ಮನೆ ರಾಜ್ಯ ಕಿವಿಗೆ ಕೇಸರಿ ಹೂ ಮುಡಿದು ಸದನಕ್ಕೆ ಬಂದ ಸಿದ್ದರಾಮಯ್ಯ: ಸಿಎಂ ಬೊಮ್ಮಾಯಿ, ಆರ್  ಅಶೋಕ್ ಆಕ್ಷೇಪ

ಕಿವಿಗೆ ಕೇಸರಿ ಹೂ ಮುಡಿದು ಸದನಕ್ಕೆ ಬಂದ ಸಿದ್ದರಾಮಯ್ಯ: ಸಿಎಂ ಬೊಮ್ಮಾಯಿ, ಆರ್  ಅಶೋಕ್ ಆಕ್ಷೇಪ

0

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2ನೇ ಬಾರಿ ಬಜೆಟ್‌ ಮಂಡಿಸುತ್ತಿದ್ದಾರೆ.

ಈ ಸಂದರ್ಭ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವಾರು ಕಾಂಗ್ರೆಸ್‌ ಮುಖಂಡರು ಕಿವಿ ಮೇಲೆ ಕೇಸರಿ ಬಣ್ಣದ ಹೂವು ಇಟ್ಟುಕೊಂಡು ಸದನಕ್ಕೆ ಬಂದಿದ್ದರಿಂದ ಕೆಲಹೊತ್ತು ಕಲಾಪದಲ್ಲಿ ಗದ್ದಲಕ್ಕೆ ಕಾರಣವಾಯಿತು.

ಸಿದ್ಧರಾಮಯ್ಯ ಅವರು ನಡೆಗೆ ಸಚಿವ ಆರ್.ಅಶೋಕ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಸಿಎಂ ಬೊಮ್ಮಾಯಿ ಅವರು, ಇಷ್ಟು ದಿನ ಅವರು ಜನರ ಕಿವಿ ಮೇಲೆ ಹೂವಿಟ್ಟಿದ್ದಾರೆ. ಈಗ ಅವರೇ ಕಿವಿ ಮೇಲೆ ಹೂವು ಇಟ್ಟುಕೊಂಡಿದ್ದಾರೆ. ಮುಂದೆ ಜನ ಇವರ ಕಿವಿ ಮೇಲೆ ಹೂವಿಡುತ್ತಾರೆ ಎಂದರು.

ಇದಕ್ಕೆ ಗರಂ ಆದ ಸಿದ್ದರಾಮಯ್ಯ, ನೀವು ಜನರ ಕಿವಿ ಮೇಲೆ ಹೂವಿಡುತ್ತಿದ್ದೀರಿ. ನಾನು ಹೂವು ಇಟ್ಟುಕೊಂಡಿದ್ದು, ಈ ಬಜೆಟ್‌ ಮೂಲಕ ಇವರು 7 ಕೋಟಿ ಜನರ ಕಿವಿ ಮೇಲೆ ಹೂ ಇಡುತ್ತಿದ್ದಾರೆ ಅಂತ ತಿಳಿಸಲು ಎಂದು ಅಸಮಾಧಾನ ಹೊರಹಾಕಿದರು.

ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಸದಸ್ಯರ ನಡುವೆ ವಾಕ್ಸಮರ ನಡೆಯಿತು.

ಮಧ್ಯಪ್ರವೇಶ ಮಾಡಿದ ಸಭಾಧ್ಯಕ್ಷ ಕಾಗೇರಿಯವರು, ಇಷ್ಟುದಿನ ಕೇಸರಿ ಬಣ್ಣ ನಿಮ್ಮ ಪಕ್ಷದ್ದು ಎನ್ನುತ್ತಿದ್ದ ಸಿದ್ದರಾಮಯ್ಯನವರೇ ಇಂದು ಕೇಸರಿ ಬಣ್ಣದ ಹೂ ಇಟ್ಟುಕೊಂಡು ಬಂದಿದ್ದಾರೆ ಎಂದರು.

ನಂತರ ಸದಸ್ಯರನ್ನು ಸಮಾಧಾನಪಡಿಸಿ ಬಜೆಟ್‌ ಮಂಡನೆಗೆ ಸಭಾಧ್ಯಕ್ಷರು ಅವಕಾಶ ಕಲ್ಪಿಸಿದರು.

ಹಿಂದಿನ ಲೇಖನಅಸ್ಸಾಂನ ಮಾರುಕಟ್ಟೆಯೊಂದರಲ್ಲಿ ಅಗ್ನಿ ಅವಘಡ: 150 ಅಂಗಡಿಗಳು ಅಗ್ನಿಗಾಹುತಿ
ಮುಂದಿನ ಲೇಖನಬಜೆಟ್: ವಕೀಲರಿಗೆ ಆರೋಗ್ಯ ಸೌಲಭ್ಯ ಯೋಜನೆ ರೂಪಿಸಲು ಸರ್ಕಾರದಿಂದ ಶೇ. 50ರಷ್ಟು ಮೊತ್ತ ನೀಡಿಕೆಗೆ ಅನುಮೋದನೆ