ಮಡಿಕೇರಿ: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಗುರುವಾರ ಬೆಳಿಗ್ಗೆ 7.40ಕ್ಕೆ ಕಾವೇರಿ ಪವಿತ್ರ ತೀರ್ಥೋದ್ಭವವಾಯಿತು ಎಂದು ಅರ್ಚಕರು ಘೋಷಿಸುತ್ತಿದ್ದಂತೆ ಹರ್ಷೋದ್ಘಾರಗಳು ಮುಗಿಲು ಮುಟ್ಟಿದವು.
ತೀರ್ಥವನ್ನು ಸುತ್ತಲೂ ಸೇರಿದ್ದ ಭಕ್ತರ ಮೇಲೆ ಅರ್ಚಕರು ಸಿಂಪಡಿಸುತ್ತಿದ್ದಂತೆ ಭಕ್ತರೆಲ್ಲರೂ ಕೈಮುಗಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಪಾರ ಜನಸ್ತೋಮ ತೀರ್ಥ ತುಂಬಿಸಿಕೊಳ್ಳಲು ಮುಗಿಬಿದ್ದರು.
ಇದಕ್ಕೂ ಮುನ್ನ ಅಪಾರ ಸಂಖ್ಯೆಯಲ್ಲಿ ಭಕ್ತ ವೃಂದ ಭಾಗಮಂಡಲದಿಂದ ಕಾಲ್ನಡಿಗೆಯಲ್ಲಿ ತಲಕಾವೇರಿಯವರೆಗೂ ಬಂದರು. ಭಾಗಮಂಡಲದಿಂದ ತಲಕಾವೇರಿಯವರೆಗೂ ಉಚಿತ ಕೆಎಸ್ಆರ್ಟಿಸಿ ಬಸ್ ಪ್ರಯಾಣ ಕಲ್ಪಿಸಲಾಗಿತ್ತು. ಬುಧವಾರ ರಾತ್ರಿ ಇಡಿ ಕ್ಷೇತ್ರದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.