ಮನೆ ರಾಜಕೀಯ ಕಾಂಗ್ರೆಸ್‌ ಪಕ್ಷ ಭ್ರಷ್ಟಾಚಾರದ ಪಿತಾಮಹ: ನಳಿನ್ ಕುಮಾರ್ ಕಟೀಲ್

ಕಾಂಗ್ರೆಸ್‌ ಪಕ್ಷ ಭ್ರಷ್ಟಾಚಾರದ ಪಿತಾಮಹ: ನಳಿನ್ ಕುಮಾರ್ ಕಟೀಲ್

0

ಚಾಮರಾಜನಗರ(Chamarajanagar): ಕಾಂಗ್ರೆಸ್‌ ಪಕ್ಷ ಭ್ರಷ್ಟಾಚಾರದ ಪಿತಾಮಹ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿದರು. ಈಗ ಬಸವರಾಜ ಬೊಮ್ಮಾಯಿಯವರು ಅದಕ್ಕೆ ಶಕ್ತಿ ತುಂಬುತ್ತಿದ್ದಾರೆ  ಎಂದು  ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಗುರುವಾರ ಹೇಳಿದರು.

ನಗರದಲ್ಲಿ ನಡೆದ ಬಿಜೆಪಿ ರಾಜ್ಯ ಪ್ರಕೋಷ್ಠಗಳ ಪದಾಧಿಕಾರಿಗಳ ಸಭೆಯ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಮೇಲೆ ಶೇ 40ರಷ್ಟು ಕಮಿಷನ್‌ ಪಡೆಯುವ ಆರೋಪವನ್ನು ಕಾಂಗ್ರೆಸ್‌’ನವರು ಮಾಡುತ್ತಿದ್ದಾರೆ. ಆರೋಪಗಳ ಬಗ್ಗೆ ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ದೂರು ನೀಡಲಿ. ಇದುವರೆಗೆ ಯಾರೊಬ್ಬರೂ ಒಂದೇ ಒಂದು ದಾಖಲೆಯನ್ನೂ ಪ್ರದರ್ಶಿಸಿಲ್ಲ. ಸರ್ಕಾರ, ಸಚಿವರ ವಿರುದ್ಧ ಆರೋಪ ಮಾಡಿದ್ದ ಕೆಂಪಣ್ಣ ವಿರುದ್ಧವೇ ಪ್ರಕರಣ ದಾಖಲಾಗಿ ಅವರು ಜೈಲಿಗೂ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಕೆಂಪಣ್ಣ ಅವರೊಂದಿಗೆ ಸಿದ್ದರಾಮಯ್ಯ ಕೂಡ ಜೈಲಿಗೆ ಹೋಗಲಿದ್ದಾರೆ ಎಂದರು.

ಭಯೋತ್ಪಾದನೆಯ ಇನ್ನೊಂದು ಮುಖವೇ ಕಾಂಗ್ರೆಸ್‌. ಈ ದೇಶವನ್ನು ತುಂಡು ಮಾಡಿದ್ದು ಕಾಂಗ್ರೆಸ್‌. ನೆಹರು ಅವರು ಪ್ರಧಾನಿಯಾಗಬೇಕು ಎಂಬ ಕಾರಣಕ್ಕೆ ಸ್ವಾತಂತ್ರ್ಯ ಬಂದ ನಂತರ ದೇಶ ವಿಭಜಿಸಿ ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರ ರಚನೆ ಮಾಡಲು ಕಾರಣರಾದರು. ಅಲ್ಲಿಂದಲೇ ಆತಂಕವಾದ ಸೃಷ್ಟಿಯಾಯಿತು. ಇಂದಿರಾ ಗಾಂಧಿ ಕಾಲದಲ್ಲಿ ಭಯೋತ್ಪಾದನೆ ಹೆಚ್ಚಾಯಿತು. ಖಲಿಸ್ತಾನವಾದ, ಕಾಶ್ಮೀರದಲ್ಲಿ ಉಗ್ರವಾದ ಆರಂಭವಾಯಿತು. ಭಯೋತ್ಸಾದನೆ ಪರವಾಗಿ ಕಾಂಗ್ರೆಸ್‌ ನಿಂತಿದೆ. ಸೈನಿಕರು ಹುತಾತ್ಮರಾದರೆ ಕಾಂಗ್ರೆಸ್‌’ಗೆ ಕಣ್ಣೀರು ಬರುವುದಿಲ್ಲ. ಭಯೋತ್ಪಾದಕರ ಪರವಾಗಿ ಮಾತನಾಡುತ್ತದೆ ಎಂದು ನಳಿನ್‌ ಕುಮಾರ್‌ ವಾಗ್ದಾಳಿ ನಡೆಸಿದರು.

ಮಂಗಳೂರಿನಲ್ಲಿ ಕುಕ್ಕರ್‌ ಬ್ಲಾಸ್ಟ್‌ ಮಾಡಿದ ವ್ಯಕ್ತಿಯ ಪರವಾಗಿ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರು ಮಾತನಾಡುತ್ತಾರೆ. ಪಿಎಫ್‌’ಐ ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಾಪಸ್‌ ಪಡೆಯುತ್ತದೆ. ಅದೇ ಸಂಘಟನೆಯ ಕಾರ್ಯಕರ್ತರು ಮೈಸೂರಿನಲ್ಲಿ ಕಾಂಗ್ರೆಸ್‌ ಶಾಸಕರಿಗೆ ಚೂರಿಯಿಂದ ಇರಿಯುತ್ತಾರೆ. ಇಂತಹ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಈ ದೇಶದ ಸ್ಥಿತಿ ಏನಾಗಬಹುದು ಎಂದು ಅವರು ಪ್ರಶ್ನಿಸಿದರು.

ಹಿಂದಿನ ಲೇಖನಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ, ಯಾರೇ ಬಂದರೂ ಏನು ಆಗಲ್ಲ: ಶಾಸಕ ಅನ್ನದಾನಿ
ಮುಂದಿನ ಲೇಖನನಕಲಿ ದಾಖಲೆ ಸೃಷ್ಠಿಸಿ 79.29 ಕೋಟಿ ಪರಿಹಾರ ವಿತರಣೆ: ಭೂನ್ಯಾಯ ಮಂಡಳಿ ಅಧ್ಯಕ್ಷ, ತಹಶೀಲ್ದಾರ್‌  ಸೇರಿದಂತೆ 16 ಮಂದಿ ವಿರುದ್ಧ ಎಫ್‌’ಐಆರ್‌