ಮನೆ ಮನರಂಜನೆ ಯಾವುದೇ ಒಬ್ಬ ವ್ಯಕ್ತಿ ಶ್ರೇಷ್ಠ ಕವಿಯಾಗಲು ಪ್ರಜ್ಞೆ ಮತ್ತು ಪ್ರತಿಭೆ ಎರಡು ಅಂಶಗಳು ಬಹಳ ಮುಖ್ಯ:...

ಯಾವುದೇ ಒಬ್ಬ ವ್ಯಕ್ತಿ ಶ್ರೇಷ್ಠ ಕವಿಯಾಗಲು ಪ್ರಜ್ಞೆ ಮತ್ತು ಪ್ರತಿಭೆ ಎರಡು ಅಂಶಗಳು ಬಹಳ ಮುಖ್ಯ: ನಾಗತಿಹಳ್ಳಿ ಚಂದ್ರಶೇಖರ್

0

ಮೈಸೂರು: ಎಲ್ಲಾ ವ್ಯಕ್ತಿಗಳಲ್ಲೂ ಒಬ್ಬ ಕವಿ ಅಡಗಿರುತ್ತಾನೆ, ಆದರೇ ಎಲ್ಲರೂ ಶ್ರೇಷ್ಠ ಕವಿಗಳಾಗಳು ಸಾಧ್ಯವಿಲ್ಲ. ಹಾಗಾಗಿ ಯಾವುದೇ ಒಬ್ಬ ವ್ಯಕ್ತಿ ಶ್ರೇಷ್ಠ ಕವಿಯಾಗಬೇಕೆಂದರೆ ಆತನಿಗೆ ಪ್ರಜ್ಞೆ ಮತ್ತು ಪ್ರತಿಭೆ ಎಂಬ ಎರಡು ಅಂಶಗಳು ಬಹಳ ಮುಖ್ಯ. ಅದನ್ನು ಪಾಲಿಸಿದ ಕವಿಯು ಶ್ರೇಷ್ಠ ಕವಿಯಾಗಿ ಜನರ ಮನದಲ್ಲಿ ಚಿರಕಾಲ ಉಳಿಯುತ್ತಾನೆ ಎಂದು ಕವಿಗಳು ಹಾಗೂ ಸಿನಿಮಾ ನಿರ್ದೇಶಕರಾದ  ಡಾ.ನಾಗತಿಹಳ್ಳಿ  ಚಂದ್ರಶೇಖರ್ ಅವರು ಹೇಳಿದರು.

Join Our Whatsapp Group

ಇಂದು ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಲಾಗಿದ್ದ, ವಿಶ್ವ ವಿಖ್ಯಾತ ದಸರಾ ಕವಿಗೋಷ್ಠಿ ಪಂಚ ಕಾವ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾವ್ಯ ಎಂಬುದು ಪುರಾತನವಾದದ್ದಾಗಿದೆ. ಕಾವ್ಯದ ಜೊತೆಗೆ ಮನುಷ್ಯ ಐತಿಹಾಸಿಕವಾಗಿ, ಪೌರಾಣಿಕವಾಗಿ ಹಾಗೂ ಸಮಾಜಕವಾಗಿ ನಡೆದು, ಕಾವ್ಯವನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾನೆ ಎಂದರು.

