ಮನೆ ರಾಜಕೀಯ ಹಿಜಾಬ್ ವಿವಾದದ ಬಗ್ಗೆ ಸಾರ್ವಜನಿಕ ವೇದಿಕೆಗಳಲ್ಲಿ ಅನಗತ್ಯ ಚರ್ಚೆ ಬೇಡ : ವಿಶ್ವೇಶ್ವರ ಹೆಗಡೆ ಕಾಗೇರಿ

ಹಿಜಾಬ್ ವಿವಾದದ ಬಗ್ಗೆ ಸಾರ್ವಜನಿಕ ವೇದಿಕೆಗಳಲ್ಲಿ ಅನಗತ್ಯ ಚರ್ಚೆ ಬೇಡ : ವಿಶ್ವೇಶ್ವರ ಹೆಗಡೆ ಕಾಗೇರಿ

0

ಬೆಂಗಳೂರು: ಹಿಜಾಬ್ ಕುರಿತ ವಿಷಯವು ನ್ಯಾಯಾಂಗದ ಅಂಗಳದಲ್ಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ವೇದಿಕೆಗಳಲ್ಲಿ ಈ ಬಗ್ಗೆ ಅನಗತ್ಯ ಚರ್ಚೆ ಬೇಡ ಎಂದು ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ  ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಜ್ಯದ ಜನತೆಯಲ್ಲಿ ಮನವಿ ಮಾಡಿದರು.  

ವಿಧಾನ ಮಂಡಲದ ಸಮಿತಿ ಕೊಠಡಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಧರ್ಮದಂತಹ ಸೂಕ್ಷ್ಮ ವಿಚಾರಗಳ ಕುರಿತು ವಾದ-ವಿವಾದಗಳು ನಡೆದಾಗ ಸಂದರ್ಭದ ದುರುಪಯೋಗ ಮಾಡಿಕೊಳ್ಳುವವರು ಹಾಗೂ ದುರ್ಲಾಭ ಪಡೆಯುವವರು ಇರುತ್ತಾರೆ ಎಂಬ ಬಗ್ಗೆ ಎಚ್ಚರ ಮತ್ತು ಜಾಗೃತಿ ನಮ್ಮಲ್ಲಿ ಇರಬೇಕು. ನ್ಯಾಯಾಂಗದ ವ್ಯವಸ್ಥೆಯಲ್ಲಿ ಗೌರವವಿಟ್ಟು ನ್ಯಾಯಾಲಯದ ತೀರ್ಪ ಹೊರ ಹೊಮ್ಮುವವರೆಗೂ ತಾಳ್ಮೆ ಮತ್ತು ಸಂಯಮ ಕಾಯ್ದುಕೊಳ್ಳುವುದು ರಾಜ್ಯದ ಹಾಗೂ ರಾಷ್ಟ್ರದ ದೃಷ್ಠಿಯಿಂದ ಒಳಿತು ಎಂದು ಅವರು ಹಿತ ನುಡಿದರು.  

ರಾಜ್ಯದ 15 ನೇ ವಿಧಾನ ಸಭೆಯ 12 ನೇ ಅಧಿವೇಶನವು  ಫೆಬ್ರವರಿ 14 ರಿಂದ 25 ರವರೆಗೆ ಬೆಂಗಳೂರಿನ ವಿಧಾನ ಸೌಧದ ವಿಧಾನ ಸಭಾ ಸಭಾಂಗಣದಲ್ಲಿ ನಡೆಯಲಿದೆ. ಅಲ್ಲದೆ, ಸಂಪ್ರದಾಯದಂತೆ ವರ್ಷದÀ ಈ ಮೊದಲ ಅಧಿವೇಶನದ ಸಂದರ್ಭದಲ್ಲಿ ಫೆಬ್ರವರಿ 14 ರಂದು ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ ಎಂದು ಸಭಾಧ್ಯಕ್ಷರು ಪ್ರಕಟಿಸಿದರು.

