್ ಕೊಡಿಸಿದ್ದಲ್ಲದೆ ಶಿವಮೊಗ್ಗವೂ ಸೇರಿದಂತೆ ಕೆಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜೊತೆ ಒಳಒಪ್ಪಂದ ಮಾಡಿಕೊಂಡು ರಾಜ್ಯದಲ್ಲಿ ಬಿಜೆಪಿಯನ್ನು ಹೀನ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ ಎಂದು ಹೇಳಿದರು.
ನಿನ್ನೆ ಹೇಳಿಕೆಯೊಂದನ್ನು ನೀಡಿರುವ ಯಡಿಯೂರಪ್ಪನವರು ಜೆಡಿಎಸ್ ಪಕ್ಷದ ಹೆಸರು ಉಲ್ಲೆಖಿಸದೆ ತಮ್ಮ ಮೈತ್ರಿ ಮುಂದಿನ ಚುನಾವಣೆಗಳಿಗೂ ಮುಂದುವರಿಯಲಿದೆ ಎಂದಿದ್ದಾರೆ. ಆದರೆ ಅವರು ಕಾಂಗ್ರೆಸ್ ನಾಯಕರ ಜೊತೆ ಮಾಡಿಕೊಂಡಿರುವ ಒಳಒಪ್ಪಂದಗಳ ಬಗ್ಗೆ ಮಾತಾಡಲ್ಲ. ವಿಧಾನಸಭಾ ಚುನಾವಣೆಯಲ್ಲಿ ಅವರು ಶಿಕಾರಿಪುರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಜೊತೆ ಒಳಒಪ್ಪಂದ ಮಾಡಿಕೊಂಡಾಗ್ಯೂ ಅವರ ಮಗ ವಿಜಯೇಂದ್ರ ಗೆಲ್ಲಲು ತಿಣುಕಾಬೇಕಾಯಿತು ಎಂದು ಈಶ್ವರಪ್ಪ ಹೇಳಿದರು.
ನಿನ್ನೆ ತಾನು ಜಿಲ್ಲಾ ನ್ಯಾಯಲಯಕ್ಕೆ ಹೋದಾಗ ಅಲ್ಲಿದ್ದ ವಕೀಲರು ತಾನು ಸ್ಪರ್ಧೆ ಮಾಡುತ್ತಿರುವುದನ್ನು ಶ್ಲಾಘಿಸಿ ಬಿವೈ ರಾಘವೇಂದ್ರ ಸೋಲಲೇಬೇಕು ಅಂತ ಹೇಳಿದರು ಅಂತ ಮಾಧ್ಯಮದವರಿಗೆ ತಿಳಿಸಿದರು.














