ಮನೆ ರಾಜಕೀಯ ಶೀಘ್ರದಲ್ಲಿ ಜೆಡಿಎಸ್ ಸೇರ್ಪಡೆ: ಸಿಎಂ ಇಬ್ರಾಹಿಂ

ಶೀಘ್ರದಲ್ಲಿ ಜೆಡಿಎಸ್ ಸೇರ್ಪಡೆ: ಸಿಎಂ ಇಬ್ರಾಹಿಂ

0

ಬೆಂಗಳೂರು: ದಾವಣಗೆರೆಯಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಳ್ಳಲಿದ್ದು,  ಶೀಘ್ರದಲ್ಲಿ ದಿನಾಂಕ ಪ್ರಕಟಿಸುವುದಾಗಿ ಸಿಎಂ ಇಬ್ರಾಹಿಂ ತಿಳಿಸಿದರು.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿ ಗೋಷ್ಠಿ ನಡೆಸಿದ ಇಬ್ರಾಹಿಂ, ನಾನು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ. ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ತಿರ್ಮಾನ ಮಾಡಿದ್ದೇನೆ. ಇದಕ್ಕೆ ಮುನ್ನ ಮತಾಂತರ ವಿಧೇಯಕ ಚರ್ಚೆಗೆ ಬರುವ ಸಾಧ್ಯತೆ ಇದೆ. ನಾನು ರಾಜೀನಾಮೆ ಕೊಟ್ಟರೆ ಬಿಜೆಪಿಗೆ ಸದನದಲ್ಲಿ ಅನುಕೂಲ ಆಗಲಿದೆ. ಹಾಗಾಗಿ 10 ದಿನ ನೋಡ್ಕೊಂಡು ತಿರ್ಮಾನ ಪ್ರಕಟಿಸುತ್ತೇನೆ ಎಂದರು.

ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನತಾದಳ ಪರವಾದ ಅಭಿಪ್ರಾಯ ವ್ಯಕ್ತವಾಗಿದೆ. ಹುಬ್ಬಳ್ಳಿಯಲ್ಲಿ ಸಭೆ ಸಹ ನಿಗದಿಯಾಗಿದೆ. ಅಲಿಂಗ ಸೂತ್ರ ಜಾರಿ ಆಗ್ತಿದೆ. ಅಲ್ಪಸಂಖ್ಯಾತರು ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರು ದಲಿತರು ಪರಸ್ಪರ ಅಪ್ಪಿಕೊಳ್ಳುವುದೇ ಅಲಿಂಗ ಚಳುವಳಿ. ಅಲಿಂಗ ಸಾಮಾಜಿಕ ಚಳುವಳಿ.ರಾಜಕೀಯ ಚಳುವಳಿ ಅಲ್ಲ ಎಂದರು.

ಅಲಿಂಗ ಚಳವಳಿ ಪರ್ಯಾಯ ಚಳವಳಿ. ಅದಕ್ಕೂ ಜನತಾದಳಕ್ಕೂ ಸಂಬಂಧವಿಲ್ಲ. ಅಹಿಂದ ಚಳುವಳಿಗೆ ಪರ್ಯಾಯವಾಗಿ ಅಲಿಂಗ ಚಳುವಳಿ ಅಲ್ಲ ಎಂದ ಅವರು, ಜನತಾದಳ ನೇತೃತ್ವದಲ್ಲಿ ಪರ್ಯಾಯ ರಂಗ ರಚನೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಮತ್ತು ಕಾಂಗ್ರೆಸ್ ಪರ್ಯಾಯವಾಗಿ ಒಂದು ರಂಗ ಕಟ್ಟಲು ತಿರ್ಮಾನ ಮಾಡಲಾಗಿದೆ. ಸಿದ್ಧಾಂತ ಸಮಾನವಾಗಿರುವ ಜನರ ಜೊತೆಗೆ ರಂಗ ಕಟ್ಟುವ ತಿರ್ಮಾನ ಮಾಡ್ತಿದ್ದೇವೆ. ಬಿಜೆಪಿ ಮತ್ತು ಕಾಂಗ್ರೆಸ್ ನಿಂದ ಸಮಾನ ದೂರ ಕಾಪಾಡಿಕೊಳ್ಳುತ್ತೇವೆ ಎಂದು ಹೇಳಿದರು.

ಬಿಜೆಪಿ ಮತ್ತು ಕಾಂಗ್ರೆಸ್ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಅದನ್ನು ನಾನು ಒಪ್ಪಲ್ಲ. ನಾನು ಜೆಡಿಎಸ್ ಸೇರುವ ಮುನ್ನ ಸರಣಿ ಸಭೆ ಮಾಡ್ತಾ ಇದ್ದೇವೆ.ಎಲ್ಲವೂ ಸಭೆಯ ಬಳಿಕ ತಿರ್ಮಾನ ಆಗಲಿದೆ ಎಂದು ತಿಳಿಸಿದರು.

ಟಿಎಂಸಿ, ಎಸ್ಪಿ, ಬಿಎಸ್ಪಿ ಆದರೆ ಒಂದರಿಂದ ಎಣಿಕೆ ಮಾಡಬೇಕು. ಜೆಡಿಎಸ್ ಆದರೆ 31 ರಿಂದ ಎಣಿಕೆ ಮಾಡಬೇಕಿದೆ. ಹಾಗಾಗಿ ಇದಕ್ಕೆ ಉತ್ತೇಜನ ಕೊಡ್ತೇವೆ. ಇದೇ ಜನವರಿ 14ರ ನಂತರ ಜೆಡಿಎಸ್ ಯಾವಾಗ ಸೇರಬೇಕು ಎಂಬುದನ್ನು ತೀರ್ಮಾನ ಮಾಡುತ್ತೇನೆ. ಅಲಿಂಗಾವನ್ನು ಯಾರು ಲೀಡ್ ಮಾಡಬೇಕು ಎಂಬುದರ ಚರ್ಚೆ ನಡೆಯುತ್ತದೆ. ನಾನು ಅಲಿಂಗಾದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ‌ ಕೆಲಸ ಮಾಡುತ್ತೇನೆ. ಅಲಿಂಗಾ ಬಗ್ಗೆ ಚರ್ಚೆ ಮಾಡಲು ಶ್ರೀನಿವಾಸ ಪ್ರಸಾದ್, ಎಚ್ ವಿಶ್ವನಾಥ್ ಅವರೊಂದಿಗೆ ಚರ್ಚೆ ಮಾಡಲು ಮೈಸೂರಿಗೆ ಹೋಗುತ್ತೇನೆ ಎಂದರು.

ಹಿಂದಿನ ಲೇಖನಹಿಜಾಬ್ ಹೆಸರಿನಲ್ಲಿ ಕರಾವಳಿಯನ್ನು ತಾಲಿಬಾನ್ ಮಾಡಲು ಬಿಡುವುದಿಲ್ಲ: ನಳೀನ್ ಕುಮಾರ್ ಕಟೀಲ್
ಮುಂದಿನ ಲೇಖನಕೇಂದ್ರ ಬಜೆಟ್ ನಲ್ಲಿ ಕರ್ನಾಟಕ ಕಡೆಗಣನೆ: ವಾಟಾಳ್ ನಾಗರಾಜ್ ಪ್ರತಿಭಟನೆ