ರಾಜ್ಯಪಾಲರ ಭಾಷಣದ ನಂತರ ಮತ್ತೆ ಸದನವು ಸಮಾವೇಶಗೊಂಡು ಕಳೆದ ಅಧಿವೇಶನದ ನಂತರ ಹಾಗೂ ಪ್ರಸಕ್ತ ಅಧಿವೇಶನದ ಅವಧಿಯಲ್ಲಿ ಮೃತರಾದ ಸದನದ ಸದಸ್ಯರು ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿನ ಗಣ್ಯರಿಗೆ ಸಂತಾಪ ಸೂಚಿಸಲಿದೆ. ಮರುದಿನದಿಂದ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಸಂಬಂಧಿಸಿದಂತೆ ಚರ್ಚೆ ಸರ್ಕಾರದ ಉತ್ತರ ಮತ್ತು  ವಂದನಾ ನಿರ್ಣಯದ ಅಂಗೀಕಾರ, ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆಗಳು, ಶೂನ್ಯವೇಳೆ, ನಿಲುವಳಿ ಸೂಚನೆಗಳು, ನಿಯಮ 69ರ ಮೇಲಿನ ಸೂಚನೆಗಳು, ಖಾಸಗಿ ಸದಸ್ಯರ ಕಾರ್ಯಕಲಾಪಗಳನ್ನು ಹಾಗೂ ಇತರೆ ಪ್ರಾಮುಖ್ಯ ವಿಷಯಗಳ ಚರ್ಚೆಗೆ ಎಂದಿನಂತೆ ಅವಕಾಶವಿರುತ್ತದೆ ಎಂದು ಅವರು ಹೇಳಿದರು.

ಪ್ರಶ್ನೆಗಳ ಸ್ವೀಕಾರ :  ರಾಜ್ಯ ವಿಧಾನ ಸಭೆಯಲ್ಲಿ ಈ ದಿನದ ವರೆಗೆ 2062 ಪ್ರಶ್ನೆಗಳು ಸ್ವೀಕಾರವಾಗಿವೆ.ಅಲ್ಲದೆ, 81 ಗಮನಸೆಳೆಯುವ ಸೂಚನೆಗಳು ಹಾಗೂ ನಿಯಮ 351 ಅಡಿಯಲ್ಲಿ 31 ಸೂಚನೆಗಳು ಸ್ವೀಕೃತವಾಗಿವೆ.

ಸದನದ ಕಲಾಪದಲ್ಲಿ ಪಾಲ್ಗೊಳ್ಳುವ ಮುಖ್ಯಮಂತ್ರಿಯವನ್ನೊಳಗೊಂಡಂತೆ ಎಲ್ಲಾ ಸಚಿವರು ಹಾಗೂ ಪ್ರತಿಪಕ್ಷದ ಎಲ್ಲಾ ಮುಖಂಡರೂ ಸೇರಿದಂತೆ ಎಲ್ಲಾ ಸದಸ್ಯರೂ ಮುಖಗವಸು ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದೂ ಸೇರಿದಂತೆ ಕೋವಿಡ್ ಶಿಷ್ಠಾಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕ ಸ್ವಾಸ್ಥ್ಯ ಕಾಪಾಡುವ ದೃಷ್ಠಿಯಿಂದ  ಈ ನಿಯಮಗಳು ಆಡಳಿತ ಯಂತ್ರಕ್ಕೆ ನೆರವು ಒದಗಿಸುವ ಅಧಿಕಾರಿ ಮತ್ತು ಸಿಬ್ಬಂದಿಗೂ ಹಾಗೂ ಸದನ ಕಲಾಪ ವರದಿ ಮಾಡಲು ಆಗಮಿಸುವ ಮಾಧ್ಯಮದವರಿಗೂ ಅನ್ವಯಿಸುತ್ತದೆ ಎಂದು ಕಾಗೇರಿ ಅವರು ತಿಳಿಸಿದರು.

ಕಾಗದ-ರಹಿತ ಕಲ್ಪನೆಗೆ ಚಾಲನೆ :

ಸದನದಲ್ಲಿ ಉತ್ತರಿಸುವ ಚುಕ್ಕೆ ಗುರುತಿನ ಪ್ರಶ್ನೆಗಳು, ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳು ಹಾಗೂ ಇತ್ಯಾದಿ ಸೂಚನೆಗಳಿಗೆ ಸರ್ಕಾರ ಒದಗಿಸುವ ಲಿಖಿತ ಉತ್ತರಗಳನ್ನು ಸದನದಲ್ಲಿ ಮಂಡಿಸಿದ ತರುವಾಯ ಸದಸ್ಯರಿಗೆ ಹಾಗೂ ಮಾಧ್ಯಮದವರಿಗೆ ಮಿಂಚಂವೆಯ ಮೂಲಕ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ವಿಧಾನ ಸಭಾ ಸಚಿವಾಲಯದ ಅಂತರ್ಜಾಲ ತಾಣದಲ್ಲಿಯೂ ಈ ಮಾಹಿತಿ ಲಭ್ಯ ಎಂದು ಸಭಾಧ್ಯಕ್ಷರು ಮಾಹಿತಿ ನೀಡಿದರು.

