ಮನೆ ರಾಷ್ಟ್ರೀಯ ಅಸ್ಸಾಂ ಪ್ರವಾಹ: ಹಲವೆಡೆ ಜಲಾವೃತ; 8 ಮಂದಿ ಸಾವು

ಅಸ್ಸಾಂ ಪ್ರವಾಹ: ಹಲವೆಡೆ ಜಲಾವೃತ; 8 ಮಂದಿ ಸಾವು

0

ಗುವಾಹಟಿ (Guwahati): ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಿಸಿದ್ದು, ಗುವಾಹಟಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ವಿವಿಧ ಪ್ರದೇಶಗಳು ಜಲಾವೃತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‌

ಬ್ರಹ್ಮಪುತ್ರ ಸೇರಿದಂತೆ ಅದರ ಉಪನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪ್ರವಾಹದಿಂದಾಗಿ ಇದುವರೆಗೆ 8 ಮಂದಿ ಸಾವಿಗೀಡಾಗಿದ್ದಾರೆ.

ಪ್ರವಾಹದಿಂದಾಗಿ ಸುಮಾರು 31 ಲಕ್ಷ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇವರಲ್ಲಿ 1. 56 ಲಕ್ಷ ಮಂದಿ ರಾಜ್ಯದ 514 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ, ಪೊಲೀಸರು ಮತ್ತು ಎಎಸ್‌ಡಿಎಂಎ ಸ್ವಯಂಸೇವಕರನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಇದುವರೆಗೆ 20,983 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವರದಿ ಹೇಳಿದೆ.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ಇತ್ತೀಚಿನ ವರದಿಗಳ ಪ್ರಕಾರ, ಕಳೆದ ಆರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ವಿವಿಧೆಡೆ ಪ್ರವಾಹ ಮತ್ತು ಭೂಕುಸಿತವುಂಟಾಗಿದೆ. ಕಳೆದ 24 ಗಂಟೆಗಳಲ್ಲಿ 118 ಕಂದಾಯ ವಲಯಗಳು ಮತ್ತು 4,291 ಗ್ರಾಮಗಳನ್ನು ಒಳಗೊಂಡ 32 ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿವೆ.

ಮಳೆಯಿಂದಾಗಿ ಗುವಾಹಟಿಯಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಬ್ರಹ್ಮಪುತ್ರ ನದಿಯಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದ್ದು, ಗುವಾಹಟಿಯಲ್ಲಿ ನದಿಯ ನೀರಿನ ಮಟ್ಟವು ಅದರ ಉಪನದಿ ಭಾರಲುಗಿಂತ ಗಣನೀಯವಾಗಿ ಏರಿದೆ. ಹಾಗಾಗಿ, ಭಾರಲು ನದಿಯ ಸ್ಲೂಸ್ ಗೇಟ್‌ಗಳನ್ನು ಮುಚ್ಚಲಾಗಿದೆ ಎಂದು ಗುವಾಹಟಿ ಮಹಾನಗರ ಪಾಲಿಕೆ ಆಯುಕ್ತ ದೇವಶಿಶ್ ಶರ್ಮಾ ತಿಳಿಸಿದ್ದಾರೆ.