ದಾವಣಗೆರೆ : ಹರಿಹರ ಪಂಚಮಸಾಲಿ ಪೀಠದಲ್ಲಿ ಲೆಕ್ಕ ಕೊಡಿ ಗಲಾಟೆ ಅತಿರೇಕಕ್ಕೆ ಹೋಗಿದೆ. ಇವತ್ತು ಟ್ರಸ್ಟಿಗಳು 18 ವರ್ಷಗಳ ಲೆಕ್ಕ ಕೊಡಲು ಮುಂದಾಗಿದ್ದರು. ಮಠಕ್ಕೆ ಟ್ರಸ್ಟಿಗಳು ಬರ್ತಿದ್ದಂತೆ ಹೈಡ್ರಾಮವೇ ನಡೆಯಿತು. ಮಠದ ಟ್ರಸ್ಟಿಗಳ ಬೆಂಬಲಿಗರು ಹಾಗೂ ವಚನಾನಂದ ಶ್ರೀಗಳ ಬೆಂಬಲಿಗರ ಮಧ್ಯೆ ವಾದ-ಪ್ರತಿವಾದ, ಮಾತಿನ ಚಕಮಕಿ, ವಾಗ್ಯುದ್ಧವೇ ನಡೆಯಿತು.
ವಚನಾನಂದ ಸ್ವಾಮೀಜಿ ತಂಗಿದ್ದ ಮಠದ ಮುಂದೆ ಬೆಂಬಲಿಗರು ರಕ್ಷಣೆಗೆ ನಿಂತಿದ್ದರು. ಈ ವೇಳೆ, ಸ್ವಾಮೀಜಿಗಳು ಇದ್ದ ಮಠಕ್ಕೆ ಟ್ರಸ್ಟಿಗಳು ಆಗಮಿಸಿದಾಗ ಸ್ವಾಮೀಜಿ ಭಕ್ತರು ಶ್ರೀಗಳಿಗೆ ಜೈಕಾರ ಹಾಕಿದರು. ಮಠಕ್ಕೆ ಆಗಮಿಸಿದ ಟ್ರಸ್ಟಿಗಳನ್ನು ವಚನಾನಂದ ಶ್ರೀಗಳ ಬೆಂಬಲಿಗರು ಕಳ್ಳ… ಕಳ್ಳ.. ಅಂತ ಕೂಗಿದರು. ಈ ವೇಳೆ, ವಚನಾನಂದ ಸ್ವಾಮಿ ಹಾಗೂ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಬಿಸಿ ಉಮಾಪತಿ ಮುಖಾಮುಖಿಯಾದರು.
ಟ್ರಸ್ಟಿಗಳು ಸುದ್ದಿಗೋಷ್ಠಿ ಆರಂಭಿಸುತ್ತಿದ್ದಂತೆ, ರಾಣಿಬೆನ್ನೂರು ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪೀಠದ ಟ್ರಸ್ಟ್ನ ಪ್ರಧಾನ ಧರ್ಮಧರ್ಶಿ ಬಿ.ಸಿ.ಉಮಾಪತಿ ಲೆಕ್ಕ ಮಂಡನೆ ಸಂದರ್ಭದಲ್ಲಿ ಗಲಾಟೆ ಆಯ್ತು. ಸುಳ್ಳು ಲೆಕ್ಕ ಕೊಡುತ್ತಿದ್ದಾರೆ. ಅವರನ್ನು ಪ್ರಶ್ನೆ ಮಾಡಲು ಅವಕಾಶ ಕೊಡಿ ಸುದ್ದಿಗೋಷ್ಠಿಗೆ ನುಗ್ಗಲು ಯತ್ನಿಸಿದರು. ಕಲ್ಲು, ಚಪ್ಪಲಿ, ನೀರಿನ ಬಾಟಲ್ಗಳನ್ನೂ ತೂರಿ ಆಕ್ರೋಶ ವ್ಯಕ್ತಪಡಿಸಿದರು. ಎರಡು ಕಡೆಯವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ಅರುಣ್ಕುಮಾರ್ ಬಗ್ಗೆ ಮಾತಾಡಿದ ಟ್ರಸ್ಟಿಗಳಿಗೆ ರಾಜಕೀಯ ಬೇಡ ಅಂತ ಡಿವೈಎಸ್ಪಿ ಉಜ್ಜನಿಕೊಪ್ಪ ಕ್ಲಾಸ್ ತೆಗೆದುಕೊಂಡರು. ಲೆಕ್ಕಕೊಡುವ ಕಾರ್ಯಕ್ರಮದಲ್ಲಿ ಸಂಗನಬಸವ ಸ್ವಾಮಿಜಿ ಮಾತನಾಡುವ ವೇಳೆ ಸ್ವಾಮೀಜಿ ಬೆಂಬಲಿಗರು ಕರೆಂಟ್ ಕಟ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂತು. ಮತ್ತೆ ವಾಗ್ವಾದ ನಡೆಯಿತು.
ಪೊಲೀಸರು ಕರೆಂಟ್ ಸರಿ ಮಾಡಿಸಿದರು. ಮಹಾಂತ ಸ್ವಾಮಿ ಗದ್ದುಗೆಗೆ ತೆರಳಿದ್ದ ಮನಗೂಳಿ ಸಂಗನಬಸವ ಸ್ವಾಮೀಜಿ ಹೊರ ಬರುವಾಗ ವಚನಾನಂದ ಶ್ರೀ ಬೆಂಬಲಿಗರು ನೀರಿನ ಬಾಟಲ್ ಎಸೆದರು. ಈ ಮಧ್ಯೆ, ಟ್ರಸ್ಟ್ ಪ್ರಧಾನ ಧರ್ಮದರ್ಶಿ ಬಿಸಿ ಉಮಾಪತಿ, ಮಠದ ಈ ಸ್ಥಿತಿಗೆ ಸ್ವಾಮೀಜಿಯೇ ಕಾರಣ ಅಂತ ದೂರಿದರು. ಇನ್ನೊಂದೆಡೆ, ವಚನಾನಂದ ಶ್ರೀಗಳು ತಮ್ಮ ಬೆಂಬಲಿಗರು, ಪೊಲೀಸ್ ಸಿಬ್ಬಂದಿಗೆ ಕಲ್ಲು ಸಕ್ಕರೆ, ಶೇಂಗಾ ವಿತರಿಸಿದರು.















