ಮನೆ ಅಪರಾಧ ಮಂಗಳೂರಿನಲ್ಲಿ ಮತ್ತೆ ಲಾಂಗು-ಮಚ್ಚು ದಾಳಿ: ಉಮರ್ ಫಾರೂಕ್‌ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಯತ್ನ

ಮಂಗಳೂರಿನಲ್ಲಿ ಮತ್ತೆ ಲಾಂಗು-ಮಚ್ಚು ದಾಳಿ: ಉಮರ್ ಫಾರೂಕ್‌ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಯತ್ನ

0

ಮಂಗಳೂರು : ಕೋಮು ಸಂಘರ್ಷವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದ್ದು, ಈ ಹಿನ್ನಲೆಯಲ್ಲಿ ನಿನ್ನೆಯಷ್ಟೇ ‘ಸ್ಪೆಷಲ್ ಆ್ಯಕ್ಷನ್ ಫೋರ್ಸ್​​’ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್​ ಚಾಲನೆ ನೀಡಿದ್ದಾರೆ. ಈ ಮಧ್ಯೆ ನಗರದಲ್ಲಿ ಮತ್ತೆ ಲಾಂಗು, ಮಚ್ಚುಗಳು ಝಳಪಿಸಿದ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ಉಮರ್ ಫಾರೂಕ್ ಎಂಬ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಲು ಯತ್ನಿಸಿರುವ ಪ್ರಕರಣ ಜೂನ್ 11ರಂದು ನಡೆದಿದ್ದು, ತಡವಾಗಿ ಬೆಳಕಿಗೆ‌ ಬಂದಿದೆ.

ಬಂಟ್ವಾಳ ತಾಲ್ಲೂಕಿನ ಸಜೀಪಮುನ್ನೂರಿನ ನಿವಾಸಿ ಉಮರ್ ಫಾರೂಕ್ ಅವರು ಜೀಪ್‌ನಲ್ಲಿ ದೇರಳಕಟ್ಟೆ ಕಡೆಗೆ ತೆರಳುತ್ತಿದ್ದಾಗ, ದೇರಾಜೆ ಬಸ್ ನಿಲ್ದಾಣದ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತಲ್ವಾರ್‌ನಿಂದ ದಾಳಿ ಮಾಡಲು ಯತ್ನಿಸಿದರು. ತಲ್ವಾರ್ ತಗುಲಿ ಅವರ ವಾಹನದ ಸೈಡ್ ಮಿರರ್ ಗೆ ಹಾನಿಯಾಗಿದೆ. ಅದೃಷ್ಟವಶಾತ್ ಉಮರ್ ಫಾರೂಕ್‌ಗೇನು ಗಾಯಗಳಾಗಿಲ್ಲ.

ಈ ಬಗ್ಗೆ ಉಮರ್ ಫಾರೂಕ್ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 109, 324(4) ಮತ್ತು 3(5)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ ಮತ್ತು ನಿಖರ ಮಾಹಿತಿಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.