ಮನೆ ರಾಜ್ಯ ಬಡತನ ನಿರ್ಮೂಲನೆಗಾಗಿ ಕರ್ನಾಟಕ ಅಂತರ್ಗತ ಜೀವನೋಪಾಯ ಕಾರ್ಯಕ್ರಮ (ಕೆಎಲ್ ಐಪಿ) ಅನುಷ್ಠಾನ: ಸಚಿವ ಶರಣಪ್ರಕಾಶ್ ಪಾಟೀಲ್

ಬಡತನ ನಿರ್ಮೂಲನೆಗಾಗಿ ಕರ್ನಾಟಕ ಅಂತರ್ಗತ ಜೀವನೋಪಾಯ ಕಾರ್ಯಕ್ರಮ (ಕೆಎಲ್ ಐಪಿ) ಅನುಷ್ಠಾನ: ಸಚಿವ ಶರಣಪ್ರಕಾಶ್ ಪಾಟೀಲ್

0

ಬೆಂಗಳೂರು: ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ರಾಜ್ಯದ ಬಡತನ ನಿರ್ಮೂಲನೆ ಹಾಗೂ ಬಡಜನರ ಶ್ರೇಯೋಭಿವೃದ್ಧಿಗಾಗಿ ಕೈಗೊಳ್ಳುತ್ತಿರುವ ಮಹತ್ವದ ಕಾರ್ಯಯೋಜನೆಯ ಭಾಗವಾಗಿ ಮಂಗಳವಾರ ಕರ್ನಾಟಕ ಅಂತರ್ಗತ ಜೀವನೋಪಾಯ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ.

Join Our Whatsapp Group

ರಾಷ್ಟ್ರೀಯ ಜೀವನೋಪಾಯ ಮಿಷನ್, ಕರ್ನಾಟಕ ಮತ್ತು ಬಡತನ ನಿರ್ಮೂಲ ಕಾರ್ಯಕ್ರಮಗಳಿಗೆ ಹೆಸರುವಾಸಿಯಾದ ಜಾಗತಿಕ ಸಂಸ್ಥೆಯಾದ  ಬ್ರ್ಯಾಕ್ (BRAC) ಇಂಟರ್ನ್ಯಾಷನಲ್ ನಡುವೆ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ತಿಳುವಳಿಕೆ ಪತ್ರ (ಎಂಒಯು) ಕ್ಕೆ ಮಂಗಳವಾರ ವಿಕಾಸ ಸೌಧದಲ್ಲಿ  ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಅವರ ಸಮ್ಮುಖದಲ್ಲಿ ರಾಷ್ಟ್ರೀಯ ಜೀವನೋಪಾಯ ಮಿಷನ್‍ನ ಮಿಷನ್ ನಿರ್ದೇಶಕಿ ಪಿಐ ಶ್ರೀ ವಿದ್ಯಾ ಮತ್ತು ಶ್ವೇತಾ ಎಸ್ ಬ್ಯಾನರ್ಜಿ, ಕಂಟ್ರಿ ಲೀಡ್ – ಇಂಡಿಯಾ, ಬ್ರ್ಯಾಕ್ ಇಂಟರ್ ನ್ಯಾಷನಲ್ ನಡುವೆ ಸಹಿ ಹಾಕಲಾಯಿತು.

ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಕುರಿತು  ಮಾತನಾಡಿದ  ಶರಣ ಪ್ರಕಾಶ್ ಪಾಟೀಲ್, 23 ಕೋಟಿ ಬಜೆಟ್‍ನಲ್ಲಿ 4,000 ಕುಟುಂಬಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿರುವ ಈ ಕೆಐಎಲ್‍ಪಿ ಕಾರ್ಯಕ್ರಮವು   ಅತ್ಯಂತ ಬಡ ಕುಟುಂಬಗಳಿಗೆ ಸುಸ್ಥಿರ, ಲಿಂಗ-ಸಮಾನ ಮತ್ತು ಹವಾಮಾನ-ನಿರೋಧಕ ಜೀವನೋಪಾಯವನ್ನು ಸೃಷ್ಟಿಸುವ ಗುರಿ ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದ 10 ಜಿಲ್ಲೆಗಳ 20 ತಾಲೂಕುಗಳಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಳಪೆ ಸ್ಥಾನ ಪಡೆದಿದೆ. ಇದು ಅತ್ಯಂತ ದುರ್ಬಲ ಗುಂಪುಗಳನ್ನು, ವಿಶೇಷವಾಗಿ ಮಹಿಳೆಯರನ್ನು ಗುರಿಯಾಗಿಸುತ್ತದೆ ಮತ್ತು ಆತ್ಮವಿಶ್ವಾಸ, ಕೌಶಲ್ಯ ತರಬೇತಿ, ಜೀವನೋಪಾಯವನ್ನು ಹೆಚ್ಚಿಸುವ, ಸಾಮಾಜಿಕ ಸೇರ್ಪಡೆಯನ್ನು ಉತ್ತೇಜಿಸುವ ಮತ್ತು ಸಾಮಥ್ರ್ಯ-ನಿರ್ಮಾಣ ವಿಧಾನದ ಮೂಲಕ ಆರ್ಥಿಕ ಸಮೃದ್ಧಿಯನ್ನು ಉತ್ತೇಜಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುತ್ತದೆ ಎಂದು ಹೇಳಿದರು.

