ಮನೆ ರಾಜ್ಯ ‘ಸಾಂಬಶಿವ ಪ್ರಹಸನ’ ನಾಟಕ ತಿರುಚಿ ಪ್ರದರ್ಶನ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಂಬಾರರಿಂದ ನಗರ ಪೊಲೀಸ್ ಆಯುಕ್ತರಿಗೆ...

‘ಸಾಂಬಶಿವ ಪ್ರಹಸನ’ ನಾಟಕ ತಿರುಚಿ ಪ್ರದರ್ಶನ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಂಬಾರರಿಂದ ನಗರ ಪೊಲೀಸ್ ಆಯುಕ್ತರಿಗೆ ಪತ್ರ

0

ಮೈಸೂರು(Mysuru): ನನ್ನ ‘ಸಾಂಬಶಿವ ಪ್ರಹಸನ’ ನಾಟಕವನ್ನು ರಂಗಾಯಣದಲ್ಲಿ ಅಸಹ್ಯಕರವಾಗಿ ತಿರುಚಿ ಪ್ರದರ್ಶಿಸಲಾಗಿದೆ ಇದರಿಂದ ನನಗೆ ವಿಷಾದವಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಅವರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಸೋಮವಾರ ಬರೆದಿದ್ದಾರೆ.

ನಾಟಕ ಪ್ರದರ್ಶಿಸುವುದಕ್ಕೆ ನನ್ನ ಅನುಮತಿ ಕೇಳಲೇಬೇಕಿತ್ತು. ಆದರೆ, ಕೇಳಿಲ್ಲ. ರಂಗಾಯಣವಾದರೂ ನನ್ನ ಅನುಮತಿ ಇಲ್ಲದೇ ನಾಟಕ ಪ್ರದರ್ಶನಕ್ಕೆ ಅವಕಾಶ ಕೊಟ್ಟಿರುವುದು ವಿಷಾದಕರ ಎಂದರು.

ನನ್ನ ನಾಟಕಗಳಲ್ಲಿ ವ್ಯಕ್ತಿಗತ ನಿಂದನೆ ಇರುವುದು ಸಾಧ್ಯವಿಲ್ಲ. ಅನುಮತಿ ಇಲ್ಲದೇ ನಾಟಕವನ್ನು ಪ್ರದರ್ಶಿಸಿದ್ದಕ್ಕೆ, ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟವರಿಗೆ ಮತ್ತು ಇಲ್ಲದ ಸಾಹಿತ್ಯವನ್ನು ಸೇರಿಸಿದ್ದಕ್ಕೆ ನಿರ್ದೇಶಕರ ಮೇಲೆ ಮತ್ತು ಈ ಅಹಿತಕರ ವಾತಾವರಣಕ್ಕೆ ಕಾರಣರಾದ ಸಂಬಂಧಪಟ್ಟ ಎಲ್ಲರ ಮೇಲೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

ಕಂಬಾರರು ಬರೆದ ಪತ್ರ ತಲುಪಿದ್ದು, ಅದನ್ನು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಪ್ರತಿಕ್ರಿಯಿಸಿದರು.

ಶನಿವಾರ ಪ್ರದರ್ಶನಗೊಂಡ ನಾಟಕದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಅವಹೇಳನ ಮಾಡಲಾಗಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದರು. ಇದೀಗ, ಕಂಬಾರರು ಪತ್ರ ಬರೆದಿರುವುದನ್ನು ಸುಬ್ರಹ್ಮಣ್ಯ ಸ್ವಾಗತಿಸಿದ್ದಾರೆ.

ಹಿಂದಿನ ಲೇಖನಹೆಡ್’ಫೋನ್ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ
ಮುಂದಿನ ಲೇಖನಸಿದ್ದೇಶ್ವರ ಶ್ರೀ ಗಳ ಅಂತ್ಯಕ್ರಿಯೆಗೆ ಶಾಂತಿಯಿಂದ  ಸಹಕರಿಸಿ: ಸಿಎಂ ಬೊಮ್ಮಾಯಿ ಮನವಿ