ಮನೆ ಸ್ಥಳೀಯ ಅ.3 ರಂದು ಸಿ.ಎಂ ಕಪ್ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ: ಜಿತೇಂದ್ರ ಶೆಟ್ಟಿ

ಅ.3 ರಂದು ಸಿ.ಎಂ ಕಪ್ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ: ಜಿತೇಂದ್ರ ಶೆಟ್ಟಿ

0

ಮೈಸೂರು: ಪ್ರತಿ ವರ್ಷದಂತೆ ಈ ವರ್ಷವು ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅ. 3 ರಿಂದ 6 ರ ವರೆಗೆ ದಸರಾ ಸಿ ಎಂ ಕಪ್ ಕ್ರೀಡಾಕೂಟ ಆಯೋಜಿಸಲಾಗಿದ್ದು, ಅ. 03 ರಂದು ಉದ್ಘಾಟನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ದಸರಾ ಕ್ರೀಡಾಕೂಟ ಉಪಸಮಿತಿಯ ಕಾರ್ಯಧ್ಯಕ್ಷರಾದ ಡಾ. ಜಿತೇಂದ್ರ ಶೆಟ್ಟಿ ಅವರು ತಿಳಿಸಿದರು.

Join Our Whatsapp Group

ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ದಸರಾ ಸಿ ಎಂ ಕಪ್ ಆಯೋಜನೆ ಸಂಬಂಧ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್. ಮಹದೇವಪ್ಪ ನವರು ಭಾಗವಹಿಸಲಿದ್ದಾರೆ. ನರಸಿಂಹರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಬಾರಿ ದಸರಾ ಸಿ.ಎಂ ಕಪ್ ಕ್ರೀಡಾಕೂಟ ಉದ್ಘಾಟನೆಗೆ 2024 ರ ಪ್ಯಾರಿಸ್ ಒಲಂಪಿಕ್ಸ್ ನ ಕಂಚಿನ ಪದಕದ ವಿಜೇತರಾದ ಭಾರತದ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಕರ್ನಾಟಕ ರಾಜ್ಯದ ಬೆಳಗಾಂ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕಲಬುರ್ಗಿ ಮತ್ತು ಮೈಸೂರು ವಿಭಾಗಗಳಿಂದ ಸುಮಾರು 3000 ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ಹಾಗೂ 800 ತಾಂತ್ರಿಕ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ ಎಂದರು.

ಕ್ರೀಡಾಕೂಟವು ಮೂರು ಹಂತದಲ್ಲಿ ನಡೆಯಲಿದ್ದು, ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು, ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡ ದಸರಾ ಸಿ.ಎಂ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ಮತ್ತು ತಾಂತ್ರಿಕ ಅಧಿಕಾರಿಗಳಿಗೆ ಸಮವಸ್ತ್ರ ಹಾಗೂ ಕ್ರೀಡಾಕೂಟ ನಡೆಯುವ ಪ್ರಾರಂಭದಿಂದ ಕ್ರೀಡಾಕೂಟ ಮುಕ್ತಾಯದವರೆಗೆ ಬೆಳಗಿನ ಉಪಹಾರ ಮಧ್ಯಾಹ್ನದ ಭೋಜನ ಮತ್ತು ರಾತ್ರಿಯ ಊಟದ ವ್ಯವಸ್ಥೆಯನ್ನು ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸುವುದರ ಜೊತೆಗೆ ವಾಸ್ತವ್ಯಕ್ಕಾಗಿ ನಗರದ ವಿವಿಧ ಹೋಟೆಲ್ ಗಳಲ್ಲಿ ವಿವಿಧ ದರ್ಜೆ ವಸತಿ ವ್ಯವಸ್ಥೆಯನ್ನು ಸುಮಾರು 4000 ಜನಕ್ಕೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ಚಾಮಂಡಿ ವಿಹಾರದ ಮುಖ್ಯ ಕೋಚ್ ಆದ ವಸಂತ್ ಕುಮಾರ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಭಾಸ್ಕರ್ ನಾಯಕ್ ಅವರು ಉಪಸ್ಥಿತರಿದ್ದರು.