ಕೋಲ್ಕತ್ತಾ (Kolkata): ಭದ್ರತಾ ಲೋಪದ ಪ್ರಕರಣವೊಂದರಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನೆಗೆ ನುಗ್ಗಿದ್ದ ವ್ಯಕ್ತಿಯೊಬ್ಬ ಅಲ್ಲಿಯೇ ರಾತ್ರಿ ಕಳೆದಿದ್ದಾನೆ.
‘ಝೆಡ್ ಪ್ಲಸ್’ ಭದ್ರತೆಯಿರುವ ಸಿಎಂ ನಿವಾಸಕ್ಕೆ ವ್ಯಕ್ತಿ ಅಕ್ರಮವಾಗಿ ಪ್ರವೇಶಿಸಿರುವುದು ಮತ್ತು ಅಲ್ಲಿಯೇ ಯಾರ ಗಮನಕ್ಕೂ ಬಾರದಂತೆ ಸಮಯ ಕಳೆದಿರುವುದು ಭದ್ರತಾ ಲೋಪವಾಗಿದ್ದು, ಆತಂಕ ಮೂಡಿಸಿದೆ.
ದಕ್ಷಿಣ ಕೋಲ್ಕತ್ತಾದ ಕಾಳಿಘಾಟ್ ಪ್ರದೇಶದಲ್ಲಿನ ಹರೀಶ್ ಚಟರ್ಜಿ ರಸ್ತೆಯಲ್ಲಿರುವ ಮಮತಾ ಬ್ಯಾನರ್ಜಿ ಅವರ ಮನೆಗೆ ಭಾನುವಾರ ನಸುಕಿನ ಜಾವ 1 ಗಂಟೆಗೆ ಗೋಡೆ ಹಾರಿ ವ್ಯಕ್ತಿಯೊಬ್ಬ ಒಳನುಗ್ಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಸಿಎಂ ಮನೆಗೆ ನುಗ್ಗಿದ್ದ ವ್ಯಕ್ತಿ, ಅಲ್ಲಿಯೇ ಮೂಲೆಯೊಂದರಲ್ಲಿ ಬೆಳಗಾಗುವವರೆಗೂ ಕುಳಿತುಕೊಂಡಿದ್ದ. ನಂತರವಷ್ಟೇ ಭದ್ರತಾ ಸಿಬ್ಬಂದಿ ಆತನನ್ನು ಗಮನಿಸಿ, ಬಂಧಿಸಿದ್ದಾರೆ. ಬಳಿಕ ಕಾಳಿಘಾಟ್ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.
ಮನೆಗೆ ನುಗ್ಗಿದ್ದ ವ್ಯಕ್ತಿಯ ಉದ್ದೇಶವೇನಿತ್ತು ಎಂದು ತನಿಖೆ ನಡೆಸಲಾಗುತ್ತಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪ್ರಕರಣದ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಆತ ಮಾನಸಿಕ ಅಸ್ವಸ್ಥನಂತೆ ಕಾಣಿಸುತ್ತಿದ್ದಾನೆ ಎಂದು ಅಧಿಕಾರಿಯೋರ್ವರು ಹೇಳಿದ್ದಾರೆ.
ಭದ್ರತಾ ಲೋಪದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಿಎಂ ಮನೆಯ ಬಳಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದ್ದು, ತಪಾಸಣೆ ಬಿಗಿಗೊಳಿಸಲಾಗಿದೆ.