ಮನೆ ರಾಜಕೀಯ ಸಿಎಂ ಬೊಮ್ಮಾಯಿ ರಾಜ್ಯವನ್ನು ಗೂಂಡಾಗಳ ಕೈಗೆ ನೀಡಿದ್ದಾರೆ: ಯು.ಟಿ. ಖಾದರ್ ಆರೋಪ

ಸಿಎಂ ಬೊಮ್ಮಾಯಿ ರಾಜ್ಯವನ್ನು ಗೂಂಡಾಗಳ ಕೈಗೆ ನೀಡಿದ್ದಾರೆ: ಯು.ಟಿ. ಖಾದರ್ ಆರೋಪ

0

ಮಂಗಳೂರು: “ರಾಜ್ಯದಲ್ಲಿ ಹಿಂಸಾತ್ಮಕ, ಕೋಮು ಪ್ರಚೋದನಾತ್ಮಕ ಘಟನೆಗಳು ನಡೆಯುತ್ತಿದ್ದರೂ, ಸಿಎಂ ಬಸವರಾಜ ಬೊಮ್ಮಾಯಿ ಮೌನವಾಗಿದ್ದಾರೆ. ಮುಖ್ಯಮಂತ್ರಿಗಳು ರಾಜ್ಯವನ್ನು ಗೂಂಡಾಗಳ ಕೈಗೆ ಕೊಟ್ಟಿದ್ದಾರೆ,” ಎಂದು ಮಾಜಿ ಸಚಿವ, ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಕಿಡಿಕಾರಿದ್ದಾರೆ.

ಮಂಗಳೂರು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕರ್ನಾಟಕ ರಾಜ್ಯಕ್ಕೆ ಅದರದ್ದೇ ಆದ ಇತಿಹಾಸ, ಪರಂಪರೆ, ಸಂಸ್ಕೃತಿ ಇದೆ. ವಿಶ್ವದಲ್ಲಿ ಬೆಂಗಳೂರಿಗೆ ಶಾಂತಿಯುತ ನಗರ ಎಂಬ ಹೆಸರು ಕೂಡ ಇದೆ. ಬಿಜೆಪಿ ಸರಕಾರದಿಂದ ರಾಜ್ಯದ ಗೌರವ, ಘನತೆಗೆ ಚ್ಯುತಿ ಉಂಟಾಗಿದೆ,” ಎಂದು ಆರೋಪಿಸಿದರು.

ಧಾರವಾಡದಲ್ಲಿ ಕಲ್ಲಂಗಡಿ ಧ್ವಂಸ ಪ್ರಕರಣವನ್ನು ಎಲ್ಲರೂ ಖಂಡಿಸಿದ್ದಾರೆ. ಅಲ್ಲದೇ ದೇಗುಲದ ಅರ್ಚಕರು ಕೂಡ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಇದು ಸಹಿಸಲು ಅಸಾಧ್ಯವಾದ ಘಟನೆ. ಇಂತಹ ಕೃತ್ಯವನ್ನು ಕ್ರೂರಿ ಮನಸ್ಸುಗಳು ಮಾಡುತ್ತಿದ್ದಾರೆ. ಇಂತಹ ಘಟನೆಯನ್ನು 90 ಶೇಕಡಾ ಜನರು ಸರ್ವಧರ್ಮೀಯರು ಒಪ್ಪುವುದಿಲ್ಲ. ಮುಂದೆ ಇಂತಹ ವಿಚಾರಗಳೇ ಸರಕಾರಕ್ಕೆ ತಿರುಗುಬಾಣ ಆಗುತ್ತದೆ ಎಂದು ಹೇಳಿದ್ದಾರೆ.

“ರಾಜ್ಯ ಸರಕಾರಕ್ಕೆ ನಾವೇನು ಜನರಿಗೆ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ ಎಂದು ಹೇಳುವುದು ಅವರಿಗೆ ಆಗುತ್ತಿಲ್ಲ. ಈ ವಿಚಾರದಲ್ಲಿ ಅವರು ದಿವಾಳಿಯಾಗಿದ್ದಾರೆ. ಹೀಗಾಗಿ ಇಂತಹ ಹಿಂಸಾತ್ಮಕ ಕೃತ್ಯಗಳಿಗೆ ಸರ್ಕಾರ ಪ್ರಚೋದನೆ ನೀಡುತ್ತಿದೆ,” ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಇಷ್ಟೆಲ್ಲಾ ಅನಾಹುತ ಆಗುತ್ತಿದ್ದರೂ ಸಿಎಂ ಬೊಮ್ಮಾಯಿ ಮೌನವಾಗಿದ್ದಾರೆ. ಜನರಿಗೆ ಸಿಎಂ ಆತ್ಮವಿಶ್ವಾಸ ಕೂಡಾ ಕೊಡುತ್ತಿಲ್ಲ. ಅಲ್ಲದೇ ಇಂತಹ ಹಿಂಸಾತ್ಮಕ ಕೃತ್ಯಗಳನ್ನು ಮಾಡುವವರ ವಿರುದ್ಧ ಮಾತನಾಡುತ್ತಿಲ್ಲ. ಈ ಮೂಲಕ ಸಿಎಂ ರಾಜ್ಯವನ್ನು ಗುಂಡಾಗಳ ಕೈಯಲ್ಲಿ ಕೊಟ್ಟಿದ್ದಾರೆ.‌ ಕೂಡಲೇ ಈ ಬಗ್ಗೆ ಸಿಎಂ ಮಾತನಾಡಬೇಕು ಎಂದು ಯು.ಟಿ. ಖಾದರ್ ಆಗ್ರಹಿಸಿದ್ದಾರೆ.

ಹಿಂದಿನ ಲೇಖನಇಡಿಯಿಂದ ಮಲ್ಲಿಕಾರ್ಜುನ ಖರ್ಗೆ ವಿಚಾರಣೆ
ಮುಂದಿನ ಲೇಖನಕೇಂದ್ರೀಯ ವಿದ್ಯಾಲಯಗಳಲ್ಲಿ ವಿಕಲಚೇತನ ಮಕ್ಕಳಿಗೆ ವಿಶೇಷ ಶಿಕ್ಷಕರ ನೇಮಕ : ಕೇಂದ್ರಕ್ಕೆ ಹೈಕೋರ್ಟ್​ ನೋಟಿಸ್​