ಮನೆ ಕಾನೂನು ವಾರ್ಡ್ ಪುನರ್ ವಿಂಗಡಣೆ: ತಮ್ಮದೇ ಸರ್ಕಾರದ ನಿರ್ಧಾರದ ವಿರುದ್ಧ ಹೈಕೋರ್ಟ್ ಕದ ತಟ್ಟಿದ ಶಾಸಕ ಸತೀಶ್...

ವಾರ್ಡ್ ಪುನರ್ ವಿಂಗಡಣೆ: ತಮ್ಮದೇ ಸರ್ಕಾರದ ನಿರ್ಧಾರದ ವಿರುದ್ಧ ಹೈಕೋರ್ಟ್ ಕದ ತಟ್ಟಿದ ಶಾಸಕ ಸತೀಶ್ ರೆಡ್ಡಿ

0

ರಾಜಕೀಯ ಕೆಸರೆರಚಾಟ ಹಾಗೂ ಕಾನೂನು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ಗಳ ಪುನರ್ ವಿಂಗಡಣೆ ವಿಚಾರವು ಶುಕ್ರವಾರ ವಿಶಿಷ್ಟ ವಿದ್ಯಮಾನಕ್ಕೆ ನಾಂದಿ ಹಾಡಿದೆ. ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹುಳಿಮಾವು ವಾರ್ಡ್ ಪುನರ್ ವಿಂಗಡಣೆಯನ್ನು ಪ್ರಶ್ನಿಸಿ ಬಿಜೆಪಿಯ ಮುಖ್ಯ ಸಚೇತಕ ಹಾಗೂ ಶಾಸಕ ಎಂ ಸತೀಶ್ ರೆಡ್ಡಿ ಅವರು ಕರ್ನಾಟಕ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿರುವುದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಇರಿಸುಮುರಿಸಿನ ಸ್ಥಿತಿ ನಿರ್ಮಿಸಿದೆ.

ವಾರ್ಡ್ಗಳ ಪುನರ್ ವಿಂಗಡಣೆ ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ಶುಕ್ರವಾರ ನಡೆಸಿತು.

ಒಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ವಾರ್ಡ್ ಪ್ರದೇಶಗಳು ಆ ಕ್ಷೇತ್ರದೊಳಗೆ ಮಾತ್ರ ವಿಭಜನೆಯಾಗಬೇಕು. ಯಾವುದೇ ವಾರ್ಡ್ನ ಪ್ರದೇಶಗಳು ಎರಡು ವಿಭಿನ್ನ ವಿಧಾನಸಭಾ ಕ್ಷೇತ್ರದಲ್ಲಿ ಹಂಚಿಕೆಯಾಗಬಾರದು ಎಂಬುದಾಗಿ ಬಿಬಿಎಂಪಿ ಕಾಯಿದೆಯ ಸೆಕ್ಷನ್ 7 ಹೇಳುತ್ತದೆ. ಆದರೆ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹುಳಿಮಾವು ವಾರ್ಡ್ನ ಅಕ್ಷಯ ಗಾರ್ಡನ್, ಸತ್ಯಸಾಯಿ, ಶಿರಡಿ ಸಾಯಿ ನಗರ, ವಿಐಪಿ ಲೇಔಟ್ ಮತ್ತಿತರೆ ಪ್ರದೇಶಗಳು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೂ ಸೇರಿವೆ. ಆದ್ದರಿಂದ ವಾರ್ಡ್ ಮರು ವಿಂಗಡಣೆಯ ಅಧಿಸೂಚನೆ ರದ್ದುಪಡಿಸಬೇಕು. ಹುಳಿಮಾವು ವಾರ್ಡ್ನ ಪುನರ್ ವಿಂಗಡಣೆಯನ್ನು ಮರು ಪರಿಶೀಲಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಸತೀಶ್ ರೆಡ್ಡಿ ಮನವಿ ಮಾಡಿದ್ದಾರೆ.

