ಬೆಳಗಾವಿ : ದರೋಡೆ, ಕಳ್ಳತನ ಸೇರಿ ಅಕ್ರಮಗಳಲ್ಲಿ ಭಾಗಿಯಾಗೋ ಪೊಲೀಸರನ್ನು ಕೆಲಸದಿಂದಲೇ ವಜಾ ಮಾಡುವ ಕೆಲಸ ಸರ್ಕಾರ ಮಾಡ್ತಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಶರವಣ ಪ್ರಶ್ನೆ ಕೇಳಿದ್ರು. ರಾಜ್ಯದಲ್ಲಿ ದರೋಡೆ, ಮನೆಗಳ್ಳತನ, ಹಗಲು ದರೋಡೆಗಳು ಜಾಸ್ತಿ ಆಗ್ತಿದೆ. ಪೊಲೀಸ್ ಅಧಿಕಾರಗಳೇ ಕಳ್ಳತನದಲ್ಲಿ ಭಾಗಿಯಾಗ್ತಾ ಇದ್ದಾರೆ. ಬೇಲಿಯೇ ಎದ್ದು ಹೊಲ ಮೆಯ್ಯುತ್ತಿದೆ. ಜನರು ಇದನ್ನ ಮಾತಾಡ್ತಾ ಇದ್ದಾರೆ.
ಪೊಲೀಸರ ಮೇಲೆ ನಂಬಿಕೆ ಕಳೆದು ಹೋಗ್ತಿದೆ. ಕಳ್ಳತನ, ದರೋಡೆ ಕೇಸ್ನಲ್ಲಿ ಪೊಲೀಸರು ಭಾಗಿಯಾಗ್ತಾ ಇದ್ದಾರೆ. ರಕ್ಷಕರೇ ಭಕ್ಷಕರು ಆಗ್ತಿದ್ದಾರೆ. ಇಂತಹ ಅಕ್ರಮದಲ್ಲಿ ಭಾಗಿಯಾಗೋರನ್ನು ಕೆಲಸದಿಂದ ವಜಾ ಮಾಡಿ. ಇದಕ್ಕೆ ಕಾನೂನು ತರಬೇಕು ಅಂತ ಒತ್ತಾಯ ಮಾಡಿದರು.
ಇದಕ್ಕೆ ಸಚಿವ ಪರಮೇಶ್ವರ್ ಉತ್ತರ ನೀಡಿ, 37 ಜಿಲ್ಲೆಗಳಲ್ಲಿ 88 ಜನ ಪೊಲೀಸರು ಅಕ್ರಮಗಳಲ್ಲಿ ಭಾಗಿಯಾದ ಕೇಸ್ ಇದೆ. ನಮ್ಮ ಸರ್ಕಾರ ಬಂದಾಗಿನಿಂದ ಮಾತ್ರ ಇದು ಆಗಿಲ್ಲ. 1.6 ಲಕ್ಷ ಸಿಬ್ಬಂದಿ ಇದ್ದಾರೆ ಎಲ್ಲರನ್ನು ಒಂದೇ ತಕ್ಕಡಿಯಾಗಿ ತೂಗೋಕೆ ಆಗೊಲ್ಲ. ಎಲ್ಲರೂ ಕಳ್ಳರು ಅನ್ನೋದು ಸರಿಯಲ್ಲ. ಬೇಲಿನೇ ಎದ್ದು ಹೊಲ ಮೇಯ್ತಾ ಇದ್ದಾರೆ ಅಂದರೆ ಹೇಗೆ? ಒಳ್ಳೆ ಅಧಿಕಾರಿಗಳು ಇದ್ದಾರೆ.
ಎಲ್ಲರನ್ನೂ ಒಟ್ಟಿಗೆ ಸೇರಿಸೋದು ಬೇಡ ಎಂದರು. ಅಕ್ರಮದಲ್ಲಿ ಪೊಲೀಸರು ಶಾಮೀಲಾಗಿರೋರನ್ನು ಸೂಕ್ಷ್ಮವಾಗಿ ನೋಡ್ತೀವಿ. 88 ಜನರ ಮೇಲೆ ಕೇಸ್ ಹಾಕಲಾಗಿದೆ. ಎಫ್ಐಆರ್ ಹಾಕಲಾಗಿದೆ. ಅಮಾನತು ಮಾಡಲಾಗಿದೆ. ಬಂಧನ ಮಾಡಲಾಗಿದೆ. ಅನೇಕ ಕ್ರಮಗಳನ್ನ ನಾವು ತೆಗೆದುಕೊಂಡಿದ್ದೇವೆ. ಸಾವಿರಾರು ಕೋಟಿ ಡ್ರಗ್ಸ್ ಹಿಡಿದ್ದೇವೆ.
ಪೊಲೀಸ್ ಇಲಾಖೆ ಚೆನ್ನಾಗಿ ಕೆಲಸ ಮಾಡ್ತಿರೋದಕ್ಕೆ ನಮ್ಮ ರಾಜ್ಯ ಶಾಂತವಾಗಿದೆ. ಬೇರೆ ರಾಜ್ಯದ ಬಗ್ಗೆಯೂ ನೋಡಬೇಕು. ಅಕ್ರಮದಲ್ಲಿ ಭಾಗಿಯಾಗೋ ಪೊಲೀಸರನ್ನ ಅಮಾನತು ಅಲ್ಲ. ಅವರನ್ನ ಕೆಲಸದಿಂದ ವಜಾ ಮಾಡೋ ಕೆಲಸ ಮಾಡ್ತಾ ಇದ್ದೇವೆ ಅಂತ ತಿಳಿಸಿದರು.















