ನವದೆಹಲಿ : ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಸಂಬಂಧಿಸಿದ ಕಾನೂನು ಹೋರಾಟದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಸುಪ್ರೀಂ ಕೋರ್ಟ್ ಟಿ.ಡಿ.ರಾಜೇಗೌಡ ಅವರ ಶಾಸಕ ಸ್ಥಾನವನ್ನು ಮರುಸ್ಥಾಪಿಸಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಂಜಯ್ ಕುಮಾರ್ ನೇತೃತ್ವದ ದ್ವಿ ಸದಸ್ಯ ಪೀಠ, ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡಲು ನಾವು ಬಿಡುವುದಿಲ್ಲ ಎಂದು ಅಭಿಪ್ರಾಯಪಟ್ಟು ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತು.
ರಾಜೇಗೌಡ ಪರ ಹಿರಿಯ ವಕೀಲರಾದ ಕಪಿಲ್ ಸಿಬಲ್ ಹೈಕೋರ್ಟ್ ಆದೇಶದ ಮಾನ್ಯತೆಯನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ಜೀವರಾಜ್ ಪರ ವಕೀಲರು ಜೀವರಾಜ್ ಈಗಾಗಲೇ ವಿಧಾನಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ವೇಳೆ ಸುಪ್ರೀಂ ಕೋರ್ಟ್, ಪ್ರಜಾಪ್ರಭುತ್ವವನ್ನು ಈ ರೀತಿಯಲ್ಲಿ ಹೈಜಾಕ್ ಮಾಡಲು ಸಾಧ್ಯವಿಲ್ಲ ಎಂದು ಕಟುವಾಗಿ ಅಭಿಪ್ರಾಯಪಟ್ಟಿತು.
ವಿಚಾರಣೆ ಬಳಿಕ ಕರ್ನಾಟಕ ಸರ್ಕಾರ, ಚುನಾವಣಾ ಆಯೋಗ ಸೇರಿದಂತೆ ಇತರ ಪ್ರತಿವಾದಿಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಅಲ್ಲದೇ ಹೈಕೋರ್ಟ್ನ 2026ರ ಏಪ್ರಿಲ್ 6 ರಂದು ನೀಡಿದ್ದ ಆದೇಶದ ಆಧಾರದಲ್ಲಿ ಕೈಗೊಳ್ಳಲಾದ ಎಲ್ಲ ಕ್ರಮಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಸೂಚಿಸಿತು. 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಟಿ.ಡಿ.ರಾಜೇಗೌಡ ಅವರು ಕೇವಲ 201 ಮತಗಳ ಅಂತರದಲ್ಲಿ ಡಿ.ಎನ್.ಜೀವರಾಜ್ ಅವರನ್ನು ಸೋಲಿಸಿದ್ದರು. ಆದರೆ, ಚುನಾವಣಾ ಫಲಿತಾಂಶ ಪ್ರಶ್ನಿಸಿ ಜೀವರಾಜ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಿಸಿದ್ದ ಕರ್ನಾಟಕ ಹೈಕೋರ್ಟ್, ಅಂಚೆ ಮತಪತ್ರಗಳ ಮರುಪರಿಶೀಲನೆ ಮತ್ತು ಮರು ಎಣಿಕೆಗೆ ಆದೇಶಿಸಿತ್ತು.
ಮರು ಎಣಿಕೆಯಲ್ಲಿ ಅಚ್ಚರಿಯ ರೀತಿಯಲ್ಲಿ ಫಲಿತಾಂಶ ಬದಲಾಗಿತ್ತು. ಜೀವರಾಜ್ ಅವರ ಅಂಚೆ ಮತಗಳು 692 ರಿಂದ 690ಕ್ಕೆ ಇಳಿದಿದ್ದರೆ, ರಾಜೇಗೌಡ ಅವರ ಮತಗಳು 569ರಿಂದ 314ಕ್ಕೆ ಕುಸಿದಿದ್ದವು. ಇದರಿಂದ ರಾಜೇಗೌಡರಿಗೆ 255 ಮತಗಳ ನಷ್ಟ ಉಂಟಾಗಿ, ಅಂತಿಮವಾಗಿ ಜೀವರಾಜ್ ಅವರನ್ನು ವಿಜೇತರಾಗಿ ಘೋಷಿಸಲಾಗಿತ್ತು. ಪ್ರತಿನಿಧಿತ್ವ ಕಾಯ್ದೆ-1951ರ ಸೆಕ್ಷನ್ 66 ಅಡಿಯಲ್ಲಿ ರಿಟರ್ನಿಂಗ್ ಅಧಿಕಾರಿ ಜೀವರಾಜ್ ಅವರನ್ನು ಅಧಿಕೃತವಾಗಿ ವಿಜೇತರಾಗಿ ಘೋಷಿಸಿದ್ದರಿಂದ, ಸುಮಾರು ಮೂರು ವರ್ಷಗಳ ಬಳಿಕ ರಾಜೇಗೌಡ ಶಾಸಕ ಸ್ಥಾನ ಕಳೆದುಕೊಂಡಿದ್ದರು.
















