ಮೈಸೂರು: ಹಿಂದಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಾಗೂ ಹಾಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಲ್ಲಿ ಮೂಡಿದ್ದ ಅನುಮಾನಗಳು ಇನ್ನೂ ನಿವಾರಣೆಯಾಗಿಲ್ಲ. ಇದೀಗ ಪ್ರಾಧಿಕಾರದ ಕಚೇರಿಯಲ್ಲಿ ಮಧ್ಯರಾತ್ರಿವರೆಗೂ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮಧ್ಯವರ್ತಿಗಳು ಕಡತಗಳೊಂದಿಗೆ ಓಡಾಡುತ್ತಿದ್ದ ದೃಶ್ಯಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳು ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಕಾರ್ಯನಿರ್ವಹಿಸುತ್ತವೆ. ಆದರೆ, ಗುರುವಾರ ರಾತ್ರಿ ಸುಮಾರು 10.30ರವರೆಗೂ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಪ್ರಧಾನ ಕಚೇರಿಯ ಬಹುತೇಕ ಎಲ್ಲಾ ವಿಭಾಗಗಳು ತೆರೆದಿದ್ದವು ಎನ್ನಲಾಗಿದೆ.

ಮಾಹಿತಿಗಳ ಪ್ರಕಾರ, ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕೈಯಲ್ಲಿ ಕಡತಗಳನ್ನು ಹಿಡಿದು ಅವುಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಕೆಲವರು ದಾಖಲೆಗಳನ್ನು ಪರಿಶೀಲಿಸುತ್ತಿದ್ದರೆ, ಇನ್ನೂ ಕೆಲವರು ಸಂಬಂಧಪಟ್ಟ ವಿಭಾಗದ ಅಧಿಕಾರಿಗಳಿಂದ ಸಹಿ ಮತ್ತು ಅನುಮೋದನೆ ಪಡೆಯುವ ಕಾರ್ಯದಲ್ಲಿ ನಿರತರಾಗಿದ್ದರು.
ಇದರ ಜೊತೆಗೆ, ಕಚೇರಿ ಆವರಣದಲ್ಲಿ ಕೆಲ ಮಧ್ಯವರ್ತಿಗಳೂ ಓಡಾಡುತ್ತಿದ್ದು, ಕಡತಗಳ ಪ್ರಕ್ರಿಯೆಗೆ ಸಹಕಾರ ನೀಡುತ್ತಿರುವಂತೆ ಕಂಡುಬಂದಿದೆ ಎಂಬ ಮಾತುಗಳು ಕೇಳಿಬಂದಿವೆ.

ಅಟೆಂಡರ್ಗಳ ಅನುಪಸ್ಥಿತಿಯಲ್ಲೂ ಅಧಿಕಾರಿಗಳು ಹಾಗೂ ಸಿಬ್ಬಂದಿಯೇ ವಿವಿಧ ದಾಖಲೆಗಳು ಮತ್ತು ಕಡತಗಳನ್ನು ಹುಡುಕುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ. ದಾಖಲೆಗಳನ್ನು ಸರಿಪಡಿಸುವುದು, ಸಂಬಂಧಪಟ್ಟ ವಿಭಾಗಗಳಿಂದ ಸಹಿ-ಸೀಲ್ ಪಡೆಯುವುದು ಹಾಗೂ ಕಂಪ್ಯೂಟರ್ ವ್ಯವಸ್ಥೆಯಲ್ಲಿ ವಿವರಗಳನ್ನು ಪರಿಶೀಲಿಸುವ ಕಾರ್ಯಗಳು ತಡರಾತ್ರಿವರೆಗೂ ನಡೆದಿವೆ ಎಂದು ತಿಳಿದುಬಂದಿದೆ.
ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟಕ್ಕೆ ಖಾತೆ ಹಂಚಿಕೆ ನಡೆದ ದಿನವೇ ಈ ಬೆಳವಣಿಗೆ ನಡೆದಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ನಗರಾಭಿವೃದ್ಧಿ ಇಲಾಖೆಯ ಜವಾಬ್ದಾರಿ ಡಾ. ಯತೀಂದ್ರ ಅವರಿಗೆ ನೀಡಲಾಗಿದೆ ಎಂಬ ಬೆಳವಣಿಗೆಯ ಬೆನ್ನಲ್ಲೇ ಎಂಡಿಎ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ಮತ್ತು ಸಿದ್ಧತೆ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಪ್ರಾಧಿಕಾರದ ಆಯುಕ್ತ ಕೆ.ಆರ್. ರಕ್ಷಿತ್ ಹಾಗೂ ನಗರ ಯೋಜನಾ ವಿಭಾಗದ ಅಧಿಕಾರಿಗಳ ಕಚೇರಿ ಕೊಠಡಿಗಳು ತೆರೆದಿದ್ದರೂ, ಅವರು ತಮ್ಮ ಆಸನಗಳಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ. ಕಾರ್ಯದರ್ಶಿಯೂ ಸ್ಥಳದಲ್ಲಿ ಕಾಣಿಸದಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಪ್ರಶ್ನೆ ಕೇಳಿದಾಗ ಯಾವುದೇ ಸ್ಪಷ್ಟನೆ ನೀಡದೇ ಕೆಲವರು ಸ್ಥಳದಿಂದ ತೆರಳಿದ್ದಾರೆ ಎನ್ನಲಾಗಿದೆ.
ಸಾವಿರಾರು ನಿವೇಶನಗಳ ಹಂಚಿಕೆ ಅಕ್ರಮ ಪ್ರಕರಣ ಬೆಳಕಿಗೆ ಬಂದ ಬಳಿಕ ಮುಡಾ ಹಾಗೂ ನಂತರದ ಎಂಡಿಎ ಕಾರ್ಯವೈಖರಿ ಕುರಿತು ಸಾರ್ವಜನಿಕರಲ್ಲಿ ನಂಬಿಕೆ ಕುಸಿದಿದೆ. ಬದಲಿ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಇಡಿ, ಸಿಐಡಿ, ಲೋಕಾಯುಕ್ತ ಹಾಗೂ ನ್ಯಾಯಮೂರ್ತಿ ದೇಸಾಯಿ ಆಯೋಗದ ತನಿಖೆಗಳಲ್ಲಿ ಹಲವು ಅಂಶಗಳು ಬಹಿರಂಗವಾಗಿವೆ.
ಈ ಹಿನ್ನೆಲೆಯಲ್ಲಿ, ಎಂಡಿಎ ಕಚೇರಿಯಲ್ಲಿ ಮಧ್ಯರಾತ್ರಿವರೆಗೂ ನಡೆದ ಕಡತಗಳ ಚಟುವಟಿಕೆ ಮತ್ತೆ ಸಾರ್ವಜನಿಕರ ಗಮನ ಸೆಳೆದಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಆಗ್ರಹಗಳು ಕೇಳಿಬರುತ್ತಿವೆ.
















