ಮನೆ ಕಾನೂನು ಚಲಿಸುತ್ತಿದ್ದ ರೈಲಿನಲ್ಲಿ  ಕೊಲೆ: ತನಿಖೆಗೆ ನಾಲ್ಕು ವಿಶೇಷ ತಂಡ ರಚನೆ

ಚಲಿಸುತ್ತಿದ್ದ ರೈಲಿನಲ್ಲಿ  ಕೊಲೆ: ತನಿಖೆಗೆ ನಾಲ್ಕು ವಿಶೇಷ ತಂಡ ರಚನೆ

0

ಬೆಳಗಾವಿ: ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕನೊಬ್ಬ ಚಾಕುವಿನಿಂದ ಇರಿದು ಒಬ್ಬರನ್ನು ಕೊಲೆ ಮಾಡಿದ ಮತ್ತು ನಾಲ್ವರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ತನಿಖೆಗಾಗಿ ರೈಲ್ವೆ ಪ್ರೋಟೆಕ್ಷನ್‌ ಫೋರ್ಸ್‌(ಆರ್‌ ಪಿಎಫ್‌), ಗ್ರೇಟರ್‌ ರೈಲ್ವೆ ಪೊಲೀಸ್‌(ಜಿಆರ್‌ಪಿ) ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡ ರಚಿಸಲಾಗಿದೆ ಎಂದು ರೈಲ್ವೆ ಪೊಲೀಸ್‌ ಡಿಐಜಿ ಎಸ್‌.ಡಿ. ಶರಣಪ್ಪ ಹೇಳಿದರು.

Join Our Whatsapp Group

ಖಾನಾಪುರ ತಾಲ್ಲೂಕಿನಲ್ಲಿ ಗುರುವಾರ ನಡೆದ ಈ ಘಟನೆಯಲ್ಲಿ ಹಲ್ಲೆಗೆ ಒಳಗಾಗಿ, ಇಲ್ಲಿನ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯವನ್ನು ಶುಕ್ರವಾರ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಪುದುಚೇರಿ–ದಾದರ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಟಿಕೆಟ್‌ ಪರಿವೀಕ್ಷಕ(ಟಿಟಿಇ) ಅಶ್ರಫ್‌ ಕಿತ್ತೂರ ಟಿಕೆಟ್‌ ತಪಾಸಣೆ ಮಾಡುತ್ತಿದ್ದರು. ಆಗ ಮುಸುಕುಧಾರಿಯಾಯಾಗಿದ್ದ ಪ‍್ರಯಾಣಿಕ ಹಲ್ಲೆಗೆ ಮುಂದಾದ. ಆಗ ಟಿಟಿಇ ನೆರವಿಗೆ ಬಂದ ಆನ್‌ ಮೋಡ್‌ ಹೌಸ್‌ಕೀಪಿಂಗ್‌ ಸ್ಟಾಫ್‌ ದೇವ‌ರ್ಷಿ ವರ್ಮಾ(23) ಮೇಲೆಯೂ ಹಲ್ಲೆ ಮಾಡಿದ್ದು, ಅವರು ಮೃತಪಟ್ಟಿದ್ದಾರೆ. ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದರು.

ರೈಲಿನಲ್ಲಿ ಭದ್ರತೆ ಕೊರತೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ನಿತ್ಯ 1,400 ರೈಲು ಕಾರ್ಯಾಚರಣೆ ನಡೆಸುತ್ತವೆ. ಆದರೆ, ರೈಲಿನಲ್ಲಿ ಭದ್ರತೆಗಾಗಿ ನಮ್ಮ ಬಳಿ ಇರುವುದು 830 ಸಿಬ್ಬಂದಿ ಮಾತ್ರ. ಒಂದು ರೈಲಿಗೆ ಒಬ್ಬ ಸಿಬ್ಬಂದಿ ನಿಯೋಜಿಸಲು ಆಗದ ಪರಿಸ್ಥಿತಿ ಇದೆ. ಹಾಗಾಗಿ ಅಪರಾಧಗಳ ಪ್ರಮಾಣ ಹಾಗೂ ಸೂಕ್ಷ್ಮ ಪ್ರದೇಶ ಆಧರಿಸಿ, ಆಯಾ ಮಾರ್ಗಗಳಲ್ಲಿ ಸಂಚರಿಸುವ ರೈಲುಗಳಲ್ಲಿ ಸಿಬ್ಬಂದಿ ನಿಯೋಜಿಸುತ್ತಿದ್ದೇವೆ. ಸಿಬ್ಬಂದಿ  ಹೆಚ್ಚಿಸಲು ಕ್ರಮ ಕೈಗೊಳುತ್ತೇವೆ ಎಂದರು.

ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಹಾಜರಿದ್ದರು.