ಮನೆ ಅಪರಾಧ ನಟೋರಿಯಸ್ ರೌಡಿ ಅರುಣ್  ಕೊಲೆಗೆ ಕಾರಣಗಳೇನು ?: ಈ ಸುದ್ದಿ ಓದಿ

ನಟೋರಿಯಸ್ ರೌಡಿ ಅರುಣ್  ಕೊಲೆಗೆ ಕಾರಣಗಳೇನು ?: ಈ ಸುದ್ದಿ ಓದಿ

0

ಮಂಡ್ಯ(Mandya): ಮಂಡ್ಯ: ಸೋಮವಾರ ಕೆ.ಆರ್.ಪೇಟೆ ಪಟ್ಟಣದಲ್ಲಿ ಹತ್ಯೆಯಾದ ರೌಡಿ ಅರುಣ್ ಅಲಿಯಾಸ್ ಹಲ್ಲು ಅರುಣ್  ಕೊಲೆಗೆ ಹಳೆ ವೈಷಮ್ಯವೇ ಕಾರಣ ಎಂಬ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಕೆಆರ್ ಪೇಟೆ ಪಟ್ಟಣದ ಅರುಣ್ ಕೊಲೆ, ಬೆದರಿಕೆ, ಹತ್ತಾ ವಸೂಲಿ, ಕಿಡ್ನಾಪ್ ಹೀಗೆ ಹಲವು ಕೇಸ್‌ಗಳಲ್ಲಿ ಜೈಲುವಾಸ ಅನುಭವಿಸಿದ್ದ. 3 ವರ್ಷಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ. ಈಗ ಈತನೇ ಕೊಲೆಯಾಗಿದ್ದು, ಹಳೆ ವೈಷಮ್ಯದ ಕಾರಣಕ್ಕಾಗಿ ಕೆ.ಆರ್.ಪೇಟೆಯ ಮತ್ತೊಬ್ಬ ರೌಡಿ ಶೀಟರ್ ಯತೀಶ್ ಹಾಗೂ ಗ್ಯಾಂಗ್ ಅರುಣ್ ನನ್ನು ಕೊಲೆಗೈದಿದೆ ಎಂಬ ಅನುಮಾನ ವ್ಯಕ್ತಪಡಿಸಲಾಗಿದೆ.

ಹತ್ಯೆ ನಡೆದಿದ್ದು ಹೇಗೆ?

ಮೈಸೂರಿನಲ್ಲಿ ವಾಸವಿದ್ದ ಅರುಣ್ ಪ್ರತಿ ಸೋಮವಾರ ಕೆಆರ್ ಪೇಟೆಯ ಈಶ್ವರ ದೇವಾಲಯಕ್ಕೆ ಆಗಮಿಸಿ ಅರ್ಧಗಂಟೆಗೂ ಹೆಚ್ಚು ಕಾಲ ದೇವಾಲಯದಲ್ಲಿರುತ್ತಿದ್ದ ಎನ್ನಲಾಗಿದೆ. ನಿನ್ನೆ (ಸೋಮವಾರ) ಕೂಡ ಸಂಬಂಧಿ ಪ್ರವೀಣ್ ಬೈಕಿನಲ್ಲಿ ದೇವಾಲಯಕ್ಕೆ ಡ್ರಾಪ್ ಪಡೆದಿದ್ದ ಅರುಣ್ ದೇವಾಲಯ ಪ್ರವೇಶ ಮಾಡುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ 8-10 ಜನ ಹಂತಕರು ಕಣ್ಣಿಗೆ ಪೆಪ್ಪರ್ ಸ್ಪೇ ಹಾಕಿ, ಮಾರಕಾಸ್ತ್ಗಗಳಿಂದ ಹತ್ಯೆಗೈದು ಪರಾರಿಯಾಗಿದ್ದಾರೆ.