ನಾಡಹಬ್ಬ ದಸರಾ ಮಹೋತ್ಸವವು ರಾಜ್ಯದಾದ್ಯಂತ ಬಹುಮುಖಿಯಾಗಿ ಹರಡಿದ್ದು, ಅದರ ಒಂದು ಭಾಗವಾಗಿ ಕವಿಗೋಷ್ಠಿ ನಡೆಯುತ್ತಿದೆ. ಕವಿಗೋಷ್ಠಿಯು ನೆರೆದಿರುವ ನೂರಾರು ಕವಿಗಳಿಂದ ಕಾವ್ಯ ಸಂಭ್ರಮ, ಕಾವ್ಯತೀತ ಹಾಗೂ ಸಂಸ್ಕೃತಿಕ ಸಂಭ್ರಮದಂತೆ ಭಾಸವಾಗುತ್ತಿದೆ. ಯುವಕರು ಕವಿಗೋಷ್ಠಿಗಳಿಂದ ದೂರ ಹೋಗುತ್ತಿದ್ದಾರೆ, ಕವಿಗೋಷ್ಠಿಗಳಲ್ಲಿ ನಿಜವಾದ ಕವಿಗಳ ಭಾಗವಹಿಸುವಿಕೆ ಕಡಿಮೆ ಎಂಬ ಸಂದರ್ಭದಲ್ಲಿ ದಸರಾ ಕವಿಗೋಷ್ಠಿಯು ಮಾದರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾವ್ಯ ಎನ್ನುವುದು ಒಂದು ಗಂಭೀರವಾದ ಕಲೆಯಾಗಿದ್ದು, ಅದರ ಆಸಕ್ತಿ ಆಸ್ಪದಕ್ಕೆ ವಿಶಿಷ್ಟವಾದ ಮನಸ್ಥಿತಿಯ ಅವಶ್ಯಕತೆ ಇರುತ್ತದೆ. ಅಂತಹ ವಿಶಿಷ್ಟ ಮನಸ್ಥಿಯುಳ್ಳವರು  ಕಾವ್ಯಗಾರನಾಗಲು ಸಾಧ್ಯ. ಕಾವ್ಯವು ಪ್ರಜ್ಞೆ, ಪ್ರಶ್ನೆ, ಪ್ರತಿಭಟನೆ, ಪ್ರಯೋಗ ಹಾಗೂ ಪ್ರಮಾಣ ಎಂಬ ಅಂಶಗಳನ್ನು ಒಳಗೊಂಡಿದ್ದು, ಇವು ಕಾವ್ಯದ ಆಕಾರವನ್ನು ಸೃಷ್ಟಿಸುತ್ತವೆ. ಅದನ್ನು ಅಳವಡಿಸಿಕೊಂಡು ಕವಿತೆಗಳನ್ನು ಬರೆಯಬೇಕು ಎಂದು ಹೇಳಿದರು.

ಕವಿಯು ದೂರದರ್ಶಕ ಉಳ್ಳವನು ಹಾಗೂ ದಿವ್ಯ ದರ್ಶಿಯೂ ಹೌದು. ಇಂದು ಸಂಭವಿಸುವ ಘಟನೆಗಳು ಹಾಗೂ ಮುಂದೆ ನಡೆಯಬಹುದಾದ ಘಟನೆಗಳ ಬಗ್ಗೆ ದೂರ ದೃಷ್ಟಿ ಇಟ್ಟು ಬರೆಯುವವನಾಗಿರುತ್ತಾನೆ. ಇದಕ್ಕೆ ಸಾಕ್ಷಿಯಾಗಿ ನಮ್ಮ ಹಿಂದಿನ ತಲೆಮಾರಿನ ಬಸವಣ್ಣ ಸೇರಿದಂತೆ ಮಹಾನ್ ಕವಿಗಳು ಬರೆದಿರುವಂತಹ ಕವಿತೆ, ಕಾವ್ಯಗಳ ಪ್ರಸ್ತುತತೆಯನ್ನೇ ಕಾಣಬಹುದಾಗಿದೆ ಎಂದು ತಿಳಿಸಿದರು.

