ಮನೆ ಕ್ರೀಡೆ ಕನ್ನಡಿಗ, ವೇಗಿ ಪ್ರಸಿದ್ಧ ಕೃಷ್ಣ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಶ್ಲಾಘನೆ

ಕನ್ನಡಿಗ, ವೇಗಿ ಪ್ರಸಿದ್ಧ ಕೃಷ್ಣ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಶ್ಲಾಘನೆ

0

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಕನ್ನಡಿಗ, ವೇಗಿ ಪ್ರಸಿದ್ಧ ಕೃಷ್ಣ ಅತ್ಯುತ್ತಮ ಪ್ರದರ್ಶನ ನೀಡಿ, ಪಂದ್ಯ ಶ್ರೇಷ್ಠ ಎನಿಸಿಕೊಂಡಿದ್ದು, ಇವರನ್ನು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಶ್ಲಾಘಿಸಿದ್ದಾರೆ.

ಮೋಟೆರಾದ ನರೇಂದ್ರ ಮೋದಿ ಕ್ರಿಕೆಟ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ವಿಂಡೀಸ್ ವಿರುದ್ಧ 44 ರನ್ ಅಂತರದ ಜಯ ಸಾಧಿಸಿ, ಮೂರು ಪಂದ್ಯಗಳ ಸರಣಿಯನ್ನು 2–0 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಪಂದ್ಯದಲ್ಲಿ 9 ಓವರ್‌ ಬೌಲಿಂಗ್ ಮಾಡಿದ ಕೃಷ್ಣ, ಕೇವಲ 12 ರನ್ ಬಿಟ್ಟುಕೊಟ್ಟು 4 ವಿಕೆಟ್ ಉರುಳಿಸಿದರು.

ಪ್ರಸಿದ್ಧ ಪ್ರದರ್ಶನದ ಬಗ್ಗೆ ಟ್ವೀಟ್ ಮಾಡಿರುವ ಪಠಾಣ್, ‘ಪ್ರಸಿದ್ಧ ಕೃಷ್ಣ ಇಂದು ಅಮೋಘ ಪ್ರದರ್ಶನ ನೀಡಿದ್ದಾರೆ. ನೀಳಕಾಯದ ವೇಗದ ಬೌಲರ್ ಪ್ರಗತಿಯತ್ತ ಸಾಗುತ್ತಿರುವುದನ್ನು ನೋಡಲು ಖುಷಿಯಾಗುತ್ತದೆ. ವೆಲ್ ಡನ್ ಟೀಂ ಇಂಡಿಯಾ’ ಎಂದು ಅಭಿನಂದಿಸಿದ್ದಾರೆ.

ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 239 ರನ್ ಗಳಿಸಿತ್ತು. ನಾಯಕ ರೋಹಿತ್ ಶರ್ಮಾ (5) ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ (18) ವೈಫಲ್ಯ ಅನುಭವಿಸಿದರೂ, ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್ (64) ಮತ್ತು ಉಪನಾಯಕ ಕೆ.ಎಲ್.ರಾಹುಲ್ (48) ಉಪಯುಕ್ತ ಕೊಡುಗೆ ನೀಡಿದರು.

ಸಾಧಾರಣ ಮೊತ್ತ ಬೆನ್ನತ್ತಿದ ವೆಸ್ಟ್ ಇಂಡೀಸ್ ಇನ್ನೂ 4 ಓವರ್ ಇರುವಾಗಲೇ 193 ರನ್ ಗಳಿಗೆ ಸರ್ವಪತನ ಕಂಡಿತು. 2 ವಿಕೆಟ್ ಪಡೆದ ಶಾರ್ದೂಲ್ ಠಾಕೂರ್, ತಲಾ ಒಂದೊಂದು ವಿಕೆಟ್ ಹಂಚಿಕೊಂಡ ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್ ಮತ್ತು ದೀಪಕ್ ಹೂಡಾ ಅವರು ಪ್ರಸಿದ್ಧ ಕೃಷ್ಣಗೆ ಉತ್ತಮ ಬೆಂಬಲ ನೀಡಿದರು.

ಮೂರನೇ ಹಾಗೂ ಅಂತಿಮ ಪಂದ್ಯವೂ ಇದೇ ಕ್ರೀಡಾಂಗಣದಲ್ಲಿ ಫೆ.11 ರಂದು ನಡೆಯಲಿದೆ.

ಹಿಂದಿನ ಲೇಖನವಜಾಗೊಂಡಿದ್ದ ಸಾರಿಗೆ ನೌಕರರ ಮರು ನೇಮಕ: ಸಚಿವ ಶ್ರೀರಾಮುಲು
ಮುಂದಿನ ಲೇಖನಸಂತ್ರಸ್ತ ಮುಸ್ಲಿಂ ಮಹಿಳೆಯೊಂದಿಗೆ ನಮ್ಮ ಸರ್ಕಾರವಿದೆ: ಪ್ರಧಾನಿ ಮೋದಿ