ಹುಬ್ಬಳ್ಳಿ(Hubballi): ಧಾರವಾಡ ಜೈಲಿನಲ್ಲಿ ಕೈದಿಯಾಗಿರುವ ಪಾಕಿಸ್ತಾನ ಮೂಲದ ಶಂಕಿತ ಭಯೋತ್ಪಾದಕ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಪರಿಣಾಮ ಆತನ ಆರೋಗ್ಯದಲ್ಲಿ ಏರುಪೇರಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೈಲಿನಲ್ಲಿರುವ ವ್ಯಕ್ತಿಯನ್ನು ಪಾಕಿಸ್ತಾನ ಮೂಲದ ಪ್ರಜೆ ಹಾಗೂ ನಿಷೇಧಿತ ಅಲ್-ಬದ್ರ್ ಉಗ್ರ ಸಂಘಟನೆಯ ಶಂಕಿತ ಉಗ್ರ ಮೊಹಮ್ಮದ್ ಫಹಾದ್ ಎಂದು ಗುರುತಿಸಲಾಗಿದೆ. ಈತ ಕೇರಳ ಮೂಲದ ಕೆಲ ವ್ಯಕ್ತಿಗಳ ನೆರವಿನೊಂದಿಗೆ ನಕಲಿ ದಾಖಲೆಗಳೊಂದಿಗೆ ಭಾರತ ಪ್ರವೇಶಿಸಿದ್ದ ಎಂದು ವರದಿಗಳು ತಿಳಿಸಿವೆ.
ಮೈಸೂರಿನಲ್ಲಿ ಪಾಕಿಸ್ತಾನ ಮೂಲಕ ಕೆಲ ಉಗ್ರರು ಭಯೋತ್ಪಾದಕ ಚಟುವಟಿಕೆಗಳ ನಡೆಸುತ್ತಿದ್ದಾರೆಂದು ಗುಪ್ತಚರ ದಳದ ಅಧಿಕಾರಿಗಳು ಈ ಹಿಂದೆ ಮಾಹಿತಿ ನೀಡಿದ್ದರು. ಇದರಂತೆ ಪೊಲೀಸರು 2006ರಲ್ಲಿ ಫಹದ್ ನನ್ನು ಬಂಧನಕ್ಕೊಳಪಡಿಸಿದ್ದರು.
ಈತ ಕೆಲವು ಸ್ಫೋಟ ಚಟುವಟಿಕೆಗಳಲ್ಲಿ ಮತ್ತು ಮಡಿವಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಹೀಗಾಗಿ ಈತನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, 2006ರಲ್ಲಿ ಬಂಧನಕ್ಕೊಳಪಡಿಸಲಾಗಿತ್ತು. ನಂತರ ಧಾರವಾಡ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಆರೋಪಿ ತನ್ನ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸುವಂತೆ ನ್ಯಾಯಾಲಯಕ್ಕೆ ಒತ್ತಾಯಿಸಿ ಮೇ 3 ರಂದು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದ. ಉಪವಾಸ ಸತ್ಯಾಗ್ರಹ ಸ್ಥಗಿತಗೊಳಿಸುವಂತೆ ಜೈಲು ಅಧಿಕಾರಿಗಳು ಸಾಕಷ್ಟು ಮನವೊಲಿಸಲು ಪ್ರಯತ್ನ ನಡೆಸಿದ್ದರೂ, ಯಾರ ಮಾತನ್ನೂ ಕೇಳಿರಲಿಲ್ಲ. ಇದೀಗ ಆರೋಗ್ಯ ಹದಗೆಟ್ಟಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.