ಬೆಂಗಳೂರು : ನನಗೆ ಕಾಂಗ್ರೆಸ್ ಏನು ಕಡಿಮೆ ಮಾಡಿಲ್ಲ. ನಾನು ಯಾಕೆ ಜೆಡಿಎಸ್ಗೆ ಹೋಗಲಿ. ನಾನು ಜೆಡಿಎಸ್ಗೆ ಹೋಗುತ್ತೇನೆ ಅನ್ನೋದು ಊಹಾಪೋಹ ಎಂದು ಸಚಿವ ಜಮೀರ್ ಅಹ್ಮದ್ ಸ್ಪಷ್ಟಪಡಿಸಿದ್ದಾರೆ. ಜಮೀರ್ ಜೆಡಿಎಸ್ಗೆ ಹೋಗುತ್ತಾರೆ, ಕುಮಾರಸ್ವಾಮಿ ಜೊತೆ ರಹಸ್ಯ ಮಾತುಕತೆ ಮಾಡಿದ್ದಾರೆ ಎಂಬ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಥೂ..ಥೂ…ನಾನು ಯಾಕೆ ಜೆಡಿಎಸ್ಗೆ ಹೋಗಲಿ. ಇದೆಲ್ಲ ಊಹಾಪೋಹ ಸುದ್ದಿ ಎಂದರು.
ನಾನು ಜೆಡಿಎಸ್ ಬಿಟ್ಟು ಬಂದು ಮತ್ತೆ ಯಾಕೆ ಹೋಗಲಿ? ಕಾಂಗ್ರೆಸ್ ಪಕ್ಷ ನನಗೇನು ಕಡಿಮೆ ಮಾಡಿಲ್ಲ. 2017 ರಲ್ಲಿ ನಾನು ಕಾಂಗ್ರೆಸ್ಗೆ ಬಂದೆ. 2018ರಲ್ಲಿ ಸಮ್ಮಿಶ್ರ ಸರ್ಕಾರ ಕುಮಾರಸ್ವಾಮಿ ಸಿಎಂ ಇದ್ದರು. ನಿರೀಕ್ಷೆ ಕೂಡಾ ಮಾಡಿರಲಿಲ್ಲ, ಯಾರನ್ನು ಕೇಳಿರಲಿಲ್ಲ ಆಗಲೇ ಮಂತ್ರಿ ಮಾಡಿದ್ರು. 5 ಖಾತೆಗಳನ್ನ ಕೊಟ್ಟಿದ್ದರು. ಜೆಡಿಎಸ್ನಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ವಕ್ಫ್ ಖಾತೆ ಮಾತ್ರ ಕೊಟ್ಟಿದ್ದರು. 5 ಖಾತೆ ಕೊಟ್ಟಿದ್ದರು ಕಾಂಗ್ರೆಸ್ ಅವರು. ಈಗ 2023ರಲ್ಲಿ 4 ಖಾತೆ ಕೊಟ್ಟಿದ್ದಾರೆ. ಕಾಂಗ್ರೆಸ್ ನನಗೇನು ಕಡಿಮೆ ಮಾಡಿದೆ ಜೆಡಿಎಸ್ಗೆ ಹೋಗೋಕೆ ಎಂದು ಹೇಳಿದರು.
2018ರಲ್ಲಿ ನನಗಿಂತ ಸೀನಿಯರ್ ಇದ್ದರು, ನನನ್ನು ಮಂತ್ರಿ ಮಾಡಿದ್ರು. ರಹಸ್ಯವಾಗಿ ನಾನು ಯಾಕೆ ಕುಮಾರಸ್ವಾಮಿ ಜೊತೆ ಮಾತಾಡಲಿ. ಅದು ಊಹಾಪೋಹ ಸುದ್ದಿ. ಪಕ್ಷ ನನಗೇನು ಕಡಿಮೆ ಮಾಡಿಲ್ಲ. ನಾನು ಯಾಕೆ ಜೆಡಿಎಸ್ಗೆ ಹೋಗಲಿ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ರೆ ಹೇಳಲಿ. ಅದು ಬಿಟ್ಟು ಅಡ್ಡ ಗೋಡೆ ಮೇಲೆ ದೀಪ ಇಟ್ಟರೆ ನಾನು ಏನು ಮಾಡಲಿ ಎಂದು ತಿಳಿಸಿದರು.
ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ ಎಂಬ ಮಾಜಿ ಸಚಿವ ರಾಜಣ್ಣ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಈಗಲೂ ಟಗರು. ಅವರು ಮಾತಾಡಿದರೆ ಸೌಂಡ್ ಬೇರೆ ತರಹ ಇರುತ್ತದೆ. ಮುಂಚೆ ಹೇಗಿದ್ರೋ ಈಗಲೂ ಹಾಗೇ ಇದ್ದಾರೆ. ಅಗತ್ಯ ಇದ್ದರೆ ಸಿದ್ದರಾಮಯ್ಯ ಮಾತಾಡುತ್ತಾರೆ. ಸುಮ್ಮನೆ ಮಾತಾಡೋಕೆ ಆಗುತ್ತಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ನಲ್ಲಿ ಇರೋ ಎಲ್ಲರೂ ಸಿದ್ದರಾಮಯ್ಯಗೆ ಆಪ್ತರೇ. ಅವರು ನಮ್ಮ ಮುಖ್ಯಮಂತ್ರಿ. ಸಿದ್ದರಾಮಯ್ಯ ಈಗ ಸೈಲೆಂಟ್ ಇರಬಹುದು. ಆದ್ರೆ ಅವರು ಮಾತಾಡಿದ್ರೆ ಅದು ಬೇರೆ ತರಹ ಸೌಂಡ್ ಆಗುತ್ತದೆ. ಈಗ ಮಾತಾಡೋದು ಅಗತ್ಯ ಇಲ್ಲ. ಅಗತ್ಯ ಬಂದಾಗ ಮಾತನಾಡುತ್ತಾರೆ ಅಂತ ವಿರೋಧಿಗಳಿಗೆ ಟಾಂಗ್ ಕೊಟ್ಟರು.