ಸ್ನೇಹಿತರಾಗಿದ್ದವರು, ಬದ್ಧ ವೈರಿಗಳಾದರು

ಒಂದು ಕಾಲದಲ್ಲಿ ಸ್ನೇಹಿತರಾಗಿದ್ದ ಅರುಣ್ ಮತ್ತು ಯತೀಶ್ 2002ರಲ್ಲಿಯೇ ಕ್ರಿಮಿನಲ್ ಕೆಲಸಗಳನ್ನು ಒಟ್ಟಾಗಿ ಮಾಡುತ್ತಿದ್ದರು. ಆದರೆ ಇಬ್ಬರ ನಡುವೆ ಜಗಳ ಉಂಟಾಗಿ 2009 ರಲ್ಲಿ ಮೊದಲ ಬಾರಿ ಅರುಣ್ ಮೇಲೆ ಯತೀಶ್ ಗ್ಯಾಂಗ್ ಅಟ್ಯಾಕ್ ಮಾಡಿತ್ತು.  ಅಂದು ಕೂಡ ಮಾರಕಾಸ್ತ್ರಗಳಿಂದ ಆತನ ಮೇಲೆ ಹಲ್ಲೆ ನಡೆಸಿದ್ದರು. ಆಗ ಸಾವು ಬದುಕಿನ ನಡುವೆ ಹೋರಾಡಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದ. ಆದರೆ ಘಟನೆ ನಂತರ ಅರುಣ್ ಯತೀಶ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದ ಎನ್ನಲಾಗಿದೆ.

ಅರುಣ್ ನ ಪ್ರತಿಕಾರ

2012ರಲ್ಲಿ ತನ್ನ ಮೇಲೆ ಹಲ್ಲೆ ನಡೆಸಿದ್ದ ಯತೀಶ್‌ನ ಬಲಗೈ ಬಂಟ ಭಾಸ್ಕರ್‌ನನ್ನು ಹತ್ಯೆ ಮಾಡುವ ಮೂಲಕ ಅರುಣ್ ಪ್ರತಿಕಾರ ತೀರಿಸಿಕೊಂಡಿದ್ದ. ಆದರೆ ಇಬ್ಬರು ರೌಡಿಗಳ ನಡುವೆ ರಾಜಿ ನಡೆದು ಕೇಸ್‌ಗಳು ಖುಲಾಸೆಯಾಗಿತ್ತು. ಆದರೆ ಇಬ್ಬರ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಗಲಾಟೆ ಮುಂದುವರಿದಿದೆ.

2016ರಲ್ಲಿ ಯತೀಶ್ ತಮ್ಮ ರಾಜೇಶ್‌ನನ್ನು ಹುಟ್ಟುಹಬ್ಬದಂದೇ ಹತ್ಯೆ ಮಾಡಿದ್ದ ಅರುಣ್ ಹಗೆ ತೀರಿಸಿಕೊಂಡಿದ್ದು, ಅಲ್ಲದೇ ಯತೀಶ್ ನ ದ್ವೇಷಕ್ಕೆ ಗುರಿಯಾಗಿದ್ದನು. ಸದರಿ ಕೇಸ್ ನಲ್ಲಿ ಅರುಣ್ ಗೆ ಜೈಲು ಶಿಕ್ಷೆಯಾಗಿತ್ತು.

ನಂಜನಗೂಡು ಜೈಲಿನಲ್ಲಿದ್ದಾಗಲೇ ಜೈಲರ್ ಸಹಾಯ ಪಡೆದು ಹೊರಬಂದಿದ್ದ ಅರುಣ್ ಕೆಆರ್ ಪೇಟೆಯ ಚಿನ್ನದ ವ್ಯಾಪಾರಿ ಗೋಪಾಲ್‌ನನ್ನು ಅಪಹರಿಸಿ, 1 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ. ಈ ಪ್ರಕರಣ ಕೂಡ ಸಾಬೀತಾಗಿ ಅರುಣ್‌ಗೆ ಸಹಾಯ ಮಾಡಿದ್ದ ಜೈಲರ್ ಗೆ ಕೂಡ ಶಿಕ್ಷೆಯಾಗಿತ್ತು.

ಈ ಎಲ್ಲಾ ಕಾರಣಗಳಿಂದಾಗಿ ಪ್ರತಿಕಾರದ ಜ್ವಾಲೆಗೆ ಅರುಣ್ ನ ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಆರೋಪಿಗಳ ಬಂಧನಕ್ಕೆ ಕೆಆರ್ ಪೇಟೆ ಪಟ್ಟಣ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ . . .ಕೆಎಸ್ ಆರ್ ಟಿಸಿ ಬಸ್- ಟೆಂಪೋ ಮುಖಾಮುಖಿ ಢಿಕ್ಕಿ: ಓರ್ವ ಸಾವು