ಮನೆ ಸುದ್ದಿ ಜಾಲ ನಾಡಹಬ್ಬ ದಸರಾ: ಮುಷ್ಠಿ ಕಾಳಗಕ್ಕೆ ಜಟ್ಟಿಗಳ ಸಕಲ ಸಿದ್ಧತೆ

ನಾಡಹಬ್ಬ ದಸರಾ: ಮುಷ್ಠಿ ಕಾಳಗಕ್ಕೆ ಜಟ್ಟಿಗಳ ಸಕಲ ಸಿದ್ಧತೆ

0

ಚಾಮರಾಜನಗರ(Chamarajanagar): ನಾಡಹಬ್ಬ ದಸರಾಗೆ ದಿನಗಣನೆ ಆರಂಭವಾಗಿದ್ದು, ದಸರೆಯ ಪ್ರಮುಖ ಆಕರ್ಷಣೆಯಾದ ಮುಷ್ಠಿ ಕಾಳಗದಲ್ಲಿ ಪಾಲ್ಗೊಳ್ಳಲು ಜಟ್ಟಿಗಳು ಸಕಲ ಸಿದ್ಧತೆ ನಡೆಸುತ್ತಿದ್ದಾರೆ.

ನಾಡಹಬ್ಬ ದಸರಾದ ವಿಜಯದಶಮಿ ದಿನದಂದು ಮೈಸೂರಿನ ಅಂಬಾ ವಿಲಾಸ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ನಡೆಯುವ ಮೈನವಿರೇಳಿಸುವ ವಜ್ರಮುಷ್ಟಿ ಕಾಳಗಕ್ಕೆ ಚಾಮರಾಜನಗರ ಜಟ್ಟಿ, ಉಸ್ತಾದ್ ಕೃಷ್ಣಪ್ಪ ಅವರ ಪುತ್ರ ಅಚ್ಯುತ್ ಜಟ್ಟಿ ಸಜ್ಜುಗೊಳ್ಳುತ್ತಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಚಾ.ನಗರದ ದೊಡ್ಡ ಗರಡಿಯಲ್ಲಿ ತರಬೇತುದಾರ ಪುಟ್ಟಣ್ಣ ಜಟ್ಟಿ ಮತ್ತು ಹೇಮಂತ್ ಜಟ್ಟಿ, ತಿರುಮಲೇಶ್ ಜಟ್ಟಿ ಅವರುಗಳಿಂದ ಅಚ್ಯುತ್ ತರಬೇತಿ ಪಡೆಯುತ್ತಿದ್ದಾರೆ.

ವಜ್ರಮುಷ್ಠಿ ಕಾಳಗದ ಮಹತ್ವ: ದಸರಾ ಮಹೋತ್ಸವದಲ್ಲಿ ನಡೆಯುವ ವಜ್ರಮುಷ್ಟಿ ಕಾಳಗಕ್ಕೆ ತನ್ನದೇ ಆದ ಮಹತ್ವವಿದ್ದು, ವಿಜಯದಶಮಿಯ ದಿನ ನಡೆಯುವ ಜಂಬೂ ಸವಾರಿಗೂ ಮೊದಲು ರಾಜ ಮನೆತನದವರ ಸಮ್ಮುಖದಲ್ಲಿ ಈ ಕಾಳಗ ನಡೆಯುತ್ತದೆ. ಸಂಪ್ರದಾಯದ ಉದ್ದೇಶದಿಂದ ನಡೆಯುವ ಈ ಕಾಳಗ ಕೆಲವೇ ಸೆಕೆಂಡುಗಳಲ್ಲಿ ಮುಗಿಯುತ್ತದೆ. ಆದರೂ, ಈ ಕಾಳಗವನ್ನು ವೀಕ್ಷಿಸಲು ಜನರ ಸಾಕಷ್ಟು ಸಂಖ್ಯೆಯಲ್ಲಿ ನೆರೆಯುತ್ತಾರೆ.

