ಮನೆ ರಾಜ್ಯ ಪಠ್ಯದಲ್ಲಿ ಡಾ. ರಾಜ್ ಕುರಿತ ಲೇಖನ ಕೈಬಿಡುವಂತೆ ಶಿಕ್ಷಣ ಸಚಿವರಿಗೆ ದೊಡ್ಡಹುಲ್ಲೂರು ರೊಕ್ಕೋಜಿರಾವ್ ಪತ್ರ

ಪಠ್ಯದಲ್ಲಿ ಡಾ. ರಾಜ್ ಕುರಿತ ಲೇಖನ ಕೈಬಿಡುವಂತೆ ಶಿಕ್ಷಣ ಸಚಿವರಿಗೆ ದೊಡ್ಡಹುಲ್ಲೂರು ರೊಕ್ಕೋಜಿರಾವ್ ಪತ್ರ

0

ಕನ್ನಡದ ವರನಟ ಡಾ. ರಾಜ್‌ ಕುಮಾರ್‌ ರವರ ಬಗ್ಗೆ ದೊಡ್ಡಹುಲ್ಲೂರು ರೊಕ್ಕೋಜಿರಾವ್‌ ರವರು ಬರೆದಿರುವ ಬರಹವನ್ನು ಪಠ್ಯ ಪುಠ್ಯಪುಸ್ತಕದಲ್ಲಿ  ನೀಡಬಾರದೆಂದು ಹೇಳಿ ತಮ್ಮ  ಪಠ್ಯಕ್ಕೆ ನೀಡಿದ್ದ ಅನುಮತಿಯನ್ನು ವಾಪಸ್‌ ಪಡೆದಿದ್ದಾರೆ.

ಈ ಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರಿಗೆ ಪತ್ರ ಬರೆದಿರುವ ಅವರು ಕನ್ನಡ ದ್ರೋಹದ ಮಾತನಾಡಿರುವ ವ್ಯಕ್ತಿಯ ಮರುಪರಿಷ್ಕರಣೆ ಪಠ್ಯದಲ್ಲಿ ಡಾ. ರಾಜಕುಮಾರ್‌ ಪಠ್ಯ ಸೇರಿಸಲು ಒಪ್ಪುವುದು ಡಾ. ರಾಜಕುಮಾರ್‌ ಅವರಿಗೆ ಅವಮಾನ ಮಾಡಿದಂತೆ. ನಾನು ಡಾ. ರಾಜಕುಮಾರ್‌ ಅವರ ಬಗ್ಗೆ ಬರೆದ ಲೇಖನವನ್ನು ಪ್ರೋ. ಬರಗೂರು ರಾಮಚಂದ್ರಪ್ಪನವರ ನೇತೃತ್ವದ ಪಠ್ಯ ಪರಿಷ್ಕರಣೆ ಸಂದರ್ಭದಲ್ಲಿ 6 ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪುಸ್ತಕಕ್ಕೆ ಸೇರಿಸಲು ಒಪ್ಪಿಗೆ ನೀಡಿದ್ದೆ. ಈಗ ರೋಹಿತ್‌ ಚಕ್ರತೀರ್ಥ ಎಂಬುವವರ ಅಧ್ಯಕ್ಷತೆಯಲ್ಲಿ ನಡೆದ ಮರುಪರಿಷ್ಕರಣೆ ಬಗ್ಗೆ ದೊಡ್ಡ ವಿವಾದ ಎದ್ದಿದೆ ಎಂದು ಅವರು ಹೇಳಿದ್ದಾರೆ.

ರೋಹಿತ್ ಚಕ್ರತೀರ್ಥರು ನಾಡಧ್ವಜವನ್ನು ಒಳ ಉಡುಪಿಗೆ ಹೋಲಿಸಿದ್ದಾರೆ. ಕುವೆಂಪು ಅವರನ್ನು ಕೀಳಾಗಿ ಕಂಡಿದ್ದಾರೆ. ಕನ್ನಡ ಭಾಷೆಯನ್ನು ತನ್ನ ಮೇಲೆ ಹೇರಲಾಗಿದೆ ಎಂದು ಕನ್ನಡ ವಿರೋಧಿ ಮಾತನಾಡಿದ್ದಾರೆ” ಎಂದು ರುಕ್ಕೋಜಿರಾವ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಅಪೂರ್ವ ಕನ್ನಡ ಪ್ರೇಮಿಯಾದ, ನಾಡು ನುಡಿಗಾಗಿ ಹೋರಾಡಿದ ಡಾ. ರಾಜಕುಮಾರ್‌ ಅವರ ಬಗ್ಗೆ ಬರೆದ ತನ್ನ ಲೇಖನವನ್ನು, ಕನ್ನಡ ದ್ರೋಹದ ಮಾತನಾಡಿರುವ ವ್ಯಕ್ತಿಯ ಮರು ಪರಿಷ್ಕರಣೆ ಪಠ್ಯದಲ್ಲಿ ಬಳಸಲು ನಾನು ಒಪ್ಪುವುದಿಲ್ಲ. ಇಂಥವರ ನೇತೃತ್ವದ ಮರು ಪರಿಷ್ಕರಣೆ ಪಠ್ಯದಲ್ಲಿ ಡಾ. ರಾಜಕುಮಾರ್‌ ಸೇರಿಸಲು ಒಪ್ಪುವುದು ಡಾ. ರಾಜಕುಮಾರ್‌ ಅವರಿಗೆ ಅವಮಾನ ಮಾಡಿದಂತೆ ಎಂಬ ಕಾರಣವನ್ನು ತಿಳಿಸುತ್ತಾ ನನ್ನ ಲೇಖನವನ್ನು ಬಳಸಬಾರದು ಎಂದು ವಿನಂತಿಸುತ್ತೇನೆ” ಎಂದು ರುಕ್ಕೋಜಿರಾವ್ ಪತ್ರದಲ್ಲಿ ಹೇಳಿದ್ದಾರೆ.