ಕಾವ್ಯ ಎಂಬುದು ಒಬ್ಬ ವ್ಯಕ್ತಿಯಲ್ಲಿ ಸ್ವಾಭಿಮಾನ ಸೃಷ್ಟಿಸಿ ಸ್ವತಂತ್ರ್ಯವನ್ನು ನೀಡುತ್ತದೆ. ಒಬ್ಬ ಶ್ರೇಷ್ಠ ಕವಿಯು ಕಾಲವನ್ನೇ ಮೀರಿರುವವನಾಗಿರುತ್ತಾನೆ. ಇಂದು ಕವಿತೆ ಎಂಬುದು ಬಂಡಾಯ, ಸೃಷ್ಟಿಗಳನ್ನು  ಮೀರಿ ಸಾಮಾಜಿಕ ಜಾಲತಾಣಗಳಿಗೂ ಹರದಿದ್ದು, ಅದರಲ್ಲಿ ಯಾವ ಕಾವ್ಯ ಓದುಗನಿಗೆ ಹೊಸದು ಎಸಿಸುತ್ತದೆಯೋ ಅದು ಕಾವ್ಯವಾಗಿ ಚಿರಕಾಲ ಉಳಿಯುತ್ತದೆ ಎಂದು ಹೇಳಿದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ  ಹಿರಿಯ ಸಾಹಿತಿಗಳಾದ ನಾಡೋಜ ಹಂಪ ನಾಗರಾಜಯ್ಯ ಅವರು,ಕನಸು ಮತ್ತು ಕವಿತೆ ಪ್ರತಿಯೊಬ್ಬರಲ್ಲಿಯೂ ಇರುತ್ತದೆ.ಮಗು ಹುಟ್ಟಿದ ಮೇಲೆ ಹೇಳುವ ಅಮ್ಮ ಎಂಬ ಪದವು ಕಾವ್ಯವಾಗಿದೆ. ಹಾಗೆಂದ ಮಾತ್ರಕ್ಕೆ ಎಲ್ಲರೂ ಕವಿಗಳಾಗಳು ಸಾಧ್ಯವಿಲ್ಲ. ಕಾವ್ಯದ ಮೂಲವನ್ನು ಆಳವಾಗಿ ಅರಿಯಬೇಕು ಆಗ ಮಾತ್ರವೇ ಕವಿತನ ಒಳಿಯುತ್ತದೆ ಎಂದು ಯುವ ಕವಿಗಳಿಗೆ ಕಿವಿ ಮಾತು ಹೇಳಿದರು.

ಕವಿಗಳು ಹಾಗೂ ಸಾಹಿತ್ಯ ಮತ್ತು ಸಂಸ್ಕೃತಿಯ ಚಿಂತಕರಾದ ಡಾ. ಬಂಜಗೆರೆ ಜಯಪ್ರಕಾಶ್ ಅವರು ಮಾತನಾಡಿ, ಯಾವುದೇ ಒಬ್ಬ ವ್ಯಕ್ತಿಯು ಕವಿ, ಬರಹಗಾರ ಎನಿಸಿಕೊಳ್ಳುವುದು ದೊಡ್ಡ ಬಿರುದಾಗಿದ್ದು, ಅದಕ್ಕಾಗಿ ಹೆಚ್ಚು ಪರಿಶ್ರಮ ಹಾಕಬೇಕು. ಜನರು ಕವಿಯಿಂದ ಪ್ರಭಾವಿತರಾಗಬೇಕಾದರೆ ಮೊದಲು ಆ ಕವಿಯು ಜನರಿಂದ ಪ್ರಭಾವಿತನಾಗಿ ಜನರ ಮದ್ಯೆಯೇ ಇದ್ದು, ಅವರ ದುಃಖ-ದುಮ್ಮಾನಗಳನ್ನು ಅರಿತು ಬರೆಯಬೇಕು ಎಂದರು.

