ಮನೆ ಅಪರಾಧ ಮೈಸೂರು: ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಕೊಲೆ ಬೆದರಿಕೆ

ಮೈಸೂರು: ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಕೊಲೆ ಬೆದರಿಕೆ

0

ಮೈಸೂರು: ಇಲ್ಲಿನ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರಿಗೆ ಕೊಲೆ ಬೆದರಿಕೆ ಒಡ್ಡಿರುವ ಕುರಿತಾಗಿ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಈ ಕುರಿತು ದೂರು ನೀಡಿರುವ ಅಡ್ಡಂಡ ಕಾರ್ಯಪ್ಪ ಪೊಲೀಸ್ ರಕ್ಷಣೆ ಕೋರಿದ್ದಾರೆ.

ದೂರಿನಲ್ಲೇನಿದೆ ?

ರಂಗಾಯಣದಿಂದ ‘ಟಿಪ್ಪು ನಿಜಕನಸುಗಳು’ ಎಂಬ ನಾಟಕವನ್ನು ರಚಿಸಿ, ನಿರ್ದೇಶನ ಮಾಡಿ ಇದೀಗ ಪ್ರದರ್ಶನಗೊಳ್ಳುತ್ತಿದೆ. ಈ ಪ್ರದರ್ಶನ ಆರಂಭವಾದ ದಿನದಿಂದ ನನ್ನ ವಿರುದ್ಧ ಕೆಲವರು ಪ್ರತಿಭಟನೆ, ಜಿಲ್ಲಾಧಿಕಾರಿಗಳಿಗೆ ದೂರು, ಇತ್ಯಾದಿ ಮಾಡುತ್ತಾ ಬಂದಿದ್ದಾರೆ. ಮೈಸೂರಿನ ಮಹೇಶ್‌ ಚಂದ್ರಗುರು ಎಂಬುವವರು ವೀಡಿಯೋ ಒಂದರಲ್ಲಿ ನನ್ನನ್ನು ‘ಮನೆಹಾಳ’ ಕಾರ್ಯಪ್ಪ ಇತ್ಯಾದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಸಾರ ಮಾಡುತ್ತಿದ್ದಾರೆ. ಇದರಿಂದ ಪ್ರಚೋದನೆಗೊಂಡ ಕೆಲವರು (ಹೆಸರು ಗೊತ್ತಿಲ್ಲ) ನಿಂದಿಸಲು ತೊಡಗಿದ್ದಾರೆ. ನವೆಂಬರ್ 28ರಂದು ಶಿವಮೊಗ್ಗ ಜಿಲ್ಲೆಯ ವಿಳಾಸದಿಂದ ಪತ್ರವೊಂದು ಬಂದಿದ್ದು, ಈ ಪತ್ರದಲ್ಲೂ ಅವಾಚ್ಯ ಶಬ್ದಗಳ ನಿಂದನೆಯಿದ್ದು, ‘ನಿನಗೀಗ ಸಾಯುವ ಕೊಲೆ ಆಗುವ ಹಂತ ತಲುಪಿದ್ದೀರ, ನಿನ್ನನ್ನು ನೀವು ನಂಬಿರುವ ದೇವರು ಸಹ ಉಳಿಸುವುದಿಲ್ಲ ಎಂದು ಜೀವ ಬೆದರಿಕೆಯನ್ನು ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗದಿಂದ ಪೋಸ್ಟ್ ಕಾರ್ಡಿನಲ್ಲಿ ಇನ್ನೊಂದು ಪತ್ರ ಬಂದಿದೆ. ‘ಟಿಪ್ಪು ನಿಜಕನಸುಗಳು’ ನಾಟಕ ಪ್ರದರ್ಶನಕ್ಕೆ ಪೊಲೀಸ್‌ ಸೂಕ್ತ ಬಂದೋಬಸ್ತ್ ಮಾಡಿದ್ದು ಪ್ರದರ್ಶನ ನಡೆಯುತ್ತಿದೆ. ಆದರೆ ನಾನು ನನ್ನ ಕಚೇರಿಯ ಕೆಲಸಗಳು, ನಾಟಕದ ಸಂಘಟನಾತ್ಮಕ ಕೆಲಸಗಳಿಗಾಗಿ ನಾನು ಹೊರಗೆಲ್ಲಾ ಹೋಗಬೇಕಾಗುತ್ತದೆ. ಈ ರೀತಿಯ ಬೆದರಿಕೆ ಕರೆ ಒಡ್ಡುವವರು ನನಗೆ ಜೀವಹಾನಿ ಮಾಡಬಹುದು ಎಂಬ ಅನುಮಾನ ಇದೆ. ಅಲ್ಲದೇ ಮಹೇಶ್‌ ಚಂದ್ರಗುರು ಅಂಥವರು ಮತ್ತು ಇವರ ಸಹಚರರು ಇಂತವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಆದುದರಿಂದ ನನಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅಡ್ಡಂಡ ಕಾರ್ಯಪ್ಪ ದೂರಿನಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನ`ಯುದ್ದಕಾಂಡ’ ಚಿತ್ರದಲ್ಲಿ ವಕೀಲರಾಗಿ ಕಾಣಿಸಿಕೊಳ್ಳುತ್ತಿರುವ ಅಜಯ್ ರಾವ್
ಮುಂದಿನ ಲೇಖನವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ತಲುಪಿದ ಕರ್ನಾಟಕ