ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಹಾಸ್ ಶೆಟ್ಟಿ ಪ್ರಕರಣ ಇಟ್ಟುಕೊಂಡು ಬಿಜೆಪಿ ಅವರು ಬೆಂಕಿ ಹಚ್ಚೋಕೆ ಮುಂದಾಗಿದ್ದರು. ಅವರ ಪ್ರಯೋಗ ಯಶಸ್ವಿಯಾಗಲಿಲ್ಲ ಎಂದು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದರು. ಮೇ 16ರಂದು ಸಿಎಂ ಸಿದ್ದರಾಮಯ್ಯ ಮಂಗಳೂರು ಪ್ರವಾಸ ಹಿನ್ನಲೆಯಲ್ಲಿ ವಿಧಾನಸೌಧದಲ್ಲಿ ಸ್ಪೀಕರ್ ಖಾದರ್ ಮತ್ತು ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆ ಬಗ್ಗೆ ಮಾತಾಡಿದ ಅವರು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ. ಕಾನೂನು ಸುವ್ಯವಸ್ಥೆ ಬಗ್ಗೆ ಈಗಾಗಲೇ ಚರ್ಚೆ ಆಗಿದೆ. ಮಂಗಳೂರು ಪೊಲೀಸರು ಅಲರ್ಟ್ ಇದ್ದಾರೆ ಎಂದರು.
ಪ್ರಚೋದನಕಾರಿ ಭಾಷಣ ಮಾಡುವವರನ್ನು, ಸೋಶಿಯಲ್ ಮೀಡಿಯಾ ಪೋಸ್ಟ್ಗಳನ್ನು ಪೊಲೀಸರು ಮಾನಿಟರ್ ಮಾಡ್ತಿದ್ದಾರೆ. ಮಂಗಳೂರು ಪೊಲೀಸ್ ನಿಷ್ಪಕ್ಷಪಾತವಾಗಿ ಕೆಲಸ ಮಾಡ್ತಿದ್ದಾರೆ. ನಮ್ಮ ಸರ್ಕಾರದ ಬಗ್ಗೆ ಅಲ್ಲಿನ ಜನರಿಗೆ ನಂಬಿಕೆ ಇದೆ. ಇಂತಹ ಘಟನೆಗಳು ಆಗದಂತೆ ಸೌಹಾರ್ದತೆ, ಶಾಂತಿ ಕಾಪಾಡುವ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಇಂತಹ ಘಟನೆ ಆದಾಗ ರಾಜಕೀಯವಾಗಿ ಬಳಸಿಕೊಳ್ಳೋ ಸಂಘಟನೆಗಳು ಮಂಗಳೂರಿನಲ್ಲಿ ಇವೆ. ಧರ್ಮ ಆಧಾರಿತ ಸಂಘಟನೆಗಳು ಲಾಭಕ್ಕಾಗಿ ಬಳಸಿಕೊಳ್ತಾರೆ. ಸುಹಾಸ್ ಕೇಸ್ನಲ್ಲಿ ಹೀಗೆ ಆಯ್ತು. ಗಲಭೆ ಮಾಡಿ, ಬೆಂಕಿ ಹಚ್ಚಿಸೋ ಕೆಲಸ ಮಾಡೋಕೆ ಪ್ರಮುಖ ಪಕ್ಷದ ಮುಖಂಡರು ಪ್ರಚೋದನಾ ಭಾಷಣ ಮಾಡಿದ್ದರು. ಆದರೆ ನಮ್ಮ ಪೊಲೀಸ್ ಹಾಗೂ ಸರ್ಕಾರದ ಕ್ರಮಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಬಿಜೆಪಿ ಅವರು ಮಂಗಳೂರಿನಲ್ಲಿ ಬೆಂಕಿ ಹಚ್ಚೋಕೆ ಮುಂದಾಗಿದ್ರು. ಬಿಜೆಪಿ ಅವರ ಪ್ರಯೋಗ ವಿಫಲವಾಯ್ತು. ಬಿಜೆಪಿ ಅವರ ಬೇಳೆ ಬೇಯಲು ನಾವು ಬಿಡಲಿಲ್ಲ. ಅವರ ಉದ್ದೇಶ ಈಡೇರಲಿಲ್ಲ. ಹಾಗೆಯೇ ಅವರ ಪ್ರಯೋಗ ವಿಫಲವಾಯಿತು ಎಂದು ವಾಗ್ದಾಳಿ ನಡೆಸಿದರು.
ಸೌಹಾರ್ದ ವಾತಾವರಣ ತರಲು ಎಲ್ಲರೂ ಪ್ರಯತ್ನಪಡೋಣ. ನಮ್ಮ ರಾಜಕೀಯ ಬೇರೆ. ಆದರೆ ಇಂತಹ ಕೋಮು ಘಟನೆಗಳು ಆಗದಂತೆ ನಾವೆಲ್ಲ ಕೈ ಜೋಡಿಸಬೇಕು ಎಂದು ಬಿಜೆಪಿ ನಾಯಕರಿಗೆ ಕಿವಿಮಾತು ಹೇಳಿದರು.