ಕವಿಗಳಾದವರು ತನ್ನ ನೋವು ಹಾಗೂ  ಆಲೋಚನೆಗಳಿಗಿಂತ  ಪರರ ನೋವು ಹಾಗೂ ಆಲೋಚನೆಗಳ ಪ್ರತಿರೂಪವಾಗಿ ನಿಂತು  ಬರೆಯಬೇಕು. ಆತನಿಗೆ ಮೊದಲು ಲೋಕದ  ಪರಿಜ್ಞಾನವಿದ್ದು ಹಾಗೂ ಹಾಗು-ಹೋಗುಗಳ ಬಗ್ಗೆ ಅರಿವಿರಬೇಕು. ಆಗ ಮಾತ್ರವೇ ಒಬ್ಬ ಶ್ರೇಷ್ಠ ಕವಿಯು  ಜಗತ್ತಿಗೆ ತನ್ನದೇ ಆದ ಕೊಡುಗೆಯನ್ನು ನೀಡಲು ಸಾಧ್ಯ ಎಂದು ಹೇಳಿದರು.

 ಹಲವಾರು ಶ್ರೇಷ್ಠ ಕವಿಗಳ ಮಾತುಗಳನ್ನು ಇಂದು ಎಷ್ಟೋ ಪತ್ರಿಕೆಗಳ ತಲೆಬರಹವಾಗಿ ಕಾಣಬಹುದಾಗಿದೆ. ಅವರೆಲ್ಲರೂ  ಜನರೊಂದಿಗೆ ಜನರಿಗಾಗಿಯೇ  ಬದುಕಿ ದಂತಹ ಮಹಾನ್ ವ್ಯಕ್ತಿಗಳು. ಹಾಗಾಗಿ ಅವರ ಕವಿತೆಗಳು ಬರವಣಿಗೆಗಳು ಇಂದಿಗೂ ಪ್ರಸ್ತುತವಾಗಿದೆ. ಅವರಂತೆಯೇ ನಾವು ಆಗಬೇಕೆಂದರೆ  ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.

 ದಸರಾ ಕವಿಗೋಷ್ಠಿ ಎಂಬುದು  ಯುವ ಕವಿಗಳಿಗೆ ಒಂದು ದೊಡ್ಡ ವೇದಿಕೆಯಾಗಿದ್ದು, ಕೆಲವರಿಗೆ ಈ ಬಾರಿ ದಸರಾ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದಿಲ್ಲ. ಹಾಗೆಂದ ಮಾತ್ರಕ್ಕೆ ಅವರಿಗೆ ಅವಕಾಶವೇ ಸಿಗುವುದಿಲ್ಲ ಎಂದರ್ಥವಲ್ಲ. ಈ ಬಾರಿ ಅವಕಾಶ ಸಿಗದಿದ್ದಂತಹ ಕವಿಗಳು ಮುಂದಿನ ಬಾರಿಗೆ ಹೆಚ್ಚಿನ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಹಾಗೂ ಮುಂದೆ ಸಿಗುವ ಬೇರೆ ಬೇರೆ ವೇದಿಕೆಗಳಲ್ಲಿ ತಮ್ಮ ಪ್ರತಿಭೆಗಳನ್ನು ಸಾಬೀತುಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಮತ್ತು ದಸರಾ ಕವಿಗೋಷ್ಠಿ ಉಪಸಮಿತಿಯ ಕಾರ್ಯಧ್ಯಕ್ಷರಾದ ಎನ್. ಕೆ.ಲೋಲಾಕ್ಷಿ ಅವರು ಮಾತನಾಡಿ, ಇಂದು ನಾವು 414 ನೇ ಮೈಸೂರು ದಸರಾ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು, ಅದರಲ್ಲಿ 44 ನೇ ವಿಶ್ವವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿಯನ್ನು ಆಚರಿಸುತ್ತಿರುವುದು ಕನ್ನಡಾಭಿಮಾನಿಗಳಿಗೆ ಸಂತಸದ ವಿಷಯವಾಗಿದೆ. ಈ ಕವಿಗೋಷ್ಠಿಯನ್ನು ಮೈಸೂರು ವಿಶ್ವ ವಿದ್ಯಾನಿಲಯದಲ್ಲಿಯೇ ತಮ್ಮ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದು ಇಂದು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರು ಉದ್ಘಾಟಿಸಿರುವುದು ಕವಿಗೋಷ್ಠಿಯ ವಿಶೇಷತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.

