ಮನೆ ರಾಜ್ಯ ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ

ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ

0

ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಖಂಡಿಸಿ ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಿಂದ ಪ್ರತಿಭಟನಾ‌ ಮೆರವಣಿಗೆಯಲ್ಲಿ ಆಗಮಿಸಿದ ನೂರಾರು ಜನ ನಟ ದರ್ಶನ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಮೌನಾಚರಣೆ ಆಚರಿಸಿದರು.

ಕೊಲೆಗಡುಕ ದರ್ಶನ್, ಖಳನಾಯಕ ದರ್ಶನ್ ಗೆ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಜರಂಗದಳ, ರೈತ ಸಂಘಟನೆಗಳು, ವೀರಶೈವ ಸಮಾಜ, ಜಂಗಮ ಸಮಾಜ, ಕರವೇ, ಕರುನಾಡ ರಕ್ಷಣಾ ವೇದಿಕೆ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಕ್ಷುಲ್ಲಕ ಕಾರಣಕ್ಕಾಗಿ ರೇಣುಕಾಸ್ವಾಮಿಯನ್ನು ಅಜ್ಞಾತ ಪ್ರದೇಶದಲ್ಲಿ ಒಂದು ದಿನವಿಡೀ ಚಿತ್ರಹಿಂಸೆ ಕೊಟ್ಟು ಪ್ರಾಣ ತೆಗೆದಿರುವುದು ಖಂಡನೀಯ ಎಂದರು.

ಸ್ಟಾರ್ ಪಟ್ಟಕ್ಕೆ ಏರಿದವರು ಕಾನೂನು ಕೈಗೆ ತೆಗೆದುಕೊಳ್ಳಬಹುದು, ದುಡ್ಡಿದೆ, ಏನು ಬೇಕಾದರು ಮಾಡಬಹುದು ಎನ್ನುವ ದುರಾಹಂಕಾರ ಮೆಟ್ಟಲು ಈ ಹೋರಾಟ ಎಂದು ಹೇಳಿದರು.

ಪೊಲೀಸರು, ಗೃಹ ಮಂತ್ರಿಗಳು ಅವರನ್ನು ಉಳಿಸುವ ಪ್ರಯತ್ನ ‌ಮಾಡಿದರೆ ನಮ್ಮ ಹೋರಾಟ ತೀವ್ರವಾಗುತ್ತದೆ. ಸರ್ಕಾರ ಸಾವಿಗೆ ನ್ಯಾಯ ಕೊಡಿಸಬೇಕು. ದರ್ಶನ್ ಅಭಿಮಾನಿ ಸಂಘವನ್ನ ಇವತ್ತೇ ವಿಸರ್ಜನೆ ಮಾಡಿ ರೇಣುಕಾಸ್ವಾಮಿ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ದರ್ಶನ್ ಸಿನಿಮಾಗಳಲ್ಲಿ ಮಾತ್ರ ಆದರ್ಶ ವ್ಯಕ್ತಿ.‌ ಆದರೆ,‌ ನಿಜ ಜೀವನದಲ್ಲಿ‌ ಭಿನ್ನವಾದ ವ್ಯಕ್ತಿ. ತಂದೆ ತಾಯಿಗಳು ಮುಪ್ಪಿನ ಕಾಲದಲ್ಲಿರುವವರ ಮಗನ ಕೊಲೆ ಮಾಡಿಸಿರುವುದು ನಿಜಕ್ಕೂ ಬೇಸರ ಎಂದರು.

ರಾಜ್ಯದಲ್ಲಿ ಇಂತಹ ಅನೇಕ ಘಟನೆಗಳು ನಡೆದಿದ್ದು,‌ನಿರ್ವಹಣೆ ಮಾಡುವಲ್ಲಿ ಸರಕಾರ ವಿಫಲವಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರಂಭದಲ್ಲಿ ಎ1 ಆಗಿದ್ದ ವ್ಯಕ್ತಿ, ಎ2 ಆಗಿದ್ದಾರೆ. ಗೃಹಮಂತ್ರಿ ದರ್ಶನ್ ಪಾತ್ರದ ಬಗ್ಗೆ ಇನ್ನೂ ತಿಳಿದುಕೊಳ್ಳಬೇಕು ಎಂದು ಅಸಮಧಾನ ವ್ಯಕ್ತಪಡಿಸಿದರು.

ನಟ ದರ್ಶನ್ ಹಾಗೂ ಈ ಕೊಲೆ ಪ್ರಕರಣದಲ್ಲಿ ಭಾಗಿಯಾದವರಿಗೆ ಭಾರತದ ಕಾನೂನಿನ‌ ಅನ್ವಯ ಕಠಿಣ ಶಿಕ್ಷೆ ಆಗಲೇಬೇಕು. ದರ್ಶನ್ ಮೇಲ್ನೋಟಕ್ಕೆ ನೇರವಾಗಿ ಸಿಕ್ಕಿ ಬಿದ್ದಿದ್ದಾರೆ. ಅವರಿಗೆ ಜೀವಾವಧಿ ಶಿಕ್ಷೆ ಆಗಬೇಕು ಎಂದರು.

ಕರವೇ ಜಿಲ್ಲಾಧ್ಯಕ್ಷ ರಮೇಶ್, ನ್ಯಾಯವಾದಿಗಳಾದ ಕೆ.ಎನ್.ವಿಶ್ವನಾಥಯ್ಯ ಉಮೇಶ್, ಗುರು, ನಗರಸಭೆ ಮಾಜಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಕೆ.ಎಂ.ವೀರೇಶ್, ಪಟೇಲ್ ಶಿವಕುಮಾರ್, ಶ್ರೀ ಬಸವನಾಗೀದೇವ ಸ್ವಾಮೀಜಿ, ಬಜರಂಗದಳ ರಾಜ್ಯ ಸಂಯೋಜಕ ಪ್ರಭಂಜನ್, ಕೆಇಬಿ ಷಣ್ಮುಖಪ್ಪ, ಮಹಡಿ ಶಿವಮೂರ್ತಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.