ಮನೆ ರಾಜ್ಯ ಎಸ್’ಸಿ- ಎಸ್’ಟಿ ಪಂಗಡಗಳ ಮೀಸಲಾತಿ ಹೆಚ್ಚಳ: ವಾರದೊಳಗೆ ಸರ್ವಪಕ್ಷ ಸಭೆ – ಸಿಎಂ ಬೊಮ್ಮಾಯಿ

ಎಸ್’ಸಿ- ಎಸ್’ಟಿ ಪಂಗಡಗಳ ಮೀಸಲಾತಿ ಹೆಚ್ಚಳ: ವಾರದೊಳಗೆ ಸರ್ವಪಕ್ಷ ಸಭೆ – ಸಿಎಂ ಬೊಮ್ಮಾಯಿ

0

ಬೆಂಗಳೂರು(Bengaluru): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಿಸುವ ಕುರಿತು ಚರ್ಚೆ ನಡೆಸಿ ಸೂಕ್ತ ನಿರ್ಣಯ ಕೈಗೊಳ್ಳಲು ಒಂದು ವಾರದೊಳಗೆ ಸರ್ವ ಪಕ್ಷ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಶುಕ್ರವಾರ ಈ ಸಂಬಂಧ ಹೇಳಿಕೆ ನೀಡಿದ ಅವರು, ನಾಗಮೋಹನದಾಸ್‌ ಮತ್ತು ಸುಭಾಷ್‌ ಅಡಿ ಅವರ ವರದಿಗಳು ಬಂದಿದ್ದು, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಮಾತುಕತೆ ನಡೆಸಿ ಸಭೆಯ ದಿನಾಂಕ ನಿಗದಿ ಮಾಡುತ್ತೇನೆ ಎಂದಿದ್ದಾರೆ.

ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣವನ್ನು ಶೇ 7 ಕ್ಕೆ ಹೆಚ್ಚಿಸಬೇಕು ಎಂದು ಕಳೆದ 200 ದಿನಗಳಿಂದ ಧರಣಿ ನಡೆಸುತ್ತಿರುವ ವಾಲ್ಮೀಕಿ ಸ್ವಾಮೀಜಿಯವರು ಧರಣಿ ಕೈಬಿಡಬೇಕು ಎಂದು ಮನವಿ ಮಾಡಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಬಗ್ಗೆ ಸಹಾನುಭೂತಿ ಇದೆ. ಜನಸಂಖ್ಯೆಗೆ ಆಧಾರವಾಗಿ ನ್ಯಾಯ ಕೊಡಿಸಲು ಸರ್ಕಾರವೂ ಬದ್ಧವಿದೆ. ಈ ಸಮುದಾಯಗಳ ಭಾವನೆಗೆ ನಾವು ಸ್ಪಂದಿಸುತ್ತೇವೆ. ಕಾನೂನಾತ್ಮಕ ವಿಚಾರ ಇರುವುದರಿಂದ ಕಾನೂನು ತಜ್ಞರೂ ಈ ಸಭೆಯಲ್ಲಿ ಭಾಗವಹಿಸುವರು ಎಂದು ತಿಳಿಸಿದರು.

ಮುಖ್ಯಮಂತ್ರಿಯವರ ಪ್ರಸ್ತಾಪವನ್ನು ಬೆಂಬಲಿಸಿದ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಈ ವಿಚಾರವಾಗಿ ಸರ್ವಪಕ್ಷಗಳ ಸಭೆ ನಡೆಸುವುದು ಸೂಕ್ತ. ವಾಲ್ಮೀಕಿ ಸಮುದಾಯದ ಸ್ವಾಮೀಜಿ 200 ದಿನಗಳಿಂದ ಧರಣಿ ಮಾಡುತ್ತಿದ್ದಾರೆ. ಆದಷ್ಟು ಬೇಗ ಬಗ್ಗೆ ಚರ್ಚೆ ನಡೆಸಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಸರ್ಕಾರದ ಈ ತೀರ್ಮಾನಕ್ಕೆ ಪಕ್ಷದ ಬೆಂಬಲವಿದೆ. ಸರ್ಕಾರ ನಡೆಸುವ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸುತ್ತೇವೆ. ಸ್ವಾಮೀಜಿಯವರು ಧರಣಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಹಿಂದಿನ ಲೇಖನಬೈಲುಕುಪ್ಪೆ ಸುವರ್ಣ ದೇವಾಲಯ
ಮುಂದಿನ ಲೇಖನಮೈಸೂರು ಅನಂತಸ್ವಾಮಿ ದಾಟಿಯಲ್ಲಿ ನಾಡಗೀತೆ ಹಾಡಲು ರಾಜ್ಯ ಸರ್ಕಾರ ಸಮ್ಮತಿ