ಎಜಿ ಸಮರ್ಥನೆ

“ಬೆಂಗಳೂರಿನ ಒಟ್ಟು ಜನಸಂಖ್ಯೆ ಪ್ರಕಾರ ಪ್ರತಿ ವಾರ್ಡ್ಗೆ ಸರಾಸರಿ 34 ಸಾವಿರ ಜನಸಂಖ್ಯೆ ಇರಬೇಕಿತ್ತು. ಆದರೆ, ಕೆಲವು ಕಡೆ 31 ಸಾವಿರ ಇದೆ. ಇನ್ನೂ ಕೆಲವು ಕಡೆ 39 ಸಾವಿರ ಇದೆ. ವಿರೋಧ ಪಕ್ಷಗಳಿರುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ವಾರ್ಡ್ನ ಸರಾಸರಿ ಜನಸಂಖ್ಯೆ ಹೆಚ್ಚಿಸಿದ್ದಲ್ಲದೆ, ಒಂದು ವಾರ್ಡ್ ಕಡಿತ ಮಾಡಲಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ವಾರ್ಡ್ಮರುವಿಂಗಡಣೆಗೆ ಮಾನದಂಡಗಳೇನು? ಕೆಲವು ಕಡೆ ಯಾಕೆ ಇಷ್ಟೊಂದು ಅಂತರವಿದೆ. ಜನಸಂಖ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಏನು ದಾಖಲೆ ಇದೆ. ಇದಕ್ಕೆ ಸರ್ಕಾರದ ವಿವರಣೆ ಏನು” ಎಂದು ಪೀಠವು ಪ್ರಶ್ನಿಸಿತು.

ರಾಜ್ಯ ಸರ್ಕಾರದ ನಿರ್ಧಾರವನ್ನು ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು “ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ವಿಸ್ತೀರ್ಣ ಹಾಗೂ ಜನಸಂಖ್ಯೆ ಹೆಚ್ಚಳದ ಆಧಾರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 243 ವಾರ್ಡ್ಗಳನ್ನು ರಚಿಸಲಾಗಿದೆ” ಎಂದು ರಾಜ್ಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿದರು.

ಮುಂದುವರಿದು, “2011ರ ಜನಗಣತಿ ಆಧರಿಸಿ ಪ್ರತಿ ವಾರ್ಡ್ಗೆ ಜನಸಂಖ್ಯೆ ನಿಗದಿಪಡಿಸಲಾಗಿದೆ. ಅಲ್ಲದೇ ವಿಧಾನಸಭಾ ಕ್ಷೇತ್ರದ ಭೌಗೋಳಿಕ ವಿಸ್ತೀರ್ಣ, ಕ್ಷೇತ್ರದ ಜನಸಂಖ್ಯೆ ಬೆಳವಣಿಗೆ ಆಧರಿಸಿ ವಾರ್ಡ್ಗಳನ್ನು ರಚಿಸಲಾಗಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ವಾರ್ಡ್ ವಿಂಗಡಣೆಯಲ್ಲಿ ಶೇ.10ರಷ್ಟು ಜನಸಂಖ್ಯೆ ಏರಿಳಿತದ ಅನುಪಾತ ಅನುಸರಿಸಲಾಗಿದೆ. ಅದರಂತೆ, 34 ಸಾವಿರದಿಂದ 39 ಸಾವಿರ ಜನಸಂಖ್ಯೆಯ ಆಧಾರದಲ್ಲಿ ವಾರ್ಡ್ಗಳನ್ನು ವಿಂಗಡಣೆ ಮಾಡಲಾಗಿದೆ. ಕೆಲವು ಕಡೆ ಭೌಗೋಳಿಕ ವಿಸ್ತೀರ್ಣ ಹೆಚ್ಚಿದ್ದು, ಜನಸಂಖ್ಯೆ ಕಡಿಮೆ ಇದೆ. ಇನ್ನೂ ಕೆಲವಡೆ ಭೌಗೋಳಿಕ ವಿಸ್ತೀರ್ಣ ದೊಡ್ಡದಾಗಿದ್ದು, ಜನಸಂಖ್ಯೆ ಕಡಿಮೆ. ವಾರ್ಡ್ಗಳ ಮರುವಿಂಗಡಣೆಗೆ 2011ರ ಜನಸಂಖ್ಯೆಯನ್ನು ಆಧರಿಸಲಾಗಿದೆ” ಎಂದರು.

ವಾರ್ಡ್ ಪುನರ್ ವಿಂಗಡಣೆ ವೇಳೆ ಜನಸಂಖ್ಯೆ ಪ್ರಮಾಣವನ್ನು ಪರಿಗಣಿಸುವಲ್ಲಿ ಸರ್ಕಾರ ತಾರತಮ್ಯ ಎಸಗಿದೆ. ಈ ಮೂಲಕ ಬಿಬಿಎಂಪಿ ಕಾಯಿದೆ-2020ರ ಸೆಕ್ಷನ್ 7 ಅನ್ನು ಉಲ್ಲಂಘಿಸಲಾಗಿದೆ. ವಾರ್ಡ್ ಪುನರ್ ವಿಂಗಡಣೆಯಲ್ಲಿ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂಬ ಅರ್ಜಿದಾರರ ಆರೋಪವನ್ನು ನಾವದಗಿ ನಿರಾಕರಿಸಿದರು.

