ಮನೆ ರಾಜ್ಯ ದಲಿತರಿಗೆ ಭೂಮಿಯ ಹಕ್ಕನ್ನು ಮೊದಲು ನೀಡಿದ್ದು ಟಿಪ್ಪು: ಬಸವಲಿಂಗ ಸ್ವಾಮೀಜಿ

ದಲಿತರಿಗೆ ಭೂಮಿಯ ಹಕ್ಕನ್ನು ಮೊದಲು ನೀಡಿದ್ದು ಟಿಪ್ಪು: ಬಸವಲಿಂಗ ಸ್ವಾಮೀಜಿ

0

ಮೈಸೂರು(Mysuru): ದಲಿತರಿಗೆ ಭೂಮಿಯ ಹಕ್ಕನ್ನು ಮೊದಲು ನೀಡಿದ್ದು ಟಿಪ್ಪು ಸುಲ್ತಾನ್‌ ಎಂದು ಬಸವಲಿಂಗ ಸ್ವಾಮೀಜಿ ಹೇಳಿದರು.

ಅಶೋಕರಸ್ತೆಯ ಮಿಲಾದ್‌ ಭಾಗ್‌ನಲ್ಲಿ ಹಜ್ರತ್‌ ಟಿಪ್ಪು ಸುಲ್ತಾನ್‌ ಶಹೀದ್ ವೆಲ್‌ಫೇರ್ ಮತ್ತು ಉರುಸ್‌ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಟಿಪ್ಪು ಸುಲ್ತಾನ್‌ ಅವರ 230ನೇ ಗಂಧ ಉರುಸ್‌ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಟಿಪ್ಪು ಸುಲ್ತಾನ್ ಆಡಳಿತಾವಧಿಯಲ್ಲಿ ರಾಜ್ಯವಷ್ಟೇ ಅಲ್ಲದೇ ಆಳ್ವಿಕೆ ನಡೆಸಿದ ಕೇರಳ, ತಮಿಳುನಾಡು, ಆಂಧ್ರದಲ್ಲಿ ಎಲ್ಲ ದಲಿತರು ಭೂಮಿಯ ಮಾಲೀಕತ್ವವನ್ನು ಪಡೆದರು ಎಂದು ಹೇಳಿದರು.

ಟಿಪ್ಪು ಕರ್ನಾಟಕದ ಕೀರ್ತಿಯನ್ನು ಬೆಳಗಿದವರು. ನಂಜನಗೂಡಿಗೆ ಶ್ರೀಕಂಠೇಶ್ವರ ದೇಗುಲಕ್ಕೆ ಪಚ್ಚೆ ಲಿಂಗ ನೀಡಿದರು. ಶೃಂಗೇರಿಯನ್ನು ಮರಾಠರು ಲೂಟಿ ಮಾಡಿದಾಗ, ಅಲ್ಲಿನ ಸ್ವಾಮೀಜಿಗೆ ರಕ್ಷಣೆ ಕೊಟ್ಟದ್ದಲ್ಲದೆ, ಧನ ಕನಕ ನೀಡಿದರು. ಸೌಹಾರ್ದ ‍ಪರಂಪರೆಯನ್ನು ಕಟ್ಟಿದ ಅವರನ್ನು ಕನ್ನಡಿಗರು ನಿತ್ಯ ಸ್ಮರಿಸಬೇಕು ಎಂದು ಹೇಳಿದರು.

ಚಿಕ್ಕ ಸಂಸ್ಥಾನವಾಗಿದ್ದ ಮೈಸೂರನ್ನು ವಿಸ್ತರಿಸಿದರು. ಕೃಷ್ಣಾ ನದಿಯಿಂದ ತಮಿಳುನಾಡಿನ ದಿಂಡಿಗಲ್‌ವರೆಗೆ ಸಾಮ್ರಾಜ್ಯ ಹಬ್ಬಿತ್ತು. ಮೈಸೂರು ಅರಸರ ಗೌರವಕ್ಕೆ ಅವರೆಂದೂ ಚ್ಯುತಿ ತರಲಿಲ್ಲ. ಆದರೆ, ಕೆಲ ಮೂರ್ಖರು ಅಜ್ಞಾನದಿಂದ ವಿರೋಧಿಸುತ್ತಿದ್ದಾರೆ. ಸರಿಯಾಗಿ ಇತಿಹಾಸ ಓದಿಕೊಳ್ಳಬೇಕು  ಎಂದರು.

ಟಿಪ್ಪು ಕನ್ನಡ ವಿರೋಧಿಯಲ್ಲ. ಶೃಂಗೇರಿ ಮಠದೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಿದ್ದ ‍ಪತ್ರಗಳು ಲಭ್ಯವಿವೆ. ಅವುಗಳನ್ನು ಓದಿದರೆ ಟಿಪ್ಪು ಕನ್ನಡದ ಸುಪುತ್ರ ಎಂಬುದು ಅರಿವಾಗುತ್ತದೆ. ಅಬ್ದುಲ್‌ ಕಲಾಂ ಅವರು ತಮ್ಮ ಪುಸ್ತಕಗಳಲ್ಲಿ ಟಿಪ್ಪು ಹಾಗೂ ರಾಕೆಟ್‌ ತಂತ್ರಜ್ಞಾನವನ್ನು ಕೊಂಡಾಡಿದ್ದಾರೆ ಎಂದು ತಿಳಿಸಿದರು.