ಹಾಸನ : ಟಿ.ಡಿ.ರಾಜೇಗೌಡ ಅವರು ಮತ್ತೆ ಶಾಸಕರಾದ ಬೆನ್ನಲ್ಲೇ ಹಾಸನ ತಾಲೂಕಿನ ಬೀಕನಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಪುರದಮ್ಮ ದೇವಾಲಯಕ್ಕೆ ಭೇಟಿ ನೀಡಿ ಹರಕೆ ತೀರಿಸಿದರು. ದೇವಾಲಯಕ್ಕೆ ಕುಟುಂಬ ಸಮೇತರಾಗಿ ಅವರು ಭೇಟಿ ನೀಡಿದ್ದರು. ಜೊತೆಗೆ ಹತ್ತಾರು ಕಾರ್ಯಕರ್ತರು ಸಹ ಆಗಮಿಸಿದ್ದರು. ಕುಟುಂಬಸ್ಥರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹರಕೆ ಸಲ್ಲಿಸಿದರು.
ಸುಪ್ರೀಂ ಕೋರ್ಟ್ನಲ್ಲಿ ಅಂಚೆ ಮತ ಮರು ಎಣಿಕೆ ಫಲಿತಾಂಶಕ್ಕೆ ತಡೆ ಸಿಕ್ಕ ಹಿನ್ನಲೆಯಲ್ಲಿ ಮತ್ತೆ ಶೃಂಗೇರಿ ಶಾಸಕರಾಗಿ ಟಿ.ಡಿ.ರಾಜೇಗೌಡ ಮುಂದುವರೆದಿದ್ದಾರೆ. ಶಾಸಕರಾಗಿ ಮುಂದುವರೆಯುವಂತೆ ಪುರದಮ್ಮ ದೇವಿಗೆ ಶಾಸಕ ಮತ್ತು ಕಾರ್ಯಕರ್ತರು ಹರಕೆ ಕಟ್ಟಿಕೊಂಡಿದ್ದರು. ಕೋರ್ಟ್ ಮಧ್ಯಂತರ ತೀರ್ಪು ನೀಡುತ್ತಿದ್ದಂತೆ ಪತ್ನಿ, ಪುತ್ರ ಸೇರಿ ಹತ್ತಾರು ಕಾರ್ಯಕರ್ತರ ಜೊತೆ ಆಗಮಿಸಿ ಪೂಜೆ ಸಲ್ಲಿಸಿದರು.
ಮರು ಮತ ಎಣಿಕೆಯಲ್ಲಿ ಬಿಜೆಪಿಯ ಜೀವರಾಜ್ ಅವರಿಗೆ ಗೆಲುವಾಗಿತ್ತು. ಇದನ್ನು ಪ್ರಶ್ನಿಸಿ ಟಿ.ಡಿ.ರಾಜೇಗೌಡ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ನಲ್ಲಿ ಮರು ಮತ ಎಣಿಕೆಯ ಪ್ರಕಾರ ಜೀವರಾಜ್ ಪರ ತೀರ್ಪು ಬಂದಿತ್ತು. ಇದನ್ನು ಪ್ರಶ್ನಿಸಿ ರಾಜೇಗೌಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತ್ತು. ಈ ವೇಳೆ ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡಲು ಬಿಡುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.

