ಈ ಯೋಜನೆಯು 2027ರ ವೇಳೆಗೆ 50,000 ಅತ್ಯಂತ ಬಡ ಕುಟುಂಬಗಳಿಗೆ ಮತ್ತು 2029ರ ವೇಳೆಗೆ 2,50,000 ಕುಟುಂಬಗಳಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲಿದೆ. ಬಡತನ, ಅಸಮಾನತೆಗಳು, ಪ್ರಾದೇಶಿಕ ಅಸಮಾನತೆಗಳು ಮತ್ತು ಜೀವನೋಪಾಯದ ಸಮಸ್ಯೆಗಳನ್ನು ಪರಿಹರಿಸಲು ವಿನ್ಯಾಸಗೊಳಿಸಲಾಗಿದೆ.  ಸುಸ್ಥಿರ ಜೀವನೋಪಾಯಗಳು, ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆ, ಆದಾಯ ವರ್ಧನೆ, ಸರ್ಕಾರದ ಕಲ್ಯಾಣ ಯೋಜನೆಗಳಿಗೆ ಪ್ರವೇಶ, ಲಿಂಗ ಸಮಾನತೆ, ಮಹಿಳೆಯರು ಮತ್ತು ಸಾಮಾಜಿಕ ಸಬಲೀಕರಣವು ಇದರ  ಪ್ರಮುಖ ಉದ್ದೇಶವಾಗಿದೆ.  ಬ್ರ್ಯಾಕ್  ಇಂಟರ್ ನ್ಯಾಷನಲ್  ಸಂಸ್ಥೆಯ   ಮೂಲಕ ರಾಜ್ಯ ಮಟ್ಟದ ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್ ಯುನಿಟ್ (ಎಸ್‍ಪಿಎಂಯು) ಮತ್ತು ಜಿಲ್ಲಾ ಮಟ್ಟದ ಸಮನ್ವಯ ಘಟಕಗಳ ಮೂಲಕ ಕಾರ್ಯಕ್ರಮವನ್ನು ವಿನ್ಯಾಸ ಹಾಗೂ  ಕಾರ್ಯಗತಗೊಳಿಸಲು ತಾಂತ್ರಿಕ ಪರಿಣತಿ ಮತ್ತು ಬೆಂಬಲವನ್ನು ನೀಡುತ್ತದೆ ಎಂದು ಉಮಾ ಮಹದೇವನ್ ಮಾಹಿತಿ ನೀಡಿದರು.

ಫಲಾನುಭವಿಗಳ ಆಯ್ಕೆಯಲ್ಲಿ ಗ್ರಾಮ ಸಭೆಗಳು, ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳು ಮತ್ತು ಸ್ವ-ಸಹಾಯ ಗುಂಪುಗಳು  ಪ್ರಮುಖ ಪಾತ್ರವನ್ನು ವಹಿಸುತ್ತವೆ. ಪ್ರಾಯೋಗಿಕ ಹಂತದಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ  ಬಾದಾಮಿ, ಬೀದರ್ ನ ಔರಾದ್, ಕಮಲನಗರ, ಕಲಬುರಗಿಯ ಕಾಳಗಿ ಮತ್ತು ಶಹಾಬಾದ, ರಾಯಚೂರಿನ ಮಸ್ಕಿ , ಸಿರವಾರ, ಯಾದಗಿರಿಯ ವಡಗೇರಾ , ಗುರುಮಿಟ್ಕಲ್ , ಕೊಪ್ಪಳ ಜಿಲ್ಲೆಯ  ಕನಕಗಿರಿ, ಗಂಗಾವತಿ, ತಾಳಿಕೋಟೆ, ಅಲ್ಮೇಲ್,  ವಿಜಯಪುರ, ವಿಜಯನಗರ ಜಿಲ್ಲೆಯ  ಕೂಡ್ಲಿಗಿ  ಹರಪನಹಳ್ಳಿ, ಕಂಪ್ಲಿ  ಬಳ್ಳಾರಿ ಜಿಲ್ಲೆಯ  ಕುರುಗೋಡು, ಚಾಮರಾಜನಗರ ಜಿಲ್ಲೆಯ  ಗುಂಡ್ಲುಪೇಟೆ ಮತ್ತು ಯಳಂದೂರು ಸೇರಿದಂತೆ 20 ತಾಲೂಕುಗಳನ್ನು ಪ್ರಾಯೋಗಿಕ ಹಂತದಲ್ಲಿ ಅನುಷ್ಟಾನ ಮಾಡುವುದಾಗಿ ತಿಳಿಸಿದರು.

ಭಾರತ ಕಾರ್ಯಕ್ರಮ ಸಂಯೋಜಕ ಅಜಿತ್ ರಂಜನ್,  ಬ್ರಾಕ್ ಇಂಟರ್ನ್ಯಾಷನಲ್ ಕಾರ್ಯಕ್ರಮ ಅಧಿಕಾರಿ ರಮೇಶ್ ವೇಲೂರು,  ಬ್ರಾಕ್ ಇಂಟರ್ನ್ಯಾಷನಲ್ ಇಂಟಿಗ್ರೇಟರ್ ದಿಬ್ಯೇಂದು ಚೌಧುರಿ, ರಿಸರ್ಚ್ ಅಸೋಸಿಯೇಟ್‍ನ ಡಾ. ಪ್ರಣವ್ ತ್ರಿಗುಣಾಯತ್,  ರಾಜ್ಯ ಕಾರ್ಯಕ್ರಮ ನಿರ್ವಹಣಾ ಘಟಕದ ಸದಸ್ಯರು ಮತ್ತು ರಾಷ್ಟ್ರೀಯ ಜೀವನೋಪಾಯ ಮಿಷನ್‍ನ ಹಿರಿಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.