ನವದೆಹಲಿ: ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬಿಆರ್ಟಿ ಹುಲಿ ಅಭಯಾರಣ್ಯದಲ್ಲಿ ಹುಲಿಗಳ ಸಂತತಿ ಹೆಚ್ಚಳವಾಗಲು ಸೋಲಿಗ ಬುಡಕಟ್ಟು ಜನಾಂಗದವರ ಕೊಡುಗೆ ಗಣನೀಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ತಿಂಗಳ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಮುಂದಿನ ತಿಂಗಳ ಆರಂಭದಲ್ಲಿ ವಿಶ್ವ ವನ್ಯಜೀವಿ ದಿನವನ್ನು ಆಚರಿಸಲು ಕರೆ ನೀಡಿದ್ದಾರೆ.
ವನ್ಯಜೀವಿ ರಕ್ಷಣೆಗೆ ಸಂಬಂಧಿಸಿದ ಕೆಲಸಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ನನ್ನ ಬುಡಕಟ್ಟು ಸಹೋದರ ಸಹೋದರಿಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಕರ್ನಾಟಕದ ಬಿಆರ್ಟಿ ಹುಲಿ ಅಭಯಾರಣ್ಯದಲ್ಲಿ ಹುಲಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇದರ ಹಿಂದೆ ಸೋಲಿಗ ಜನಾಂಗದ ಸಹೋದರರ ಕೊಡುಗೆ ಇದೆ’’ ಎಂದು ಪ್ರಧಾನಿ ಹೇಳಿದ್ದಾರೆ.
ಹುಲಿಯ ಸಂತತಿ ಹೆಚ್ಚಳಕ್ಕೆ ಸೋಲಿಗ ಜನಾಂಗದವರ ಕೊಡುಗೆಗೆ ಮನ್ನಣೆ ಸಲ್ಲಬೇಕು. ಅವರು ಹುಲಿಯನ್ನು ಪೂಜಿಸುವ ಜನಾಂಗದವರಾಗಿದ್ದಾರೆ. ಅವರ ಕಾರಣದಿಂದಾಗಿ, ಆ ಪ್ರದೇಶದಲ್ಲಿ ಬಹುತೇಕ ಮನುಷ್ಯ-ಪ್ರಾಣಿ ಸಂಘರ್ಷವಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ
570 ಚದರ ಕಿ.ಮೀ ಅರಣ್ಯ ಪ್ರದೇಶದಲ್ಲಿ ಹರಡಿರುವ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ (BRT) ಹುಲಿ ಅಭಯಾರಣ್ಯ ಪ್ರದೇಶವು 40 ಕ್ಕೂ ಹೆಚ್ಚು ಹುಲಿಗಳು ಮತ್ತು 280 ಕ್ಕೂ ಹೆಚ್ಚು ಜಾತಿಯ ಅಪರೂಪದ ಪಕ್ಷಿಗಳಿಗೆ ನೆಲೆಯಾಗಿದೆ. ಸೋಲಿಗ ಬುಡಕಟ್ಟು ಕರ್ನಾಟಕದ ಚಾಮರಾಜನಗರದ ಬಿಳಿಗಿರಿ ರಂಗನ ಬೆಟ್ಟಗಳಲ್ಲಿ ಮತ್ತು ತಮಿಳುನಾಡಿನ ಈರೋಡ್ ಜಿಲ್ಲೆಯ ಕೆಲವು ಭಾಗಗಳಲ್ಲಿ ವಾಸಿಸುವ ಸ್ಥಳೀಯ ಬುಡಕಟ್ಟು ಜನಾಂಗವಾಗಿದೆ.
ಕಾಡು ಪ್ರಾಣಿಗಳಿಗೆ ನಮ್ಮ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಸ್ಥಾನವಿದೆ. ಅನೇಕ ಪ್ರಾಣಿಗಳನ್ನು ನಮ್ಮ ದೇವರು ಮತ್ತು ದೇವತೆಗಳ ವಾಹನಗಳಾಗಿಯೂ ಗಮನಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ.