ಚುನಾವಣಾ ವ್ಯವಸ್ಥೆ ಸುಧಾರಣೆ : ಸದನದಲ್ಲಿ ಚರ್ಚೆ :

ಪ್ರಜಾಪ್ರಭುತ್ವದಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಚುನಾವಣಾ ವ್ಯವಸ್ಥೆಯ ಸುಧಾರಣೆಗಳ ಕುರಿತು ಸದನ ಕಾರ್ಯಕಲಾಪ ಸಮಿತಿಯಲ್ಲಿ ಚರ್ಚಿಸಿ, ಈ ವಿಷಯ ಕುರಿತು ಸದನದಲ್ಲಿ ವಿಸ್ತøತ ರ್ಚೆಗೆ ಕಾಲಾವಕಾಶ ಮಾಡಿಕೊಡಲು ಸೂಕ್ತ ದಿನಾಂಕ ಮತ್ತು ಸಮಯವನ್ನು ನಿಷ್ಕರ್ಶೆ ಮಾಡಲಾಗುವುದು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ನುಡಿದರು.  

ಇಂತಹುದೇ ವಿಷಯಗಳ ಮೇಲೆ ಈ ಹಿಂದೆ ನಡೆದ ಚರ್ಚೆಗಳು ಫಲಪ್ರದವಾಗಿಲ್ಲ. ಆದಕಾರಣ, ಇಂತಹ ಚರ್ಚೆಗಳು ಸಾರ್ವಜನಿಕ ಸಮಯವನ್ನು ಕಬಳಿಸುತ್ತದೆ. ಅಲ್ಲವೇ ? ಎಂದು ಪತ್ರಕರ್ತರೋರ್ವರು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿ, ಭಾರತಕ್ಕೆ ಒಂದು ಸಂವಿಧಾನ ಅಗತ್ಯವಿದೆ ಎಂದು ಮೊತಿಲಾಲ್ ನೆಹರೂ ಅವರ ಅಧ್ಯಕ್ಷತೆಯಲ್ಲಿ 1927ರಲ್ಲಿ ನಡೆದ ಅಂದಿನ ಕಾಂಗ್ರೆಸ್ ಅಧಿವೇಶನದಲ್ಲಿ ಚಿಗುರೊಡೆದ ಆಶಯವು 1950 ರಲ್ಲಿ ಸಾಕಾರಗೊಂಡಿತು. ಯಾವುದೇ ವಿಷಯವು ಚರ್ಚೆಯೇ ಆಗದಿದ್ದಲ್ಲಿ ಬೆಳಕು ಕಾಣುವುದು ಹೇಗೆ ? ಎಂದು ಪ್ರಶ್ನಿಸಿದ ಸಭಾಧ್ಯಕ್ಷರು ಕೆಲಕಾಲ ಭಾವುಕರಾದರು.

ರಾಜ್ಯ ವಿಧಾನ ಸಭೆಯ ಕಾರ್ಯದರ್ಶಿ ಎಂ. ಕೆ. ವಿಶಾಲಾಕ್ಷಿ ಅವರೂ ಸೇರಿದಂತೆ ವಿಧಾನ ಸಭಾ ಸಚಿವಾಲಯದ ಹಿರಿಯ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಹಿಂದಿನ ಲೇಖನಡಿಜಿಟಲ್ ವ್ಯವಹಾರದಿಂದ ಆರ್ಥಿಕ ಸಬಲೀಕರಣ ನನಸು: ಅಶ್ವತ್ಥನಾರಾಯಣ
ಮುಂದಿನ ಲೇಖನಐಪಿಎಲ್ 2022 ಹರಾಜು: ಶ್ರೇಯಸ್ ಅಯ್ಯರ್ ಕೆಕೆಆರ್ ತೆಕ್ಕೆಗೆ; ಫಾಫ್ ಡುಪ್ಲೆಸಿಸ್ ಆರ್ ಸಿಬಿಗೆ