ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಮ್’ ಪಕ್ಷವು 108 ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ.ಮೊದಲ ಚುನಾವಣೆಯಲ್ಲೇ ಇಷ್ಟು ದೊಡ್ಡ ಗೆಲುವು ದಾಖಲಿಸಿದ್ದು ನಿಜಕ್ಕೂ ಸಾಧನೆಯೇ ಸರಿ. ವಿಜಯ್ ಅವರ ರಾಜಕೀಯ ಯಶಸ್ಸಿಗೆ ಭಾರತೀಯ ಚಿತ್ರರಂಗದ ಅನೇಕ ಗಣ್ಯರು ಶುಭ ಹಾರೈಸುತ್ತಿದ್ದಾರೆ.
ಕನ್ನಡದ ಹಿರಿಯ ನಟ ಶಿವರಾಜ್ಕುಮಾರ್ ಕೂಡ ವಿಜಯ್ಗೆ ವಿಶ್ ಮಾಡಿದ್ದಾರೆ. ಈ ಗೆಲುವಿಗೆ ನೀವು ಅರ್ಹರು ಎಂದು ಹೇಳಿದ್ದಾರೆ. ಶಿವರಾಜ್ಕುಮಾರ್ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಅವರು ತಮ್ಮ ಟ್ವಿಟರ್ ಖಾತೆ ಮೂಲಕ ವಿಜಯ್ಗೆ ಅಭಿನಂದನೆ ತಿಳಿಸಿದ್ದಾರೆ.‘ದಳಪತಿ ವಿಜಯ್ ಅವರಿಗೆ ಸಿಕ್ಕಿದ್ದು ಅರ್ಹ ಗೆಲುವು. ನಿಮ್ಮ ಮೇಲೆ ಕಟುವಾದ ಟೀಕೆಗಳು ಬಂದಾಗಲೂ ಮೌನವಾಗಿದ್ದು, ಕೆಲಸವೇ ಮಾತನಾಡಲಿ ಎಂದು ಬಿಡುವುದು ಅತಿದೊಡ್ಡ ವಿಜಯವಾಗಿದೆ.
ಒಮ್ಮೆ ಮಾಧ್ಯಮಗಳ ಜೊತೆಗಿನ ಮಾತುಕತೆಯ ವೇಳೆ ನಾನು ತಮಾಷೆಯಾಗಿ ‘TVK ಎಂದರೆ ಟ್ರೈ ವಿಜಯ್ ಆಸ್ ಕಿಂಗ್’ (Try Vijay As King) ಎಂದು ಹೇಳಿದ್ದೆ. ಇಂದು ನೀವು ರಾಜನಂತೆ ಎತ್ತರವಾಗಿ ನಿಂತಿದ್ದೀರಿ’ ಎಂದು ಶಿವಣ್ಣ ಹೇಳಿದ್ದಾರೆ. ತಮಿಳುನಾಡು ಜನತೆಗೆ ಅನೇಕ ಆಶ್ವಾಸನೆಗಳನ್ನು ವಿಜಯ್ ನೀಡಿದ್ದಾರೆ. ಇವುಗಳನ್ನು ಈಡೇರಿಸುವಂತೆ ಆಗಲಿ ಎಂಬುದು ಶಿವಣ್ಣನ ಹಾರೈಕೆ. ‘ತಮಿಳುನಾಡಿನ ಜನತೆಗೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುವ ಶಕ್ತಿ ನಿಮಗೆ ಸಿಗಲಿ ಮತ್ತು ರಾಜ್ಯವು ಅಭಿವೃದ್ಧಿಯತ್ತ ಸಾಗಲಿ’ ಎಂದು ಶಿವಣ್ಣ ಆಶಿಸಿದ್ದಾರೆ.
ದಳಪತಿ ವಿಜಯ್ ಮತ್ತು ಶಿವರಾಜ್ಕುಮಾರ್ ತಮ್ಮ ತಮ್ಮ ಚಿತ್ರರಂಗದಲ್ಲಿ ಹೆಸರು ಮಾಡಿದವರು. ಇಬ್ಬರೂ ಪರಸ್ಪರ ಗೌರವ ಹೊಂದಿರುವ ನಟರು. ಹೀಗಾಗಿ, ವಿಜಯ್ ಅವರಿಗೆ ಶಿವಣ್ಣ ಶುಭ ಹಾರೈಸಿದ್ದಾರೆ. ಇನ್ನು, 2026ರ ಚುನಾವಣೆಯಲ್ಲಿ ವಿಜಯ್ ಅವರ ಪಕ್ಷ 108 ಸ್ಥಾನಗಳನ್ನು ಗೆದ್ದಿರುವುದು ತಮಿಳುನಾಡು ರಾಜಕೀಯದಲ್ಲಿ ಹೊಸ ಬದಲಾವಣೆಗೆ ಮುನ್ನುಡಿ ಬರೆದಿದೆ. ವಿಜಯ್ ಅವರ ಕೊನೆಯ ಸಿನಿಮಾವನ್ನು ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ನಿರ್ಮಾಣ ಮಾಡಿದೆ. ವಿಜಯ್ ಸಿಎಂ ಆದ ಬಳಿಕ ಈ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.
















