ನವದೆಹಲಿ : 1980ರ ದಶಕದಲ್ಲಿ ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಪಾಕಿಸ್ತಾನದ ಕಹುತಾ ಪರಮಾಣು ಸ್ಥಾವರದ ಮೇಲೆ ದಾಳಿ ನಡೆಸಲು ಯೋಜಿಸಿದ್ದೆವು. ಆದ್ರೆ ಇಂದಿರಾ ಗಾಂಧಿ ಅವರು ದಾಳಿಗೆ ಅನುಮತಿ ಕೊಡಲಿಲ್ಲ ಎಂದು ಮಾಜಿ ಸಿಐಎ ಅಧಿಕಾರಿ ರಿಚರ್ಡ್ ಬಾರ್ಲೋ ತಿಳಿಸಿದ್ದಾರೆ.
1980ರ ದಶಕದಲ್ಲಿ ಪಾಕಿಸ್ತಾನದ ರಹಸ್ಯ ಪರಮಾಣು ಚಟುವಟಿಕೆಗಳ ಸಮಯದಲ್ಲಿ ಗುಪ್ತಚರ ಸಂಸ್ಥೆಯ ಭಾಗವಾಗಿದ್ದ ರಿಚರ್ಡ್ ಬಾರ್ಲೋ ಮಾತನಾಡಿ, ಪಾಕಿಸ್ತಾನದ ಪರಮಾಣು ಸೌಲಭ್ಯದ ಮೇಲೆ ಭಾರತ-ಇಸ್ರೇಲ್ ಜಂಟಿಯಾಗಿ ದಾಳಿ ನಡೆಸಲು ಪ್ಲ್ಯಾನ್ ಮಾಡಲಾಗಿತ್ತು. ಆದರೆ ಇಂದಿರಾ ಗಾಂಧಿ ಅವರು ಅನುಮೋದಿಸಲಿಲ್ಲ. ಇಂದಿರಾ ಅವರು ಅನುಮೋದಿಸದೇ ಇರುವುದು ನಾಚಿಕೆಗೇಡಿನ ಸಂಗತಿ. ಒಂದು ವೇಳೆ ದಾಳಿ ಮಾಡಿದ್ದರೆ, ಬಹಳಷ್ಟು ಸಮಸ್ಯೆಗಳನ್ನ ಪರಿಹರಿಸುತ್ತಿತ್ತು ಎಂದು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷರು, 1989ರ ವರೆಗೂ ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರಗಳನ್ನ ಹೊಂದಿಲ್ಲ ಎಂದು ಹೇಳಿಕೊಂಡೇ ಬರುತ್ತಿದ್ದರು. ಅಲ್ಲದೇ ಎಫ್-16 ಯುದ್ಧ ವಿಮಾನಗಳಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸಬಹುದೆಂದು ತಿಳಿದಿದ್ದರೂ ಅಮೆರಿಕ ಪೂರೈಕೆ ಮಾಡುತ್ತಾ ಬಂದಿತು ಎಂದೂ ಸಹ ಆರೋಪಿಸಿದ್ದಾರೆ.
1974 ರಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆದ ಭಾರತದ ಸಾಮರ್ಥ್ಯಕ್ಕೆ ಕೌಂಟರ್ ಆಗಿ ಪಾಕಿಸ್ತಾನದ ಕಾರ್ಯಕ್ರಮ ರೂಪಿಸಲು ಉದ್ದೇಶಿಸಲಾಗಿತ್ತು. ಭಾರತವನ್ನು ಎದುರಿಸುವುದು ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದು ಪಾಕ್ನ ಪ್ರಾಥಮಿಕ ಉದ್ದೇಶವಾಗಿತ್ತು. ಆದರೆ, ಪಾಕ್ನ ಪರಮಾಣು ಬಾಂಬ್ನ ಪಿತಾಮಹ ಅಬ್ದುಲ್ ಖದೀರ್ ಖಾನ್ ನೇತೃತ್ವದಲ್ಲಿ, ಇರಾನ್ ಸೇರಿದಂತೆ ಇತರ ಇಸ್ಲಾಮಿಕ್ ರಾಷ್ಟ್ರಗಳಿಗೆ ತಂತ್ರಜ್ಞಾನವನ್ನು ವಿಸ್ತರಿಸಲು ಮತ್ತು ವೇಗಗೊಳಿಸಲು ಉದ್ದೇಶಿಸಲಾಯಿತು. ಮುಂದೆ ಈ ಪರಿಕಲ್ಪನೆ ‘ಇಸ್ಲಾಮಿಕ್ ಬಾಂಬ್’ ಆಗಿ ವಿಕಸನಗೊಂಡಿತು.
ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವ ಪ್ರಾಥಮಿಕ ಉದ್ದೇಶ ಭಾರತವನ್ನು ಎದುರಿಸುವುದಾಗಿತ್ತು. ಆದರೆ, ಎಕ್ಯೂ ಖಾನ್ ಮತ್ತು ಜನರಲ್ಗಳ ದೃಷ್ಟಿಕೋನದಿಂದ ‘ಅದು ಕೇವಲ ಪಾಕಿಸ್ತಾನಿ ಬಾಂಬ್ ಅಲ್ಲ; ಅದು ಇಸ್ಲಾಮಿಕ್ ಬಾಂಬ್, ಮುಸ್ಲಿಂ ಬಾಂಬ್ ಎಂಬುದು ಸ್ಪಷ್ಟವಾಗಿತ್ತು’ ಎಂದಿದ್ದಾರೆ.