“ಇಲ್ಲಿ ಪಕ್ಷ ಅಥವಾ ರಾಜಕೀಯ ಎಂಬುದು ಅಪ್ರಸ್ತುತ. ಅರ್ಜಿದಾರರು ಆರೋಪಿಸಿರುವಂತೆ ಅವರ ಪ್ರತಿಪಕ್ಷದ ಶಾಸಕರು ಪ್ರತಿನಿಧಿಸುತ್ತಿರುವ ಚಾಮರಾಜಪೇಟೆ, ಶಿವಾಜಿನಗರ ಮತ್ತು ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಡ್ಗಳ ಸಂಖ್ಯೆ ಕಡಿಮೆಯಾಗಿದ್ದರೆ ಅದೇ ಪಕ್ಷದವರು ಪ್ರತಿನಿಧಿಸುತ್ತಿರುವ ಬ್ಯಾಟರಾಯನಪುರ, ಬಿಟಿಎಂ ಲೇಔಟ್, ಸರ್ವಜ್ಞ ನಗರ, ದಾಸರಹಳ್ಳಿ ಕ್ಷೇತ್ರಗಳಲ್ಲಿ ವಾರ್ಡ್ಗಳ ಸಂಖ್ಯೆ ಹೆಚ್ಚಾಗಿದೆ” ಎಂದು ಪೀಠಕ್ಕೆ ವಿವರಿಸಿದರು.

ರಾಜ್ಯ ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “ಆಯೋಗ ಈಗಾಗಲೇ ತನ್ನ ನಿಲುವನ್ನು ನ್ಯಾಯಾಲಯಕ್ಕೆ ಸ್ಪಷ್ಟವಾಗಿ ತಿಳಿಸಿದೆ. ಈ ವಿಚಾರದಲ್ಲಿ ಅರ್ಜಿದಾರರ ಪರ ವಕೀಲರು ಮತ್ತೆ ಮತ್ತೆ ತಕರಾರು ತೆಗೆಯುವುದು ಸಮಂಜಸವಲ್ಲ. ಈಗ ನಿಗದಿಪಡಿಸಲಾಗಿರುವ ಪುನರ್ ವಿಂಗಡಣೆಯ ಅನುಸಾರವೇ ಚುನಾವಣೆ ನಡೆಸಬೇಕು. ಏನಾದರೂ ಆಕ್ಷೇಪಣೆ ಅಥವಾ ಲೋಪದೋಷಗಳು ಇದ್ದಲ್ಲಿ ಅದನ್ನು ಮುಂದಿನ ಚುನಾವಣೆಯಲ್ಲಿ ಸರಿಪಡಿಸಿಕೊಳ್ಳಬಹುದು. ಚುನಾಯಿತ ಪ್ರತಿನಿಧಿಗಳಿಲ್ಲದೆ ಪಾಲಿಕೆಯನ್ನು ಕಾರ್ಯಾಂಗದ ಕೈಯಲ್ಲಿ ನಡೆಸಿಕೊಂಡು ಹೋಗುವುದು ಸೂಕ್ತವಲ್ಲ” ಎಂದರು.

ಸುದೀರ್ಘ ವಾದ-ಪ್ರತಿವಾದ ಆಲಿಸಿದ ಪೀಠವು ವಿಚಾರಣೆಯನ್ನು ಸೆಪ್ಟೆಂಬರ್ 13ಕ್ಕೆ ಮುಂದೂಡಿತು.

ಹಿಂದಿನ ಲೇಖನಬಿಜೆಪಿ ಜನಸ್ಪಂದನ: ಕಾರ್ಯಕ್ರಮದ ಸ್ಥಳದಲ್ಲಿ ಪ್ರತಿಭಟಿಸಲು ಯತ್ನಿಸಿದವರ ಬಂಧನ
ಮುಂದಿನ ಲೇಖನಬೀದಿ ನಾಯಿಗಳು ಜನರ ಮೇಲೆ ದಾಳಿ ಮಾಡಿದರೆ ಚಿಕಿತ್ಸಾ ವೆಚ್ಚವನ್ನು ಆಹಾರ ನೀಡುವವರೇ ಭರಿಸಬೇಕು: ಸುಪ್ರೀಂಕೋರ್ಟ್