ಬೆಂಗಳೂರು : 14 ವರ್ಷಗಳಿಗೊಮ್ಮೆ ಬರುವ ವಿಶೇಷ ಶನಿ ಅಮಾವಾಸ್ಯೆ ಹಿನ್ನೆಲೆ ಶನಿಮಹಾತ್ಮ, ಗಾಳಿ ಆಂಜನೇಯ ದೇವಾಲಯದಲ್ಲಿ ಭಕ್ತರು ವಿಶೇಷ ಪೂಜೆ ಮಾಡಿಸುತ್ತಿದ್ದಾರೆ. 14 ವರ್ಷಗಳಿಗೆ ಒಮ್ಮೆ ಬರುವ ಈ ವಿಶೇಷ ಅಮಾವಾಸ್ಯೆ ಶನೇಶ್ವರ ಜಯಂತಿಯಂದೇ ಬಂದಿರುವುದು ಇನ್ನಷ್ಟು ವಿಶೇಷವಾಗಿದೆ.
ಈ ದಿನ ಶನಿ ಮಹಾತ್ಮನಿಗೆ ಅತ್ಯಂತ ಶ್ರೇಷ್ಠ ಎನ್ನುವ ನಂಬಿಕೆಯಿದೆ. ಈ ಹಿನ್ನೆಲೆ ಶನಿ ದೋಷ ನಿವಾರಣೆ ಮತ್ತು ಶನಿಯ ಅನುಗ್ರಹ ಪಡೆಯಲು ಭಕ್ತರು ಮುಂದಾಗಿದ್ದಾರೆ. ಶನಿದೇವನನ್ನು ಪೂಜಿಸುವುದರಿಂದ ಏಳೂವರೆ ಶನಿ, ಅಷ್ಟಮ ಶನಿ ದೋಷಗಳು ಮತ್ತು ಜೀವನದ ಕಷ್ಟಗಳು ಕರಗುವ ನಂಬಿಕೆಯಿದೆ. ಹೀಗಾಗಿ ನವರಂಗ್ ಸರ್ಕಲ್ ಬಳಿಯ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ಭಕ್ತರು ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ಶನೇಶ್ವರನ ದರ್ಶನ ಪಡೆಯುತ್ತಿದ್ದಾರೆ.
ಇಂದು ಬೆಳಗ್ಗೆ 5 ಗಂಟೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗುತ್ತಿದ್ದು, ಶನಿದೋಷ ನಿವಾರಣೆ ಪೂಜೆ ಸೇರಿದಂತೆ ಹರಕೆ ಪೂಜೆಗಳು ನಡೆಯುತ್ತಿದೆ. ನಗರದ ಗಾಳಿ ಆಂಜನೇಯ ದೇವಾಲಯದಲ್ಲೂ ಭಕ್ತರ ದಂಡೇ ಆಗಮಿಸುತ್ತಿದ್ದು, ಬೆಳಗ್ಗೆಯಿಂದಲೇ ದೇವರ ದರ್ಶನ ಪಡೆಯುತ್ತಿದ್ದಾರೆ. ಅಮಾವಾಸ್ಯೆ ವಿಶೇಷ ದಿನ ಹಿನ್ನೆಲೆ, ದೇವಾಲಯದಲ್ಲಿ ಬೆಳಗ್ಗೆ 5 ಗಂಟೆಯಿಂದಲೇ ಪೂಜೆ ಕೈಂಕಾರ್ಯಗಳು ಆರಂಭವಾಗಿವೆ.

















