ಲಕ್ನೋ : ಲವ್ವರ್ ಜೊತೆ ಬ್ರೇಕಪ್ ಮಾಡಿಕೊಳ್ಳಲು ನಿರಾಕರಿಸಿದ ಬಾಲಕಿಯನ್ನು ತಂದೆ ಬರ್ಬರವಾಗಿ ಹತ್ಯೆ ಮಾಡಿ, ಗುರುತು ಮರೆಮಾಚಲು ಮುಖಕ್ಕೆ ಆ್ಯಸಿಡ್ ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಕಳೆದ ವರ್ಷ ಆಗಸ್ಟ್ನಲ್ಲಿ, ಹದಿಹರೆಯದ ಹುಡುಗಿ ತನ್ನ ಗೆಳೆಯನೊಂದಿಗೆ ಓಡಿಹೋಗಿದ್ದಳು. ಹುಡುಗಿಯನ್ನು ಮನೆಗೆ ವಾಪಸ್ ಕರೆತರಲಾಗಿತ್ತು. ಹುಡುಗನನ್ನು ಮೂರು ತಿಂಗಳು ಜೈಲಿಗೆ ಕಳುಹಿಸಲಾಯಿತು. ನವೆಂಬರ್ನಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ಬಾಲಕಿ ತನ್ನ ಪ್ರಿಯಕರನೊಂದಿಗೆ ಸಂಪರ್ಕದಲ್ಲಿ ಮುಂದುವರೆದಳು. ಮಗಳ ಪ್ರೀತಿ ವಿಚಾರಕ್ಕೆ ಕೋಪಗೊಂಡು ಆಕೆಯನ್ನು ತಂದೆ ವಿಜಯ್ ಕುಮಾರ್ ಹತ್ಯೆ ಮಾಡಿದ್ದಾನೆ.
ಲಕ್ನೋದ ವಿಶ್ವವಿದ್ಯಾಲಯವೊಂದರಲ್ಲಿ ಬಸ್ ಚಾಲಕನಾಗಿರುವ ಚೌಬೆ, ಸಾಮಾಜಿಕ ಕಳಂಕವನ್ನು ತಪ್ಪಿಸಲು ಹಲವಾರು ಬಾರಿ ಮನೆಗಳನ್ನು ಬದಲಾಯಿಸಿದ್ದ. ಪದೇ ಪದೇ ಮನವೊಲಿಸಿದರೂ, ಅಪ್ರಾಪ್ತ ಬಾಲಕಿ ತನ್ನ ಪ್ರಣಯ ಸಂಬಂಧವನ್ನು ಕೊನೆಗೊಳಿಸಲು ನಿರಾಕರಿಸಿದ್ದಾಳೆ ಎನ್ನಲಾಗಿದೆ.
ಚೌಬೆ ತನ್ನ ಸ್ನೇಹಿತ ಅಬ್ದುಲ್ ಮನ್ನನ್ ಜೊತೆ ಸೇರಿಕೊಂಡು ಮಗಳ ಕೊಲೆಗೆ ಸಂಚು ರೂಪಿಸಿದ್ದ. ಏ.13 ರಂದು ಬಾಲಕಿಯನ್ನು ರಾಜಸ್ಥಾನದ ಭೂತವಿಮೋಚನೆ ಆಚರಣೆಗಾಗಿ ಕರೆದೊಯ್ಯುವುದಾಗಿ ಹೇಳಿ ಕಾರನ್ನು ಬಾಡಿಗೆಗೆ ಪಡೆದುಕೊಂಡಿದ್ದ. ರಾತ್ರಿ ಹೊತ್ತಿಗೆ ಬಾರಾಬಂಕಿ ತಲುಪಿ, ಅಲ್ಲಿ ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿದ್ದಾರೆ. ನಿದ್ರೆಯಲ್ಲಿದ್ದ ಬಾಲಕಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ನಂತರ ಆಕೆಯ ಗುರುತನ್ನು ಮರೆಮಾಡಲು ಮುಖದ ಮೇಲೆ ಆ್ಯಸಿಡ್ ಹಾಕಿದ್ದರು.
ಶಾರದಾ ಕಾಲುವೆಯಲ್ಲಿ ಶವವನ್ನು ಎಸೆಯುವುದು ಇಬ್ಬರ ಯೋಜನೆಯಾಗಿತ್ತು. ಆದರೆ, ರಸ್ತೆಯಲ್ಲಿ ವಾಹನಗಳು ಹೆಚ್ಚಾಗಿ ಓಡಾಡುತ್ತಿದ್ದುದನ್ನು ನೋಡಿ ಭಯಭೀತರಾಗಿ ಶವವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು. ಬಳಿಕ ಏಪ್ರಿಲ್ 16 ರಂದು, ಚೌಬೆ ಇಂಟಿಗ್ರೇಟೆಡ್ ಗ್ರೀವೆನ್ಸ್ ರಿಡ್ರೆಸಲ್ ಸಿಸ್ಟಮ್ (ಐಜಿಆರ್ಎಸ್) ಪೋರ್ಟಲ್ ಮೂಲಕ ಪುತ್ರಿ ಕಾಣೆಯಾಗಿದ್ದಾಳೆಂದು ದೂರು ದಾಖಲಿಸಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ, ತಂದೆಯೇ ತನ್ನ ಪುತ್ರಿಯನ್ನು ಹತ್ಯೆ ಮಾಡಿರುವ ವಿಚಾರ ಗೊತ್ತಾಗಿದೆ. ಬಾಲಕಿ ತಂದೆ 34 ವರ್ಷದ ಚೌಬೆ ಮತ್ತು ಆತನ ಸಹಚರ 45 ವರ್ಷದ ಅಬ್ದುಲ್ ಮನ್ನನ್ನನ್ನು ಪೊಲೀಸರು ಬಂಧಿಸಿದ್ದಾರೆ.