ವಿಶ್ವ ವಿಖ್ಯಾತ ಮೈಸೂರು ದಸರಾಕ್ಕೆ ವಿವಿಧ ದೇಶಗಳಿಂದ ವಿವಿಧ ಭಾಷೆಯ ಜನರು ಆಗಮಿಸುತ್ತಾರೆ. ಅದರಲ್ಲಿ ಒಂದು ಭಾಗವಾಗಿರುವ ಈ ಕವಿಗೋಷ್ಠಿಯಿಂದ  ನೂರಾರು ಕವಿಗಳ ಪ್ರತಿಭೆ ಹನವರಣಗೊಳ್ಳಲಿದ್ದು, ಹೊಸ ಹೊಸ  ವಿಷಯಗಳನ್ನು ಹಂಚಿಕೊಳ್ಳಲು ಕವಿಗಳಿಗೆ ಇದೊಂದು ದೊಡ್ಡ ವೇದಿಕೆಯಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಲು ಪ್ರತಿಯೊಬ್ಬರು ಪೂರ್ಣ ಮನಸ್ಥಿತಿಯಿಂದ  ಪಾಲ್ಗೊಳ್ಳಬೇಕು ಎಂದರು.

 ಈ ಬಾರಿ ವಿಶೇಷವಾಗಿ ಪಂಚ ಕಾವ್ಯೋತ್ಸವದ ಪರಿಕಲ್ಪನೆ

 ಈ ಬಾರಿ ದಸರಾ ಕವಿಗೋಷ್ಠಿಯಲ್ಲಿ  ಪಂಚ ಕಾವ್ಯೋತ್ಸವವನ್ನು 5 ದಿನಗಳ ಕಾಲ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಲಾಗಿದ್ದು, ಸಮರಸ ಕವಿಗೋಷ್ಠಿ, ಸಮಾನತ ಕವಿಗೋಷ್ಠಿ, ಸಂತಸ ಕವಿಗೋಷ್ಠಿ, ಸಮಷ್ಠಿ ಕವಿಗೋಷ್ಠಿ ಹಾಗೂ ಸಮೃದ್ಧ  ಕವಿಗೋಷ್ಠಿ ಎಂಬ ಪರಿಕಲ್ಪನೆಯ ಸ್ವರೂಪಗಳು ಯುವ ಕವಿಗಳು ಹಾಗೂ  ಹಿರಿಯ ಕವಿಗಳ ಸಮ್ಮುಖದಲ್ಲಿ  ನಡೆಯಲಿದೆ.

ಕಾರ್ಯಕ್ರಮದಲ್ಲಿ ದಸರಾ ಕವಿಗೋಷ್ಠಿ ಉಪಸಮಿತಿಯ ಉಪ ವಿಶೇಷಧಿಕಾರಿಗಳಾದ ವಿ ಎನ್ ಮಲ್ಲಿಕಾರ್ಜುನ ಸ್ವಾಮಿ, ಕಾರ್ಯದರ್ಶಿಗಳಾದ ಕೃಷ್ಣ. ಸಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ, ದಸರಾ ಕವಿಗೋಷ್ಠಿಯ ಅಧಿಕಾರೇತರ ಸಮಿತಿಯ ಅಧ್ಯಕ್ಷರಾದ ಡಾ. ಹೇಮಲತಾ, ಮೈಸೂರು ವಿಶ್ವ ವಿದ್ಯಾನಿಲಯದ ಪ್ರಸಾರಂಗದ ನಿರ್ದೇಶಕರಾದ ನಂಜಯ್ಯ,ಚಿಗುರು ಅತಿಥಿಗಳಾದ ಕು. ಪ್ರಣತಿ ಆರ್ ಗಡಾದ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದಂತಹ ಕವಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.