ಮನೆ ರಾಜ್ಯ ಒಂದು ಕುಟುಂಬದಲ್ಲಿ ಒಬ್ಬರಿಗೆ ಬಿಜೆಪಿ ಟಿಕೆಟ್: ಶಾಸಕ ಬಸನಗೌಡ ಪಾಟೀಲ ಯತ್ನಾಳ

ಒಂದು ಕುಟುಂಬದಲ್ಲಿ ಒಬ್ಬರಿಗೆ ಬಿಜೆಪಿ ಟಿಕೆಟ್: ಶಾಸಕ ಬಸನಗೌಡ ಪಾಟೀಲ ಯತ್ನಾಳ

0

ಬೆಳಗಾವಿ(Belagavi): ಕರ್ನಾಟಕದಲ್ಲಿಯೂ ಗುಜರಾತ್ ಮಾದರಿಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಲಾಗುತ್ತಿದ್ದು, ಒಂದು ಕುಟುಂಬದಲ್ಲಿ ಒಬ್ಬರಿಗೇ ಟಿಕೆಟ್ ಸಿಗುತ್ತದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಗುಜರಾತ್ ಮಾದರಿಯಲ್ಲೇ ಹೊಸಬರಿಗೆ ಅವಕಾಶ ನೀಡಬೇಕು. ಈ ಸಲ ಬಹಳಷ್ಟು ಜನರನ್ನು ಬದಲಾವಣೆ ಮಾಡುತ್ತಾರೆ. ಯಾರ ಮೇಲೆ ಆರೋಪ ಇದೆ ಅಂಥವರನ್ನು ತೆಗೆಯುವುದು, ಒಂದೇ ಕುಟುಂಬದಲ್ಲಿ ಎರಡು ಮೂರು ಟಿಕೆಟ್ ಸಿಗುವುದಿಲ್ಲ ಎಂದರು.

ಒಂದು ಕುಟುಂಬದಲ್ಲಿ ಬಹಳ ಜನ ಜಾಕೆಟ್ ಹೊಲಿಸಿಕೊಂಡು ಕುಳಿತಿದ್ದಾರೆ. ಅಪ್ಪ-ಮಕ್ಕಳು, ಅಣ್ಣ-ತಮ್ಮ ಅವರಿಗೆ ಟಿಕೆಟ್ ಸಿಗುವುದಿಲ್ಲ. ಒಂದು ಕುಟುಂಬಕ್ಕೆ ಒಂದು ಟಿಕೆಟ್ ಸಿಗುತ್ತದೆ. ಕರ್ನಾಟಕದ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಬೀಳುತ್ತದೆ ಎಂದರು.

ಸಂಪುಟ ವಿಸ್ತರಣೆ ಯಾರಿಗೆ ಬೇಕು, ಎಲ್ಲವನ್ನೂ ಬೊಮ್ಮಾಯಿ ಅವರೇ ಇಟ್ಟುಕೊಂಡು ಕೂರಲಿ. ಹತ್ತಲ್ಲ ಎಲ್ಲ ಖಾತೆಗಳನ್ನೂ ಅವರೇ ಇಟ್ಟುಕೊಂಡಿರಲಿ. 3-4 ತಿಂಗಳು ಉಳಿದಿದೆ. ಅಷ್ಟರಲ್ಲಿ ಏನೂ ಅಭಿವೃದ್ಧಿ ಮಾಡಲು ಆಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಎಲ್ಲರೂ ಮಂತ್ರಿ ಆಗಬೇಕು ಅಂತ ಸುಮ್ಮನಿದ್ದಾರೆ ಎಂದು ತಿಳಿಸಿದರು.

ಸಮೀಕ್ಷೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗುತ್ತಿದೆ ಎಂಬುದು ಸುಳ್ಳು. ಗುಜರಾತ್, ಉತ್ತರ ಪ್ರದೇಶದಲ್ಲಿಯೂ ಹೀಗೆಯೇ ಹೇಳಿದರೂ ಬಿಜೆಪಿಯೇ ಗೆದ್ದಿತು. ಕರ್ನಾಟಕದಲ್ಲಿ ಮೋದಿ ಪ್ರವಾಸ ಮಾಡುತ್ತಾರೆ. ಯಡಿಯೂರಪ್ಪ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರನ್ನಾಗಿ ಮಾಡಿದ್ದಾರೆ. ಬೊಮ್ಮಾಯಿ ಮತ್ತು ಯಡಿಯೂರಪ್ಪ ಕ್ಷೇತ್ರ ಸಂಚಾರ ಮಾಡಬೇಕು. ಎಲ್ಲರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಾರೆ. ನಾನು ಕ್ಷೇತ್ರದಲ್ಲಿ ಸಂಚಾರ ಮಾಡುವ ಅಗತ್ಯವಿಲ್ಲ, ರಾಜ್ಯಾದ್ಯಂತ ಸಂಚರಿಸುತ್ತೇನೆ ಎಂದರು.

ಹಿಂದಿನ ಲೇಖನಮೋರ್ಬಿ ಸೇತುವೆ ದುರಸ್ತಿಗಾಗಿ ಪಾಲಿಕೆ ಹಾಗೂ ಗುತ್ತಿಗೆದಾರ ನೇಮಿಸಿದ್ದ ಸಂಸ್ಥೆ ಅಸಮರ್ಥವಾಗಿತ್ತು: ಗುಜರಾತ್ ಹೈಕೋರ್ಟ್
ಮುಂದಿನ ಲೇಖನಪತ್ನಿ, ನಾಲ್ವರು ಮಕ್ಕಳನ್ನು ಕೊಂದು ತಾನು ನೇಣಿಗೆ ಶರಣಾದ ವ್ಯಕ್ತಿ