ಜಟ್ಟಿ ಜನಾಂಗಕ್ಕೆ ಸೇರಿದ ನಾಲ್ವರು ಪೈಲ್ವಾನರು ವಜ್ರಮುಷ್ಟಿ ಕಾಳಗ ಮಾಡುತ್ತಾರೆ. ಕೈಯಲ್ಲಿ ದಂತದ ನಖವನ್ನು ಧರಿಸಿ ಮಾಡುವ ಈ ಹೊಡೆದಾಟದಲ್ಲಿ ಯಾರಾದರೂ ಒಬ್ಬ ಜಟ್ಟಿಯ ತಲೆಯಲ್ಲಿ ರಕ್ತ ಸುರಿಯಲು ಆರಂಭವಾದ ತಕ್ಷಣ ಕಾಳಗವನ್ನು ಮುಕ್ತಾಯ ಮಾಡುವುದು ರೂಢಿಯಿಂದಲೂ ನಡೆದುಕೊಂಡು ಬಂದಿದೆ.
ಬೆಂಗಳೂರು, ಮೈಸೂರು, ಚನ್ನಪಟ್ಟಣ ಮತ್ತು ಚಾಮರಾಜನಗರದ ತಲಾ ಒಬ್ಬೊಬ್ಬ ಜಟ್ಟಿ ಈ ವಜ್ರಮುಷ್ಟಿ ಕಾಳಗದಲ್ಲಿ ಭಾಗವಹಿಸುವುದು ರೂಢಿ. ಈ ನಾಲ್ಕು ಊರುಗಳಿಂದ ಪ್ರತಿವರ್ಷ ಜಟ್ಟಿಗಳನ್ನು ಕಳುಹಿಸಲೇಬೇಕು. ಇದರಲ್ಲಿ ಭಾಗವಹಿಸುವವರು ಜಟ್ಟಿ ಜನಾಂಗದವರೇ ಆಗಬೇಕು.

ದಸರಾ ಆರಂಭಕ್ಕೆ ಒಂದು ತಿಂಗಳು ಇರುವಾಗ ಆಯ್ಕೆ ಮಾಡಿ ತರಬೇತಿ ನೀಡಲು ಆರಂಭಿಸುತ್ತಾರೆ, ಕಾಳಗದ ನಡೆಗಳನ್ನು ಕಲಿಸಲಾಗುತ್ತದೆ. ಪ್ರತಿ ದಿನ ಬೆಳಿಗ್ಗೆ ತರಬೇತಿ ಇರುತ್ತದೆ, ಶನಿವಾರ-ಭಾನುವಾರ ದಿನಪೂರ್ತಿ ತರಬೇತಿ ನಡೆಯಲಿದ್ದು ಜಟ್ಟಿಯನ್ನು ಆಯ್ಕೆ ಮಾಡುವಾಗ ವಯಸ್ಸಿನ ಮಿತಿ ನೋಡುವುದಿಲ್ಲ. ಆರೋಗ್ಯದಿಂದ ಇರಬೇಕು. ದೈಹಿಕವಾಗಿ ಸದೃಢರಾಗಿರಬೇಕು, ರಾಜಮನೆತನದ ಅಂಗರಕ್ಷಕರಾಗಿರುವ ಜಟ್ಟಿ ಸಮುದಾಯದ ಶೌರ್ಯ, ತ್ಯಾಗ, ರಾಜರಿಗೆ ಒಳಿತಾಗಲೆಂಬ ಸಂಕೇತ ಈ ಜಟ್ಟಿ ಕಾಳಗವಾಗಿದೆ.

ಹಿಂದಿನ ಲೇಖನಭ್ರಷ್ಟಾಚಾರ ಪ್ರಕರಣ: ಬಿಎಸ್’ವೈ ಕುಟುಂಬ ಸದಸ್ಯರು, ಸಚಿವ ಸೋಮಶೇಖರ್ ವಿರುದ್ಧ ತನಿಖೆಗೆ ವಿಶೇಷ ನ್ಯಾಯಾಲಯದ ಆದೇಶ
ಮುಂದಿನ ಲೇಖನವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಾಲಿಕೆ ಪೌರಕಾರ್ಮಿಕರ ಒಕ್ಕೂಟದ ಪ್ರತಿಭಟನೆ