ಬೆಂಗಳೂರು : ಮಗಳ ಜೀವನಕ್ಕಾಗಿ ತಂದೆ ಕಿಡ್ನಿ ಮಾರಾಟಕ್ಕೆ ಮುಂದಾದ ಕರುಣಾಜನಕ ಕಥೆ ಬೆಂಗಳೂರಿನಲ್ಲಿ ನಡೆದಿದೆ. ಈ ವಿಚಾರ ತಿಳಿದ ತಕ್ಷಣ ಸ್ಪಂದಿಸಿದ ಶಾಸಕ ಸುರೇಶ್ ಕುಮಾರ್ ನೊಂದ ಕುಟುಂಬಕ್ಕೆ ನೆರವಾಗಿ ಮಾನವೀಯತೆ ಮರೆದಿದ್ದಾರೆ.
ಕುಸುಮಾ ಎಂಬ ಮಹಿಳೆ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದರು. ಕಾಲು ಕಳೆದುಕೊಂಡಿದ್ದರೂ ಇತ್ತೀಚೆಗೆ ಪರೀಕ್ಷೆ ಬರೆದಿದ್ದರು. ಅನಾರೋಗ್ಯದಿಂದ ವೈಟ್ಫೀಲ್ಡ್ನ ಎಸ್ಟರ್ ಆಸ್ಪತ್ರೆಗೆ ದಾಖಲಾಗಿದ್ದರು. 4 ದಿನಕ್ಕೆ ಕುಸುಮಾ ಚಿಕಿತ್ಸೆಗೆ ಐದೂವರೆ ಲಕ್ಷ ರೂಪಾಯಿ ವೆಚ್ಚವಾಗಿತ್ತು. ಮಗಳ ಚಿಕಿತ್ಸೆಗೆ ಹೆಚ್ಚಿನ ಹಣ ಹೊಂದಿಸಲು ಸಾಧ್ಯವಾಗದೇ ತಂದೆ ಕಿಡ್ನಿ ಮಾರಾಟಕ್ಕೆ ಮುಂದಾಗಿದ್ದರು.

ನೊಂದ ಕುಟುಂಬದ ಬಗ್ಗೆ ವಿಷಯ ತಿಳಿದು ಶಾಸಕ ಸುರೇಶ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದರು. ವೈದ್ಯರು ಮತ್ತು ಆಸ್ಪತ್ರೆ ಆಡಳಿತ ಮಂಡಳಿಯ ಜೊತೆ ಮುಕ್ತ ಮಾತುಕತೆ ನಡೆಸಿದರು. ಈ ವಿಚಾರವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರ ಗಮನಕ್ಕೆ ತಂದರು.
ಕೊನೆಗೆ ಕುಸುಮಾ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆಸ್ಪತ್ರೆ ವೆಚ್ಚ ಭರಿಸಲು ಅನುವು ಮಾಡಿಕೊಡಲಾಯಿತು. ಇತ್ತ ಚಿಕಿತ್ಸೆ ಹಣ ಸ್ವೀಕರಿಸದಿರಲು ಆಸ್ಪತ್ರೆ ಆಡಳಿತ ಮಂಡಳಿ ನಿರ್ಧರಿಸಿತು. ಆಸ್ಪತ್ರೆ ವತಿಯಿಂದಲೇ ಉಚಿತವಾಗಿ ಚಿಕಿತ್ಸೆ ನೀಡುವುದಾಗಿ ಆಸ್ಪತ್ರೆ ಮಂಡಳಿ ತಿಳಿಸಿತು. ಇನ್ನೆರಡು ದಿನಗಳಲ್ಲಿ ರೋಗಿಯ ಆರೋಗ್ಯ ಸರಿಪಡಿಸುವುದಾಗಿ ಭರವಸೆ ನೀಡಿತು. ಹೀಗಾಗಿ, ಎಲ್ಲರಿಗೂ ಶಾಸಕ ಸುರೇಶ್ ಕುಮಾರ್ ಧನ್ಯವಾದ ತಿಳಿಸಿದರು.















