ಮನೆ ರಾಜ್ಯ ದಸರಾ ಆಚರಣೆ 2024: ಅದ್ದೂರಿ ಆಚರಣೆಗೆ ಉಪಸಮಿತಿಗಳು ಉತ್ತಮ ಸಿದ್ಧತೆ ನಡೆಸಿ ಯಶಸ್ವಿಗೊಳಿಸಿ- ಡಾ ಹೆಚ್...

ದಸರಾ ಆಚರಣೆ 2024: ಅದ್ದೂರಿ ಆಚರಣೆಗೆ ಉಪಸಮಿತಿಗಳು ಉತ್ತಮ ಸಿದ್ಧತೆ ನಡೆಸಿ ಯಶಸ್ವಿಗೊಳಿಸಿ- ಡಾ ಹೆಚ್ ಸಿ ಮಹದೇವಪ್ಪ

0

ಮೈಸೂರು: ಈ ಬಾರಿ ಅದ್ದೂರಿ ದಸರಾ ಆಚರಣೆಗೆ ಹೈ ಪವರ್ ಕಮಿಟಿಯಲ್ಲಿ ತೀರ್ಮಾನಿಸಿದ್ದು, ಈ ಸಂಬಂಧ 19 ಉಪಸಮಿತಿಗಳನ್ನು ರಚಿಸಿದ್ದು ಸಮಿತಿಯ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ದಸರಾ ಆಚರಣೆಯನ್ನು ಯಶಸ್ವಿಗೊಳಿಸಿ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ಸಿ ಮಹದೇವಪ್ಪ ಅವರು ತಿಳಿಸಿದರು.

Join Our Whatsapp Group

ಇಂದು ಅರಮನೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದಸರಾ ಉಪಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲಾ ಸಮಿತಿಯ ಅಧಿಕಾರಿಗಳು ಸೂಕ್ತ ತಯಾರಿ ಮಾಡಿಕೊಂಡು ಅಚ್ಚುಕಟ್ಟಾಗಿ ದಸರಾ ಆಚರಣೆ ಮಾಡಬೇಕು. ಸ್ತಬ್ಧ ಚಿತ್ರಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತೆ ಇರಬೇಕು. ಜನರಿಗೆ ಸಾಮಾಜಿಕ ಸಂದೇಶ ಸಾರುವಂತೆ ಇರಬೇಕು. ಸಂವಿಧಾನದ ಸಂದೇಶ, ಪೂರ್ವ ಪೀಠಿಕೆಯ ಮಹತ್ವವನ್ನು ತಿಳಿಸುವ ಸ್ಥಬ್ದ ಚಿತ್ರ ತಯಾರಿಕೆಗೆ ಮಾಡಬೇಕು ಎಂದು ಸ್ಥಬ್ದ ಚಿತ್ರ ಉಪಸಮಿತಿಗೆ ತಿಳಿಸಿದರು.

ರೈತರು ದೇಶದ ಬೆನ್ನೆಲುಬು. ರೈತ ದಸರಾದಲ್ಲಿ ರೈತರಿಗೆ ಅನುಕೂಲವಾಗುವ ಕೃಷಿ ಸಾಧನ ಸಲಕರಣೆಗಳ ಪ್ರದರ್ಶನ ಏರ್ಪಡಿಸಬೇಕು. ಸಬ್ಸಿಡಿ ದರದಲ್ಲಿ ದೊರೆಯುವ ಆದುನಿಕ ಕೃಷಿ ಸಲಕರಣೆಗಳ ಬಗ್ಗೆ ಮಾಹಿತಿ ಒದಗಿಸಬೇಕು. ಶುಂಠಿ ಬೆಳೆಯನ್ನು ಬೆಳೆಯಲು ರೈತರು ಭೂಮಿಯನ್ನು ಗುತ್ತಿಗೆಗೆ ನೀಡುತ್ತಿದ್ದು, ಶುಂಠಿ ಬೆಳೆಯನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಕಡಿಮೆ ಆಗಿ ಮುಂದಿನ ಒಂದೆರಡು ವರ್ಷ ಉತ್ತಮ ಬೆಳೆ ಬರುವುದಿಲ್ಲ. ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು ಎಂದರು.

ದಸರಾ ಕ್ರೀಡಾಕೂಟಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಭಾಗವಹಿಸುತ್ತಾರೆ. ಇವರಿಗೆ ಉತ್ತಮ ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಬೇಕು. ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಮ್ಮ ದೇಶದ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಬೇಕು. ಜನಪದ ಕಲೆಗಳನ್ನು ಪ್ರದರ್ಶನ ಮಾಡಬೇಕು. ಕಲಾವಿದರಿಗೆ ಪಾರದರ್ಶಕವಾಗಿ ಅವಕಾಶ ಕಲ್ಪಿಸಬೇಕು. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

 ಮಕ್ಕಳಿಗೆ ಚಿತ್ರ ಕಲಾ ಸ್ಪರ್ಧೆಗಳನ್ನು ಆಯೋಜನೆ ಮಾಡಬೇಕು. ಕರಕುಶಲ ವಸ್ತುಗಳ ಸ್ಪರ್ಧೆಯನ್ನು ಏರ್ಪಡಿಸಬೇಕು.  ಕವಿಗೋಷ್ಠಿಯನ್ನು ವಿಶಿಷ್ಟ ರೀತಿಯಲ್ಲಿ ಆಯೋಜನೆ ಮಾಡಿ ಯುವ ಕವಿಗಳಿಗೆ ಆದ್ಯತೆ ನೀಡಬೇಕು. ಯೋಗ ದಸರಾದಲ್ಲಿ ಆರೋಗ್ಯಯುತ ಜೀವನಕ್ಕಾಗಿ ಯೋಗ ಎಂಬ ಅರಿವನ್ನು ಮೂಡಿಸುವ ಹಾಗೆ ಇರಬೇಕು. ಆಹಾರ ಮೇಳದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಆರೋಗ್ಯಕರ ಗುಣಮಟ್ಟದ ತಿಂಡಿ ತಿನಿಸುಗಳ ಮರಾಟವಾಗಬೇಕು. ಮೈಸೂರು ನಗರದ ರಸ್ತೆಗಳ ಗುಂಡಿಗಳ ಮುಚ್ಚುವ ಕಾರ್ಯವನ್ನು ಸಂಬಂದಿಸಿದ ಅಧಿಕಾರಿಗಳು ಮಾಡಬೇಕು ಎಂದು ತಿಳಿಸಿದರು.

ದಸರಾ ಚಲನಚಿತ್ರೋತ್ಸವದಲ್ಲಿ ಸಾಮಾಜಿಕ ಕಳಕಳಿಯುಳ್ಳ ಕಲಾತ್ಮಕ ಚಿತ್ರಗಳ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ವಿವಿಧ ಉಪಸಮಿತಿಗಳ  ಉಪ ವಿಶೇಷಾಧಿಕಾರಿಗಳು ತಾವು ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ಎಂ ಗಾಯತ್ರಿ, ನಗರ ಪೊಲೀಸ್ ಆಯುಕ್ತರಾದ  ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜು, ಉಪಸಮಿತಿಗಳ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.