ಹುಬ್ಬಳ್ಳಿ: ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜಟಾಪಟಿ ಪ್ರಕರಣ ವಿಚಾರವನ್ನು ಪರಿಷತ್ ವಿಷಯ ನೀತಿ ನಿರೂಪಣಾ ಸಮಿತಿಗೆ ಕಳಿಸಲಾಗಿದೆ. ಇನ್ನೂ ಅಲ್ಲಿಂದ ಯಾವುದೇ ವರದಿಯ ಮಾಹಿತಿ ಬಂದಿಲ್ಲ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇನೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಪಕ್ಷಗಳ 8 ಸದಸ್ಯರನ್ನು ಒಳಗೊಂಡ ಸಮಿತಿ ಇದಾಗಿದೆ. ಕಮಿಟಿಯು ಶೀಘ್ರದಲ್ಲೇ ಸಭೆ ಕರೆಯುವ ನಿರೀಕ್ಷೆ ಎಂದು ತಿಳಿಸಿದರು.
ಏನೇ ಆಗಲಿ ಪ್ರಕರಣವನ್ನು ಬಗೆಹರಿಸುವ ಜವಾಬ್ದಾರಿ ನನ್ನ ಮೇಲಿದ್ದು, ಶೀಘ್ರದಲ್ಲೇ ಬಗೆಹರಿಯುವ ನಿರೀಕ್ಷೆ ಇದೆ. ಮಾರ್ಚ್ನಲ್ಲಿ ನಡೆಯುವ ಅಧಿವೇಶನದಲ್ಲಿ ಪ್ರಕರಣವನ್ನು ಸುಖಾಂತ್ಯಗೊಳಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಪ್ರಕರಣ ಸಂಬಂಧ ಅತಿ ಹೆಚ್ಚು ಎಂದರೆ ಒಂದು ಅವಧಿಯ ಅಧಿವೇಶನದಿಂದ ಅವರನ್ನು ಹೊರಹಾಕಬಹುದು. ಪ್ರಕರಣ ಸಂಬಂಧ ಮಾತನಾಡಲು ಇತ್ತೀಚೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಎರಡು ಬಾರಿ ಕರೆ ಮಾಡಿದ್ದೆ. ಆದರೆ, ಅವರು ಫೋನ್ ರಿಸೀವ್ ಮಾಡಿಲ್ಲ ಎಂದ ಹೊರಟ್ಟಿ, ತಾವು ಕರೆ ಮಾಡಿದ್ದನ್ನು ಮಾಧ್ಯಮಗಳಿಗೆ ತೋರಿಸಿದರು.
ಕೆಲವೊಮ್ಮೆ ಎಮೋಷನಲ್ ಇದ್ದಾಗ ಇಂತಹ ಘಟನೆಗಳು ನಡೆಯುವ ಸಾಧ್ಯತೆ ಇರುತ್ತದೆ. ಸದನದಲ್ಲಿ ಆಗಿದ್ದರೆ ನಾನು ಅದನ್ನು ಅಲ್ಲಿಯೇ ಬಗೆಹರಿಸುತ್ತಿದ್ದೆ. ಏನೇ ಇರಲಿ ಈ ಪ್ರಕರಣವನ್ನು ಕೊನೆಗಾಣಿಸಬೇಕು. ಯಾಕೆಂದರೆ ಇದರ ಇತಿಹಾಸ ಹಾಗೆಯೇ ಉಳಿಯಲಿದೆ. ಪ್ರಕರಣವು ಒಳ್ಳೆಯ ರೀತಿಯಲ್ಲಿ ಮುಗಿಯುತ್ತದೆ ಎಂದು ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.














